ಹನುಮಗಿರಿಯ ಪಂಚಮುಖಿ ಆಂಜನೇಯ
Team Udayavani, Aug 11, 2018, 12:12 PM IST
ಪೂರ್ವದಲ್ಲಿ ಸಹ್ಯಾದ್ರಿ ಬೆಟ್ಟ ಸಾಲುಗಳ ರಮಣೀಯ ದೃಶ್ಯ ಮಲೆನಾಡಿನ ಹಚ್ಚನೆಯ ಹಸಿರು, ಪಶ್ಚಿಮದಲ್ಲಿ ಸಮುದ್ರ ಕರಾವಳಿಯ ಪ್ರಶಾಂತ ವಾತಾವರಣ , ಮಧ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಿಂದ ಕಾವು ಮಾರ್ಗವಾಗಿ 22 ಕಿ.ಮೀ ಸಾಗಿದಾಗ ಸಿಗುವ ರಮಣೀಯ ಪ್ರದೇಶವೇ ಈಶ್ವರಮಂಗಲ. ಇಲ್ಲಿರುವ ವಿದ್ಯಾ ಸಂಸ್ಥೆಗಳ ಜೊತೆಯಲ್ಲಿ ಚಾಚಿಕೊಂಡಿರುವ ಉನ್ನತ ಪ್ರದೇಶವೇ ಹನುಮಗಿರಿ.
ಇತಿಹಾಸ
ಮಹಾಶಕ್ತಿ ಸ್ವರೂಪಿಯಾಗಿರುವ ಶ್ರೀ ಆಂಜನೇಯ ಸ್ವಾಮಿ ನೆಲೆ ನಿಂತ ಪುಣ್ಯ ಕ್ಷೇತ್ರವೇ ಹನುಮಗಿರಿ. ಪ್ರಸ್ತುತ ವಿಶಾಲವಾದ ಸಭಾಭವನವನ್ನು ಹೊಂದಿರುವುದು ಕ್ಷೇತ್ರದ ಹೆಗ್ಗಳಿಕೆ.
ವಿಶ್ವದಲ್ಲೇ ಅತಿ ದೊಡ್ಡದಾದ ಆಂಜನೇಯ ಮೂರ್ತಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಅಂದರೆ, ಸುಮಾರು 13 ಅಡಿ ಎತ್ತರದ ಶ್ರೇಷ್ಠ ಕೃಷ್ಣ ಶಿಲೆಯಲ್ಲಿ ಕೆತ್ತಿದ ಪಂಚಮುಖೀ ಆಂಜನೇಯ ಏಕ ಶಿಲಾ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.
ಶ್ರೀರಾಮ-ಹನುಮರ ಜೀವನದ ದಿವ್ಯ ಸಂದೇಶವನ್ನು ಸಾರುವ ಕಲ್ಲು ಬಂಡೆಗಳಲ್ಲಿ ವಿಶ್ವದ ಏಕೈಕ ಶಿಲಾ ನಿರ್ಮಿತ ಮಾನಸೋದ್ಯಾನವಿದೆ. ಪುಟಾಣಿ ಮಕ್ಕಳಿಗೆ ಕುಣಿದು ಕುಪ್ಪಳಿಸಲು ಆಟದ ಸ್ಥಳವಿದೆ. ಹನುಮಂತ ದೇವರು, ನರಸಿಂಹ, ವರಾಹ, ಹಯಗ್ರೀವ ಮತ್ತು ಗರುಡ ಈ ಐದು ಮುಖಗಳನ್ನು ಹೊಂದಿದೆ. ಇಲ್ಲಿನ ಆಂಜನೇಯ ವಿಗ್ರಹದೊಂದಿಗೆ ಸಂಜೀವಿನಿ ಉದ್ಯಾನವನವಿರುವುದು ಇನ್ನೊಂದು ವಿಶೇಷ. ಹನುಮಂತನು ಸಂಜೀವಿನಿಗಾಗಿ ದ್ರೋಣಾಚಲವನ್ನು ಎತ್ತಿ ತಂದ ಸಾಹಸಮಯ ಕಾರ್ಯ ನೆನಪಿಸುವ ಸಂಜೀವಿನಿಯಂತಹ ಜೀವ ಸಂರಕ್ಷಕ ಗಿಡಮೂಲಿಕೆಗಳು, ಔಷಧೀಯ ಸಸ್ಯಗಳು ಇಲ್ಲಿವೆ. ಗೋವುಗಳ ಸಂರಕ್ಷಣೆಗೆ ಗೋವು ಶಾಲೆ ಕೂಡ ಸ್ಥಾಪನೆಯಾಗಿದೆ. ಹನುಮಂತನ ಮುಂದೆ ನಿಂತು, ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಎಲ್ಲಾ ಕಾಯಿಲೆ, ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.
ಸಾಂಸ್ಕೃತಿಕ ಕ್ಷೇತ್ರ
ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾಮ ಹನುಮರ ಪುಣ್ಯ ಚರಿತ್ರೆಯ ಪಠಣ, ಭಜನೆ, ಸಂಕೀರ್ತನೆ, ಪ್ರವಚನ, ಪಾರಾಯಣಗಳು ನಡೆಯುತ್ತಿರುತ್ತವೆ. ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ಈ ಸಂದರ್ಭದಲ್ಲಿ ಜನಸಾಗರವೇ ಹರಿದುಬರುತ್ತದೆ.
ವಿಶ್ವದಲ್ಲೇ ಅತಿ ಎತ್ತರದ್ದು ಎಂದು ಹೇಳಲಾಗುವ, 22 ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ರಚಿಸಲಾದ ಕೋದಂಡ ರಾಮನ ವಿಗ್ರಹ ಇಲ್ಲಿ ಪ್ರತಿಷ್ಠಾಪನೆಯಾಗಿದೆ. ಕ್ಷೇತ್ರದಲ್ಲಿ ಶನಿದೋಷ ನಿವಾರಣೆಗಾಗಿ, ಮುಖ್ಯ ಪ್ರಾಣ ಪೂಜೆಯೂ ನಡೆಯುತ್ತದೆ. ದೇವಾಲಯದಲ್ಲಿ ರಂಗಪೂಜೆಯು ನಡೆಯುತ್ತದೆ. ಇಲ್ಲಿ ವಿಶೇಷವಾಗಿ ಶ್ರೀ ಕ್ಷೇತ್ರದಲ್ಲಿ ಸಮಾಜದ ತೀರ ಹಿಂದುಳಿದ ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಉಚಿತ ವಸತಿ , ಆಹಾರ , ಶಿಕ್ಷ$ಣ, ಆರೋಗ್ಯ ಇತ್ಯಾದಿ ಸೌಲಭ್ಯಗಳನ್ನು ಸಂಸ್ಥೆ ನೋಡಿಕೊಳ್ಳುತ್ತದೆ. ವೈದ್ಯಕೀಯ ಚಿಕಿತ್ಸೆಯು ಉಚಿತವಾಗಿ ಲಭ್ಯವಿದೆ.
ಹನುಮಗಿರಿಯ ಹಚ್ಚ ಹಸುರಿನ ಉದ್ಯಾನ ವನ ವೀಕ್ಷಿಸಲು ಎರಡು ಕಣ್ಣು ಸಾಲದು. ಛಾಯಾಗ್ರಹಕರಿಗೆ ಹೇಳಿ ಮಾಡಿಸಿದ ಸ್ಥಳ. ಫೋಟೋ ತೆಗೆಯಲು ಆರಂಭಿಸಿದರೆ ಸಂಜೆ ಆದರೂ ಯಾರಿಗೂ ಅರಿವಿಲ್ಲದಂತೆ ಮನಸ್ಸಿಗೆ ಮುದ ನೀಡುವ ರಮಣೀಯ ಸ್ಥಳ.
ಹರ್ಷಿತಾ ಕುಲಾಲ ಕಾವು