ಅಖಾಡಕ್ಕೆ ಇಳಿದ ಸಿದ್ದರಾಮಯ್ಯ; 2 ಕಡೆ ರಹಸ್ಯ ಸಭೆ
Team Udayavani, Oct 5, 2017, 5:23 PM IST
ಮೈಸೂರು: ರಾಜಕೀಯವಾಗಿ ಹುಟ್ಟು, ಮರುಹುಟ್ಟು ಪಡೆದ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ತಮ್ಮ ರಾಜಕೀಯ ಜೀವನದ ಕಡೆಯ ಚುನಾವಣೆ ಎದುರಿಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣೆಗೆ ಇನ್ನೂ 6-7 ತಿಂಗಳಿರುವಾಗಲೇ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ತಮ್ಮ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳ ಮೇಲುಸ್ತುವಾರಿ ವಹಿಸಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡುವ ಮೂಲಕ 2 ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಗೆ ಅವಕಾಶ ನೀಡಿದ್ದ ಸಿದ್ದರಾಮಯ್ಯ, ಚುನಾವಣೆ ಹತ್ತಿರವಾದಂತೆ ಇದೀಗ ಸ್ವತಃ ತಾವೇ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.
ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮ ಇಲ್ಲದಿದ್ದರೂ ಮಂಗಳವಾರ ಮತ್ತು ಬುಧವಾರ ಮೈಸೂರು ಪ್ರವಾಸ ಕೈಗೊಂಡಿದ್ದ ಅವರು, ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಸಮುದಾಯಗಳ ಮುಖಂಡರನ್ನು ಕರೆಸಿಕೊಂಡು ಇದೇ ತನ್ನ
ಕಡೇ ಚುನಾವಣೆ, ಕೈಹಿಡಿಯಿರಿ ಎಂದು ಮನವಿ ಮಾಡಿದ್ದಾರೆ.
ಮಂಗಳವಾರ ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೇರವಾಗಿ ತಮ್ಮ ಮನೆಗೆ ತೆರಳಿ ಚಾಮುಂಡೇಶ್ವರಿ ಕ್ಷೇತ್ರದ ಕೆಲ ಮುಖಂಡರ ಜತೆಗೆ ಮಾತುಕತೆ ನಡೆಸಿದರು. ಸಂಜೆ ಹೂಟಗಳ್ಳಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಜಿಪಂ ಸದಸ್ಯ ರಾಕೇಶ್ ಪಾಪಣ್ಣ ಸೇರಿದಂತೆ ಹಲವು ಮುಖಂಡರ
ಮನೆಗಳಿಗೆ ಭೇಟಿ ನೀಡಿ, ಮಾತುಕತೆ ನಡೆಸಿದರು.
ರಾತ್ರಿ ಟಿ.ಕಾಟೂರಿನ ತಮ್ಮ ತೋಟದ ಮನೆಗೆ ಕ್ಷೇತ್ರದ ಒಕ್ಕಲಿಗ ಸಮುದಾಯದ ಆಯ್ದ ಕೆಲ ಮುಖಂಡರನ್ನು ಕರೆಸಿಕೊಂಡ ಸಿದ್ದರಾಮಯ್ಯ, 1983ರಿಂದಲೂ ತನ್ನ ಕೈಹಿಡಿದಿದ್ದೀರಿ. ಇದು ನನ್ನ ಜೀವನದ ಕಡೆ ಚುನಾವಣೆ ಗೆಲ್ಲಿಸಿಕೊಡಿ, 2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ವರುಣ ಕ್ಷೇತ್ರಕ್ಕೆ ಹೋದ ಸನ್ನಿವೇಶ ಹಾಗೂ ಕ್ಷೇತ್ರ ಬಿಟ್ಟರೂ ಇಲ್ಲಿನವರ ಜತೆಗಿನ ಬಾಂಧವ್ಯ ಬಿಟ್ಟಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೀಡಿರುವ ಬಗ್ಗೆ ಹಾಗೂ ಈ ಹಿಂದೆ ರಾಜಶೇಖರಮೂರ್ತಿ ಅವರು ಪ್ರತಿನಿಧಿಸಿದ್ದಾಗ ಕ್ಷೇತ್ರ ಹೇಗಿತ್ತು. ಜೆಡಿಎಸ್ನ ಜಿ.ಟಿ.ದೇವೇಗೌಡ ಶಾಸಕರಾಗಿದ್ದರೂ ತನ್ನದೇ ಕ್ಷೇತ್ರ ಎಂಬ ಕಾರಣಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಅನುದಾನ ಕೊಟ್ಟಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
2018ರಲ್ಲಿ ತನ್ನ ನೇತೃತ್ವದಲ್ಲೇ ಚುನಾವಣೆಗೆ ಹೋಗಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿರುವುದರಿಂದ ತನ್ನ ಜವಾಬ್ದಾರಿ ಹೆಚ್ಚಿದೆ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಡರಾತ್ರಿ ವರೆಗೆ ಸಭೆ ನಡೆಸಿದ್ದರಿಂದ ರಾತ್ರಿ ಟಿ.ಕಾಟೂರಿನ ತೋಟದ ಮನೆಯಲ್ಲೇ ವಾಸ್ತವ್ಯಹೂಡಿದ್ದ ಸಿದ್ದರಾಮಯ್ಯ, ಬೆಳಗ್ಗೆ ನಗರದ ತೊಣಚಿಕೊಪ್ಪಲು ಬಡಾವಣೆ ನಿವಾಸಕ್ಕೆ ಆಗಮಿಸಿ
ಉಪಾಹಾರದ ನಂತರ ಜನರ ಅಹವಾಲು ಸ್ವೀಕರಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯದರ್ಶಿ ಮಳವಳ್ಳಿ ಶಿವಣ್ಣ, ಸಚಿವ ಡಾ.ಎಚ್.ಮಹದೇವಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಗಿರೀಶ್ ಹುಣಸೂರು