ಗ್ಲೌಸ್, ಶೂ ಇಲ್ಲದೆ ಕಾರ್ಮಿಕರ ಕೆಲಸ
Team Udayavani, Jan 7, 2018, 6:00 PM IST
ನಂಜನಗೂಡು: ನಂಜನಗೂಡು ಸೇರಿದಂತೆ ಮೈಸೂರು ಜಿಲ್ಲಾದ್ಯಂತ ಸ್ವತ್ಛತಾ ಸರ್ವೇಕ್ಷಣೆ ಗುರುವಾರದಿಂದಲೇ
ಆರಂಭಗೊಂಡಿದೆ. ಆದರೆ, ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಕೈಗೆ ಗ್ಲೌಸ್, ಕಾಲಿಗೆ ಶೂ, ಕನಿಷ್ಠ ಚಪ್ಪಲಿಯೂ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ನಗರಸಭೆಯೂ ಕಣ್ಮುಚ್ಚಿಕೊಂಡು ಕುಳಿತಿದೆ.
ಇಲ್ಲಿನ ಚರಂಡಿ ಮಾನವನ ಮಲ ಮೂತ್ರ ಸೇರಿದ ತ್ಯಾಜ್ಯದಿಂದ ಕೂಡಿದೆ. ಈ ಚರಂಡಿಯ ಬಳಿ ಓಡಾಡುವವರೇ
ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿಯಿದೆ. ಆದರೆ, ಚರಂಡಿಗಳ ಹೊಲಸನ್ನು ಬರಿ ಕೈನಲ್ಲೇ
ಸ್ವತ್ಛಗೊಳಿಸುತ್ತಿದ್ದಾರೆ.
ನಗರಸಭೆ ವ್ಯಾಪ್ತಿಯ ಚರಂಡಿಗಳನ್ನು ಸ್ವತ್ಛ ಮಾಡುವ ಪೌರ ಕಾರ್ಮಿಕರಿಗೆ ನಗರಸಭೆ ಗ್ಲೌಸ್ ಹಾಗೂ ಶೂ ಸೇರಿದಂತೆ
ಸ್ವತ್ಛತಾ ಪರಿಕರ ನೀಡಬೇಕು. ಆದರೆ, ಮಹಾತ್ಮಗಾಂಧಿ ಶತಾಬ್ಧಿ ಹೆಸರಿನ ರಸ್ತೆ ಯ ಚರಂಡಿಯನ್ನು ಯಾವುದೇ ಪರಿಕರ ಇಲ್ಲದೆ ಸ್ವತ್ಛಗೊಳಿಸಲಾಗುತ್ತಿತ್ತು.
ಈ ಕುರಿತು ನಗರಸಭೆಯನ್ನು ಸಂಪರ್ಕಿಸಿದರೆ ನಮ್ಮ ಕೆಲಸಗಾರರು ಮಹಾತ್ಮ ಗಾಂಧಿ ಶತಾಬ್ಧಿ ಹೆಸರಿನ ರಸ್ತೆಯಲ್ಲಿ
ಸ್ವತ್ಛತಾ ಕಾರ್ಯ ಮಾಡುತ್ತಿಲ್ಲ ಎಂದು ಉತ್ತರ ನೀಡಿದೆ. ಇನ್ನು ನಗರಸಭೆಗೆ ಸೇರಿದ ಚರಂಡಿ ಸ್ವತ್ಛತೆ ಮಾಡಿಸುತ್ತಿರುವವರು ಈ ಹಿಂದೆ ರಸ್ತೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರು. ತಾವು ಮಾಡಿದ ಚರಂಡಿಗೆ ಸ್ಲಾಬ್ ಹಾಕಿಸಲು ಚರಂಡಿ ಸ್ವತ್ಛಗೊಳಿಸುತ್ತಿದ್ದಾರೆ.
ಚರಂಡಿ ಸ್ವತ್ಛತೆಗಾಗಿ ನಗರಸಭೆಯನ್ನು ಸಂಪರ್ಕಿಸಿದಾಗ ನಗರಸಭೆಯವರೇ ನೀಡಿದ ದೂರವಾಣಿಗೆ ಕರೆಮಾಡಿ ಕಾರ್ಮಿಕರನ್ನು ಕರೆತರಲಾಗಿದೆಯಂತೆ.
ಹೊಟ್ಟೆ ಪಾಡು ಏನು ಮಾಡೋಣ?: ಬರಿಗೈನಲ್ಲಿ ಚರಂಡಿ ಸ್ವತ್ಛಗೊಳಿಸುತ್ತಿರುವ ಕುರಿತು ಹೆಸರು ಹೇಳಲು ಇಚ್ಚಿಸದ
ಕಾರ್ಮಿಕ ಮಾತನಾಡಿ, ಹೊಟ್ಟೆ ಪಾಡು ಏನು ಮಾಡೋಣ, ಎನ್ನುತ್ತಾ ಕ್ಯಾಮರಾಕ್ಕೆ ಮಖ ಕೊಡದೇ ಫೋಟೋ ಬೇಡ ಬುದ್ಧಿ ಎಂದು ಅಲವತ್ತುಕೊಂಡ.
ನಮ್ಮ ಗಮನಕ್ಕೆ ಬಂದಿಲ್ಲ ಬರಿಗೈನಲ್ಲಿ ಚರಂಡಿ ಸ್ವತ್ಛತೆ ಮಾಡುವುದು ಅಪರಾಧ. ಈ ಕಾರ್ಯಕ್ಕೆ ತಾವೇ ನಗರಸಭೆಯನ್ನು ಸಂಪರ್ಕಿಸಿದ್ದು ಅವರು ನೀಡಿದ ದೂರವಾಣಿಗೆ ಕರೆ ಮಾಡಿ ಕಾರ್ಮಿಕರನ್ನು ಕರೆಸಿ ಕೆಲಸ ಮಾಡಿಸಲಾಗುತ್ತಿದೆ. ಅವರು ಬರಿ ಗೈನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಮ್ಮ ಗಮನಕ್ಕೆ ಬಂದೇ ಇಲ್ಲ ಎಂದು ರಸ್ತೆ ಕಾಮಗಾರಿ ಉಸ್ತುವಾರಿ ಲೋಕೋಪಯೋಗಿ ಎಂಜಿನಿಯರ್ ವಿಕಾಸ್ ತಿಳಿಸಿದ್ದಾರೆ.
ಶ್ರೀಧರ ಆರ್ ಭಟ್