83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ
Team Udayavani, Nov 22, 2017, 12:49 PM IST
ಮೈಸೂರು: ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಸಮಸ್ಯೆಗಳು-ಸಂಸ್ಕೃತಿಯನ್ನು ಬಿಂಬಿಸುವ ಹಲವು ಕಾರ್ಯಕ್ರಮ ಹಾಗೂ ಗೋಷ್ಠಿಗಳು ನಡೆಯಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.
27 ವರ್ಷಗಳ ನಂತರ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ 8.30ಕ್ಕೆ ಮಹಾರಾಜ ಕಾಲೇಜು ಮೈದಾನದ ಆವರಣದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಧ್ವಜಾರೋಹಣ ನೆರವೇರಿಸಲಿದ್ದು,
ನಂತರ ಬೆಳಗ್ಗೆ 9ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಆರಂಭವಾಗುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಚಾಲನೆ ನೀಡಲಿದ್ದು, ವಿವಿಧ ಜನಪದ ಕಲಾತಂಡಗಳೊಂದಿಗೆ ನಡೆಯುವ ಮೆರವಣಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತ್ಯಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭ: ಮಹಾರಾಜ ಕಾಲೇಜು ಮೈದಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 83ನೇ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಪೊ›.ಚಂದ್ರಶೇಖರ ಪಾಟೀಲ,
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ, ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್, ಸಚಿವರಾದ ಎಚ್.ಎಸ್.ಮಹದೇವಪ್ಪ, ಉಮಾಶ್ರೀ, ತನ್ವೀರ್ಸೇಠ್, ಎಂ.ಸಿ.ಮೋಹನಕುಮಾರಿ, ವಿರೋಧಪಕ್ಷ ನಾಯಕ ಜಗದೀಶ್ ಶೆಟ್ಟರ್, ಮೇಯರ್ ಎಂ.ಜೆ.ರವಿಕುಮಾರ್ ಸೇರಿದಂತೆ ಹಲವರು ಬಾಗವಹಿಸಲಿದ್ದಾರೆ.
ಪ್ರಧಾನ ವೇದಿಕೆ ಗೋಷ್ಠಿಗಳು: ಸಮ್ಮೇಳನದ ಉದ್ಘಾಟನಾ ಸಮಾರಂಭದ ಬಳಿಕ ಪ್ರಧಾನ ವೇದಿಕೆಯಲ್ಲಿ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿದೆ. ಮಧ್ಯಾಹ್ನ 2ಕ್ಕೆ ಪೊ›.ಜಿ.ಎಸ್.ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶಿಕ್ಷಣ:ವರ್ತಮಾನದ ಸವಾಲುಗಳು, ಮಧ್ಯಾಹ್ನ 3.30ಕ್ಕೆ ಡಾ.ಧರಣಿದೇವಿ ಮಾಲಗತ್ತಿ ಅಧ್ಯಕ್ಷತೆಯಲ್ಲಿ ದಲಿತ ಲೋಕ ದೃಷ್ಠಿ ಹಾಗೂ ಸಂಜೆ 5ಕ್ಕೆ ಎಚ್.ಆರ್.ರಂಗನಾಥ್ ಅಧ್ಯಕ್ಷತೆಯಲ್ಲಿ ಮಾಧ್ಯಮ: ಮುಂದಿರುವ ಸವಾಲುಗಳು ವಿಷಯದ ಕುರಿತ ಗೋಷ್ಠಿಗಳು ನಡೆಯಲಿದೆ.
ನ.25ರಂದು ಬೆಳಗ್ಗೆ 9.30ಕ್ಕೆ ಡಾ.ವಿಜಯಾ ಅಧ್ಯಕ್ಷತೆಯಲ್ಲಿ ಮಹಿಳೆ: ಹೊಸಲೋಕ ವೀಮಾಂಸೆ, ಬೆಳಗ್ಗೆ 11ಕ್ಕೆ ಪೊ›.ಬಿಸಿಲಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೃಷಿ: ಸಂಕ್ರಮಣ ಸ್ಥಿತಿ, ಮಧ್ಯಾಹ್ನ 12:30ಕ್ಕೆ ಡಾ.ಬಿ.ಎ.ವಿವೇಕ ರೈ ಅಧ್ಯಕ್ಷತೆಯಲ್ಲಿ ಕನ್ನಡ ಸಂಶೋಧನೆ ಮತ್ತು ವಿಮರ್ಶೆ ಹಾಗೂ ಮಧ್ಯಾಹ್ನ 2:30ಕ್ಕೆ ಡಾ.ಸಿ.ಎಸ್.ದ್ವಾರಕನಾಥ್ ಅಧ್ಯಕ್ಷತೆಯಲ್ಲಿ ಸಾಮಾಜಿಕ ನ್ಯಾಯ: ಕನ್ನಡ ಪರಂಪರೆ ವಿಷಯದ ಬಗ್ಗೆ ಗೋಷ್ಠಿಗಳು ನಡೆಯಲಿದೆ.
ಸನ್ಮಾನ ಸಮಾರಂಭ: 2ನೇ ದಿನ ಸಂಜೆ 4.30ಕ್ಕೆ ಸನ್ಮಾನ ಸಮಾರಂಭ ನಡೆಯಲಿದ್ದು, ಸಮಾಜದ ವಿವಿಧ ಕ್ಷೇತ್ರಗಳ 100ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಗುವುದು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಾ.ಗೊ.ರು.ಚನ್ನಬಸಪ್ಪ, ಡಾ.ಮನು ಬಳಿಗಾರ್ ಅವರುಗಳು ಬಾಗವಹಿಸಲಿದ್ದಾರೆ ಎಂದರು.
ಕೊನೆಯ ದಿನದಂದು: ಸಮ್ಮೇಳನದ ಕಡೆಯ ದಿನವಾದ ನ.26ರಂದು ಬೆಳಗ್ಗೆ 9.30ಕ್ಕೆ ಡಾ.ಕಾಳೇಗೌಡ ನಾಗವಾರ ಅಧ್ಯಕ್ಷತೆಯಲ್ಲಿ ಸಮಕಾಲೀನ ಸಂದರ್ಭ: ಬಹುತ್ವದ ಸವಾಲುಗಳು ವಿಷಯದ ಬಗ್ಗೆ ಗೋಷ್ಠಿ ನಡೆಯಲಿದೆ. ಬೆಳಗ್ಗೆ 11ಕ್ಕೆ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಡಾ.ಜಯಂತ್ ಕಾಯ್ಕಿಣಿ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ನಂತರ ಮಧ್ಯಾಹ್ನ 2ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಕಸಾಪ ರಾಜಾÂಧ್ಯಕ್ಷ ಡಾ.ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ.
ಸಮಾರೋಪ ಸಮಾರಂಭ: ನ.26ರಂದು ಸಂಜೆ 4.15ಕ್ಕೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಅನಂತಕುಮಾರ್, ಸಚಿವ ಎಚ್.ಕೆ.ಪಾಟೀಲ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶ್ಮೂರ್ತಿ ಅವರು ಸಮಾರೋಪ ಬಾಷಣ ಮಾಡಲಿದ್ದು, ಸಮ್ಮೇಳನಾಧ್ಯಕ್ಷ ಪೊ›.ಚಂದ್ರಶೇಖರ ಪಾಟೀಲ, ಡಾ.ಮನು ಬಳಿಗಾರ್, ಸಚಿವ ಎಚ್.ಎಂ.ರೇವಣ್ಣ, ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹಾಗೂ ಮತ್ತಿತರರು ಅತಿಥಿಗಳಾಗಿ ಬಾಗವಹಿಸಲಿದ್ದಾರೆ.
ಇದಲ್ಲದೆ ಸಮ್ಮೇಳನದ ಅಂಗವಾಗಿ ಮಹಾರಾಜ ಕಾಲೇಜು ಶತಮಾನೋತ್ಸವ ಭವನ(ಸಮಾನಾಂತರ ವೇದಿಕೆ-1) ಹಾಗೂ ಕಲಾಮಂದಿರ(ಸಮಾನಾಂತರ ವೇದಿಕೆ-2)ರಲ್ಲಿ ವಿವಿಧ ಗೋಷ್ಠಿಗಳು ಹಾಗೂ ಕವಿಗೋಷ್ಠಿಗಳು ನಡೆಯಲಿದೆ ಎಂದು ಅವರು ತಿಳಿಸಿದರು.
1.5 ಲಕ್ಷ ಜನರ ನಿರೀಕ್ಷೆ: ರಾಜ್ಯದ ನಾನಾಕಡೆಗಳ 116 ಕಲಾತಂಡಗಳು ಸಮ್ಮೇಳನದಲ್ಲಿ ಬಾಗವಹಿಸಲಿದ್ದು, ಪ್ರತಿದಿನ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮೂರು ದಿನಗಳ ಸಮ್ಮೇಳನದಲ್ಲಿ ಒಟ್ಟು 1.5 ಲಕ್ಷ ಜನರು ಆಗಮಿಸುವ ನಿರೀಕ್ಷೆ ಹೊಂದಿದ್ದು, ಈಗಾಗಲೇ ನೋಂದಣಿ ಮಾಡಿಕೊಂಡಿರುವ 8,500 ಮಂದಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಸಮ್ಮೇಳನದ ಸಂದರ್ಭದಲ್ಲಿ ಊಟದ ವ್ಯವಸ್ಥೆಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಗಣ್ಯರು, ಸಾರ್ವಜನಿಕರು ಮತ್ತಿತರರಿಗೆ ನಾಲ್ಕು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ವೈ.ಡಿ.ರಾಜಣ್ಣ ತಿಳಿಸಿದರು.