ರಂಗಾಂತರಂಗ
Team Udayavani, May 19, 2018, 1:07 PM IST
ರಂಗದ ಮೇಲೆ ಹೆಣ್ಣು ಪಾತ್ರಗಳನ್ನು ಮಾಡುವ ಗಂಡು ಪಾತ್ರದಾರಿಗಳ ಬದುಕು ಹೇಗಿರುತ್ತದೆ? ಇದೊಂಥರ ಕುತೂಹಲದ ವಿಚಾರ. ಏಕೆಂದರೆ, ಪಾತ್ರ ಅನ್ನೋದು ವೇದಿಕೆಗಷ್ಟೇ ಸೀಮಿತವಾಗಿರುವುದಿಲ್ಲ. ಖಾಸಗಿ ಬದುಕಲ್ಲೂ ಮಿಳಿತವಾಗಿರುತ್ತದೆ. ವೇದಿಕೆಗೆ ಏರುವ ಮೊದಲು ಪಾತ್ರ ಅಧ್ಯಯನ ನಡೆಯಬೇಕು. ಅನುಕರಿಸಬೇಕು. ಹೀಗಾಗಿ ಹೆಣ್ಣು ಪಾತ್ರಗಳನ್ನು ಮಾಡುವವರ ಖಾಸಗಿ ಬದುಕಲ್ಲೂ ಪಾತ್ರ ಪ್ರವೇಶ ಮಾಡಿಬಿಡುವ ಸಂಭವ ಹೆಚ್ಚು. ಹಿರಿಯ ಯಕ್ಷಗಾನ ಪಾತ್ರದಾರಿ ಮಂಟಪ ರಾಮಚಂದ್ರ ಉಪಾಧ್ಯಾಯ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಪಾತ್ರಕ್ಕೂ, ಬದುಕಿಗೂ ಗೆರೆ ಇದೆ, ಹಾಗಾಗಿ…
ಗಂಡು ವೇಷದಾರಿಯನ್ನು ರಂಗದ ಮೇಲೆ ಯಾರು ಬೇಕಾದರೂ ಮಾಡಿಯಾರು. ಹೆಣ್ಣಿನ ಪಾತ್ರ ಹಂಗಲ್ಲ. ಏಕೆಂದರೆ, ಹೆಣ್ಣಿಗೆ ಸೂಕ್ಷ್ಮಗಳು ಹೆಚ್ಚು. ಅವೆಲ್ಲವನ್ನೂ ಅರಗಿಸಿಕೊಂಡರೆ ಮಾತ್ರ ಹೆಣ್ಣು ವೇಶ ಮಾಡುವುದಕ್ಕೆ ಆಗುತ್ತೆ. ಗಮನಿಸೋದು ಅಂದರೆ ಹುಡುಕಿಕೊಂಡು ಹೋಗಿ ನೋಡೋದಲ್ಲ. ಅದು ಬದುಕಿನಂತೆ ಸರಳವಾಗಿ ಹಾಸುಹೊಕ್ಕಾಗಿರಬೇಕು. ಹೆಣ್ಣಿನ ಸಿಟ್ಟನ್ನೇ ನೋಡಿ, ಎಷ್ಟೊಂದು ವೈವಿಧ್ಯ. ಸಿಟ್ಟಲ್ಲೇ ನಗ್ತಾಳೆ, ವಾರಗಟ್ಟಲೇ ಸಿಟ್ಟಲ್ಲೇ ಇರ್ತಾಳೆ. ನಗುನಗುತ್ತಲೇ ಸಿಟ್ಟಾಗ್ತಾಳೆ. ದುಃಖದಲ್ಲೂ ಸಿಟ್ಟು ತೋರಿಸ್ತಾಳೆ. ಎಲ್ಲವನ್ನೂ ಪ್ರತ್ಯೇಕವಾಗಿ ನೋಡೋದಕ್ಕೆ ಆಗೋಲ್ಲ. ಅದು ಉಸಿರಾಟದಂತೆ ಸಹಜವಾಗಿರಬೇಕು.
ಸ್ತ್ರೀ, ಪುರುಷ ಅನ್ನೋದನ್ನು ಹೇಗೆ ಗುರುತಿಸುತ್ತೀರಿ? ಲಿಂಗದಿಂದ ಅಲ್ಲವೇ?
ಈ ಬೇಧಕ್ಕೆ ಲಿಂಗವಷ್ಟೇ ಅಲ್ಲ. ಭಾವವೂ ಮುಖ್ಯ. ಲಿಂಗದಿಂದ ಸ್ತ್ರೀ ಆದರಷ್ಟೇ ಸಾಲದು. ಭಾವದಿಂದಲೂ ಸ್ತ್ರೀಯಾಗಬೇಕು. ಪ್ರತಿ ಗಂಡಿನಲ್ಲೂ ಹೆಣ್ಣಿನ ಭಾವ ಇರ್ತದೆ. ಹೆಣ್ಣು ಅರ್ಥವಾಗಬೇಕಾದರೆ ಗಂಡಿನಲ್ಲೂ ಈ ಭಾವ ಇರಲೇಬೇಕು. ಇಲ್ಲವಾದರೆ ಹೆಣ್ಣು ಅರ್ಥವಾಗುವುದೇ ಇಲ್ಲ.
ಹಾಗಾದರೆ ನೀವು ಹೆಣ್ಣಿನ ಎಲ್ಲ ಹಾವಭಾವಗಳನ್ನೂ ಅನುಕರಿಸುತ್ತೀರಾ? ಹೀಗಂತ ಎಷ್ಟೋ ಜನ ಕೇಳಿದ್ದೂ ಇದೆ. ಒಬ್ಬ ಪಾತ್ರದಾರಿಗೆ ಗಮನಿಸೋದು, ಅನುಕರಿಸೋದು ಅನ್ನೋದರಲ್ಲಿ ಅರ್ಥವೇ ಇಲ್ಲ. ಇಲ್ಲಿ ಪಾತ್ರವಾಗುವುದು ಎಂದರೆ ಜೀವನಾನುಭವವೇ. ನಾವು ಯಾರಿಂದ, ಎಷ್ಟೇ ಕಲಿತರೂ ರಂಗದ ಮೇಲೆ ನಮ್ಮ ಅನುಭವವನ್ನು ಸೇರಿಸಿದರೆ ಮಾತ್ರ ಪಾತ್ರ ನಿಮ್ಮದಾಗೋದು. ಇದನ್ನು ಖುದ್ದು ನೋಡುವುದು, ಗಮನಿಸುವುದು ಆಹ್ವಾನಿಸುವುದು ಹೀಗೆಲ್ಲಾ ಮಾಡೋದಲ್ಲ. ಉದಾಹರಣೆಗೆ- ರಸ್ತೆಯ ಮೇಲೆ ನಾಯಿಯೊಂದು ಕಾಲು ಎಳೆದುಕೊಂಡು ಹೋಗುತ್ತಿದ್ದರೆ ನೋಡುಗರ ಕರುಳು “ಚುರ್’ ಅನ್ನುತ್ತದೆ. ಅಂದರೆ, ಅಂಥದೊಂದು ವರ್ತನೆ ಮಾನವೀಯತೆ ಇರುವರಿಗೆ ಸಹಜ ಕ್ರಿಯೆ. ಹಾಗೇನೇ ಪಾತ್ರಗಳು. ಸೌಂದರ್ಯ ಅನ್ನೋದು ರೂಪಕ್ಕೆ ಮಾತ್ರ ಸೀಮಿತವಲ್ಲ. ಕುರೂಪಿ ಅಜ್ಜಿ ಹೂ ಮುಡಿದು ಕೊಳ್ಳುವುದರಲ್ಲೂ ನಾನು ಸೌಂದರ್ಯ ಕಾಣುತ್ತೇನೆ. ಬದುಕಿನ ಎಲ್ಲಾ ಅನುಭವಗಳಲ್ಲೂ ಸೌಂದರ್ಯ ಇರುತ್ತದೆ.
ನೀವು ಏಕೆ ಬರೀ ಸ್ತ್ರೀ ಪಾತ್ರಗಳನ್ನು ಮಾಡ್ತೀರಿ? ಹೀಗಂತ ಈವರೆಗೆ ನೂರಾರು ಮಂದಿ ಕೇಳಿದ್ದಾರೆ. ನೋಡಿ, ನಾನು ಸ್ತ್ರೀ ಪಾತ್ರವನ್ನು ಬೇಕಂತಲೇ ಸ್ವೀಕರಿಸಲಿಲ್ಲ. ನಮ್ಮ ಕಾಲದಲ್ಲಿ ಯಕ್ಷಗಾನದ ಮೊದಲ ಮೆಟ್ಟಿಲು ಅಂದರೆ ಸ್ತ್ರೀವೇಷ. ಕೋಡಂಗಿ, ಬಾಲಗೋಪಾಲ, ಸಖೀವೇಷ ಮೊದಲು ಹಾಕುತ್ತಿದ್ದರು. ಆಮೇಲೆ ಪುರುಷವೇಷ, ಬಣ್ಣದವೇಷ ಅಂತ ಡೈವರ್ಟ್ ಆಗೋದು. ಈ ವೇಶಗಳನ್ನು ತಮ್ಮ ಅಭಿರುಚಿ, ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ನೀವು ಚಿಟ್ಟಾಣಿ, ಗೋಡೆ ಹೀಗೆ ಯಾರನ್ನೇ ಕೇಳಿ, ಎಲ್ಲರೂ ಆರಂಭದಲ್ಲಿ ಸ್ತ್ರೀ ವೇಷವನ್ನೇ ಮಾಡಿಯೇ ಉತ್ತುಂಗಕ್ಕೆ ಏರಿರುವುದು ಅನ್ನೋದು ತಿಳಿಯುತ್ತದೆ. ಆಗೆಲ್ಲಾ ಆಯ್ಕೆಗಳೇ ಇರಲಿಲ್ಲ.
ಈಗ ವೇಷ ಹಾಕುವ ಮೊದಲೇ ತಾವೇ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.
ನಾನೇನು ಸ್ತ್ರೀವೇಷ ಹಾಕಬೇಕು ಅಂತ ಕಲಿತವನಲ್ಲ. ಅವಕಾಶಗಳು ಬೇಗ ಸಿಗುತ್ತಿತ್ತು ಅನ್ನೋ ಕಾರಣಕ್ಕೆ ಅದರ ಚುಂಗನ್ನು ಹಿಡಿದುಕೊಂಡು ಹೋಗುತ್ತಿದ್ದೆ. ಅದರಲ್ಲೇ ಏನೋ ಒಂಥರ ಥ್ರಿಲ್, ಹೊಸತನ ಕಂಡಿತು. ನನ್ನದಲ್ಲದ ಭಾವ ಪ್ರದರ್ಶನ ಖುಷಿ ಕೊಟ್ಟಿತ್ತು ಅಷ್ಟೇ. ಹಾಗಾಗಿಯೇ ಹೆಣ್ಣು ಪಾತ್ರಗಳನ್ನು ಮಾಡುತ್ತಾ ಹೋದೆ. ನನ್ನ ಪ್ರಕಾರ ಗಂಡು ಹೆಣ್ಣಾಗೋದು ವಿಶಿಷ್ಟ ಅನುಭವ. ಹಾಗಂತ, ಗಂಡು ಪೂರ್ತಿ ಹೆಣ್ಣಾಗೋದು ಅಂದುಕೊಳ್ಳಬೇಡಿ. ಕೇವಲ ಭಾವನೆಯ ಪಲ್ಲಟ ಮಾತ್ರ. ಇದೊಂದು ಮಾನಸಿಕ ಕ್ರಿಯೆ ಅಷ್ಟೇ.
ಒಂದು ಹಂತದಲ್ಲಿ ಗಂಡು ಹೆಣ್ಣಾಗುವ ಪಾತ್ರದ ವಿಚಾರವಾಗಿ ಗೊಂದಲ ಏರ್ಪಟ್ಟಿತು. ಉತ್ತರಕ್ಕಾಗಿ ಎರಡು ಸಲ ಯಕ್ಷಗಾನದಿಂದ ದೂರ ನಿಂತೆ. ಆಗ ಸಿಕ್ಕವರು ಡಾ. ಶತಾವಧಾನಿ ಗಣೇಶ್.
“ನನಗೆ ಹೆಣ್ಣು ವೇಷ ಹಾಕುವುದು ಇಷ್ಟ. ಆದರೆ 50ರ ವಯಸ್ಸಾದ ಮೇಲೆ ಮಾಡಕ್ಕಾಗಲ್ಲ. ಸ್ವಲ್ಪ ದೀರ್ಘಾವಧಿಯಲ್ಲೂ ಈ ಪಾತ್ರವನ್ನು ಕಾಯ್ದು ಕೊಳ್ಳುವುದಕ್ಕೆ ನಿಮ್ಮ ಹತ್ತಿರ ಪರಿಹಾರವಿದೆಯೇ’ ಅಂತ ಗಣೇಶರನ್ನು ಕೇಳಿದೆ.
“ಉಂಟಲ್ಲ. ನಿಮಗೆ ಪಾತ್ರ ಮಾಡುವುದಕ್ಕೆ ಇಷ್ಟ ಇದೆ ಅಂತಾದರೆ ಅವಕಾಶವೂ ಇದೆ’
“ಹೇಗೆ?’
“ಏಕ ವ್ಯಕ್ತಿ ಪ್ರದರ್ಶನ ಮಾಡಿ’
“ಅದು ಯಕ್ಷಗಾನದಲ್ಲಿ ನಡಿಯೋಲ್ಲ. ಜನ ಎಷ್ಟು ಹೊತ್ತು ಅಂತ ಒಂದೇ ಪಾತ್ರ ನೋಡ್ತಾರೆ. ಅದರಲ್ಲೂ ಸ್ತ್ರೀ ವೇಷ ಅಂದಾಕ್ಷಣ ಜನ ಚಾ ಕುಡಿಯಲು ಹೋಗುವ ಕಾಲ ಇದು. ಇನ್ನು ಎರಡು ಗಂಟೆಗಳ ಕಾಲ ಯಾರು ತಾನೇ ಸ್ತ್ರೀ ವೇಶ ನೋಡ್ತಾರೆ?’
“ನೀವು ಹೆಣ್ಣು, ಗಂಡು ಅಂತ ವೇಷದಿಂದ ಹೇಳ್ತಿದ್ದೀರ. ರಂಗದ ಮೇಲೆ ವೇಷ, ಸೌಂದರ್ಯ ಹೆಚ್ಚು ಹೊತ್ತು ನಿಲ್ಲೋದಿಲ್ಲ. ಸೌಂದರ್ಯವನ್ನು ಕಣ್ಣಿಗೆ ಹೆಚ್ಚು ಇಟ್ಟುಕೊಳ್ಳೋಕೆ ಆಗೋದಿಲ್ಲ. ಹಾಗಾಗಿ, ಅದರಲ್ಲಿ ರೂಪ, ನೃತ್ಯ, ಅಭಿನಯ, ಭಾವ, ರಸ ಹೀಗೆ ಎಲ್ಲವನ್ನೂ ಸೇರಿಸುತ್ತಾ ಹೋಗಿ ‘ ಅಂದರು ಗಣೇಶ್. ಅವರ ಸಲಹೆಯ ನಂತರವೇ ಏಕ ವ್ಯಕ್ತಿ ಪ್ರದರ್ಶನ ಮುಂದುವರಿಸಿದೆ.
ನಿಜ ಹೇಳಬೇಕೆಂದರೆ, ಭಾವ ಅನ್ನೋದು ಒಳಗಿನಿಂದ ಬರೋದು. ಅದನ್ನು ಹೇಳಿಕೊಡಕ್ಕಾಗಲ್ಲ. ಪಾತ್ರದೊಳಗಿರುವ ಭಾವ, ರಸ ನೋಡುವ ಪ್ರೇಕ್ಷಕನ ಅನುಭವವಾದಾಗ ನಾವು ಮಾಡಿದ್ದು ಸಾರ್ಥಕ. ಸುಮಾರು ಒಂದು ಸಾವಿರದ ನಾನೂರು ಚಿಲ್ಲರೆ ನನ್ನ ಏಕವ್ಯಕ್ತಿ ಪ್ರದರ್ಶನದಲ್ಲಿ ಇದರ ಅನುಭವವಾಗಿದೆ.
ಇದಕ್ಕೆಲ್ಲಾ ದೊಡ್ಡ ಸಿದ್ಧತೆ ಬೇಕಲ್ಲವೇ? ಅಂತ ಅನಿಸಬಹುದು. ನಿಜ ಹೇಳಬೇಕೆಂದರೆ, ಈ ಕ್ಷೇತ್ರದಲ್ಲಿ ನನಗೆ ಒಂದಿಷ್ಟು ಅನುಭವ ಇರುವುದರಿಂದ ಇದಕ್ಕೆಲ್ಲಾ ಸಿದ್ಧತೆ ಬೇಡ. ಒಂದು ಪಕ್ಷ ಸಿದ್ಧತೆ ಮಾಡಿಕೊಂಡರೆ ಮನದಲ್ಲಿ ಹೀಗೇ ಮಾಡಬೇಕು ಎನ್ನುವ ಚೌಕಟ್ಟು ಮೂಡಿ, ಪದೇ ಪದೆ ರಂಗದ ಮೇಲೆ ಅದರ ನೆನಪು ಮಾಡಿಕೊಳ್ಳುವುದರಲ್ಲೇ ರಸಭಂಗವಾಗುವ ಸಾಧ್ಯತೆಯೇ ಹೆಚ್ಚು.
ಪಾತ್ರವಾಗುವಾಗ ನಾನು ಮಂಟಪ ರಾಮಚಂದ್ರ ಉಪಾಧ್ಯಾಯ ಆಗಿರಬಾರದು. ಈ ಪ್ರಾಪಂಚಿಕ ಐಡೆಂಟಿಟಿಯಿಂದ ಹೊರಗೆ ಬಂದಾಗ, ನಾನಿಲ್ಲದ ಸ್ಥಿತಿ ನಿರ್ಮಾಣವಾಗಿ, ಪಾತ್ರವಾಗುತ್ತೇನೆ. ಆಗಲೇ ಭಾವ, ರಸ ಸ್ಪುರಣೆ ಆಗುವುದು. ರಂಗದ ಮೇಲೆ ನಮಗೆ ಏನು ಅನುಭವವಾಗುತ್ತದೆಯೋ ಅದು ಹೆಣ್ಣು, ಗಂಡು, ಮುದುಕ, ಮುದುಕಿ, ಮಗು ಹೀಗೆ ಎಲ್ಲಾ ಥರದ ಶ್ರೋತೃಗಳಿಗೂ ಆಗುತ್ತದೆ.
ಯಕ್ಷಗಾನದ ಹೆಣ್ಣು ಪಾತ್ರಗಳು ನನಗೆ ಗಟ ಗಟ ನೀಡುಕುಡಿದಷ್ಟು ಸಲೀಸು. ಹೀಗಂದಾಗ, ಈ ಪಾತ್ರಗಳು ನಿಮ್ಮ ಬದುಕಿನ ಮೇಲೆ ಪ್ರಭಾವ ಬೀರಿರಬಹುದೇ? ಅನ್ನೋ ಪ್ರಶ್ನೆ ಎದ್ದೇಳುತ್ತದೆ. ನಿಜ ಹೇಳಬೇಕಂದರೆ, ಯಾವತ್ತೂ ಪ್ರಭಾವ ಬೀರಿಲ್ಲ. ಏಕೆಂದರೆ ಅದನ್ನು ನಾನು ವೃತ್ತಿಯಾಗಿ ತೆಗೆದುಕೊಂಡಿಲ್ಲ. ತೆಗೆದುಕೊಂಡಿದ್ದರೆ ಹಾಗೇ ಆಗುತ್ತಿತ್ತೋ ಏನೋ ಗೊತ್ತಿಲ್ಲ. ಮುಖ್ಯವಾಗಿ, ರಂಗದ ಮೇಲಿನ ಪಾತ್ರ ಹಾಗೂ ರಂಗದಿಂದ ಇಳಿದ ಮೇಲಿನ ನನ್ನ ಬದುಕಿನ ಪಾತ್ರ. ಈ ಎರಡಕ್ಕೂ ಗಡಿಗಳನ್ನು ಎಳೆದುಕೊಂಡಿದ್ದೇನೆ. ಹೀಗಾಗಿ ಇಂಥ ಗೊಂದಲ ನನ್ನಲ್ಲಿ ಮೂಡಲೇ ಇಲ್ಲ ಅನಿಸುತ್ತಿದೆ.
ಸಾಮಾಜಿಕ ಬದುಕಲ್ಲಿ ಈತ ಹೆಣ್ಣು ವೇಷ ಮಾಡುವವ ಅನ್ನೋದು ಯಾರಿಗೂ ಗೊತ್ತಾಗಬಾರದು. ನನ್ನ ಅಂಗಡಿಗೆ ಬರುವ ಯಾರಿಗೂ ನಾನು ಯಕ್ಷಗಾನ ಕಲಾವಿದ ಅನ್ನೋದು ಗೊತ್ತಾಗುವುದಿಲ್ಲ. ಏಕೆ ಗೊತ್ತಾಗಬೇಕು? ವೇದಿಕೆ ಇಳಿದ ಮೇಲೆ ಎಲ್ಲರ ಹಾಗೇ ನಾನು. ವೇದಿಕೆ ಬೇರೆ, ಬದುಕೇ ಬೇರೆ. ವೇದಿಕೆಯಲ್ಲಿನ ಪಾತ್ರಗಳನ್ನು ಬದುಕಿಗೆ ತಂದರೆ ಅದಕ್ಕೆ ಅರ್ಥವಿರುವುದಿಲ್ಲ.
ಸಮಸ್ಯೆ ಏನೆಂದರೆ, ಬಹುತೇಕ ಕಲಾವಿದರು ಪಾತ್ರವನ್ನು ಆವಾಹಿಸಿಕೊಂಡು, ಅದರಿಂದ ಹೊರಬರಲಾಗದೆ ಒದ್ದಾಡುತ್ತಾರೆ. ಇದರ ಅವಶ್ಯಕತೆ ಇಲ್ಲವೇ ಇಲ್ಲ. ಅಂಥವರಿಗೆ ರಂಗದ ಮೇಲಿನ ಹೆಣ್ಣು ಪಾತ್ರಗಳ ತಮ್ಮ ಬದುಕನ್ನೂ ನಿಯಂತ್ರಿಸುವ ಸಾಧ್ಯತೆಗಳು ಹೆಚ್ಚು. ಒಂದು ಸಲ ವೇದಿಕೆಯಿಂದ ಇಳಿದ ಮೇಲೆ ಮುಗಿದೇ ಹೋಯ್ತು. ಪಾತ್ರಕ್ಕೂ ನನಗೂ ಸಂಬಂಧವೇ ಇಲ್ಲ. ಒಂದು ಪಕ್ಷ ಸಾಮಾಜಿಕ ಜೀವನದಲ್ಲೂ ರಂಗದ ಮೇಲಿನ ಪಾತ್ರವನ್ನು ಕಲ್ಪಿಸಿಕೊಂಡೇ ನನ್ನ ನೋಡಿ ನಗ್ತಾರೆ ಅನ್ನೋದೇ ಆದರೆ ಅಂಥವರ ಬಗ್ಗೆ ನನಗೆ ಅನುಕಂಪ ಹುಟ್ಟುತ್ತೆ. ಕರುಣೆ ಹುಟ್ಟುತ್ತೆ. ಆದರೆ ಎಂದೂ ಸಿಟ್ಟು ಬರೋಲ್ಲ.
ಸ್ಪಷ್ಟವಾಗಿ ಹೇಳಬೇಕೆಂದರೆ, ರಂಗದ ಮೇಲೆ ನಿಜ ಜೀವನದ ಭಾವಗಳನ್ನು ತಂದರೆ ಅಸಹ್ಯವಾಗುತ್ತದೆ. ಹಾಗೆಯೇ, ಪಾತ್ರದ ಭಾವಗಳನ್ನು ನಿತ್ಯ ಬದುಕಲ್ಲಿ ರೂಡಿಸಿಕೊಂಡರೆ ಮತ್ತೂ ಅಸಹ್ಯವಾಗುತ್ತದೆ. ಎಷ್ಟೋ ಡ್ಯಾನ್ಸರ್ಗಳನ್ನು ನೋಡಿದ್ದೇನೆ. ಅವರು ರಂಗದ ಮೇಲೆ ನಡೆದಂತೆ ಹೊರಗಡೆಯೂ ಬಹಳ ಲಾಲಿತ್ಯಪೂರ್ಣವಾಗಿ ನಡೆದಾಡುತ್ತಾರೆ. ಅಂದರೆ ರಂಗದ ಮೇಲಿನ ಐಡೆಂಟಿಟಿಯನ್ನು, ತಮ್ಮ ಬದುಕಲ್ಲಿ ಸಾಬೀತು ಮಾಡುತ್ತಿರುತ್ತಾರೆ. ಇದರ ಅವಶ್ಯಕತೆ ನಿಜವಾದ ಕಲಾವಿದನಾದವನಿಗೆ ಬೇಕಿರುವುದಿಲ್ಲ. ಹೀಗೆ ಮಾಡುವುದರಿಂದ ರಂಗದ ಮೇಲಿನ ಪಾತ್ರಗಳು ನಮ್ಮ ಬದುಕುನ್ನು ಆಳುವ ಅಪಾಯಗಳು ಹೆಚ್ಚು.
ಈಗ ಈ ವಯಸ್ಸಲ್ಲಿ ಕುಮಾರಿಯ ಪಾತ್ರ ಮಾಡೋದು ಔಚಿತ್ಯವಲ್ಲ ಅಂತ ಅನಿಸಿದೆ. ಹೀಗಾಗಿ ಈಗ ಯಕ್ಷಗಾನ, ನಾಟಕಕ್ಕೆ ಪ್ರೇಕ್ಷಕನಾಗಿದ್ದೀನಿ. ಇದೂ ಕೂಡ ಒಂಥರಾ ಕಷ್ಟ. ನನ್ನೊಳಗೊಂದು ಅಹಂಕಾರ ಇರುತ್ತದೆ. ಅದನ್ನು ಮೊದಲು ನಾನು ಕಡಿದು ಕುಳಿತುಕೊಳ್ಳಬೇಕು. ಈಗ ಅದರಲ್ಲಿ ನಿರತನಾಗಿದ್ದೇನೆ.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ