ಮೊಬೈಲ್ ಬಳಕೆ ಮಕ್ಕಳಿಗೆ ಮಾರಕ
Team Udayavani, Jun 22, 2018, 12:43 PM IST
ನಂಜನಗೂಡು: ಭವಿಷ್ಯದ ಪ್ರಜೆಗಳಿಗೆ ಮೊಬೈಲ್ ಮಾರಕವಾಗಿದ್ದು, ಮೊಬೈಲ್ ಬಳಕೆ ಕಡಿಮೆ ಮಾಡಿ, ಪುಸ್ತಕ ಹಿಡಿಯುವಂತರಾಗಬೇಕು ಎಂದು ಬಾಲಕಿಯರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಚಿನ್ನಸ್ವಾಮಿ ತಿಳಿಸಿದರು.
ಮೈಸೂರಿನ ಗ್ರಾಮೀಣ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆ ಕಾಲೇಜಿಗೆ ನೀಡಿದ 400ಕ್ಕೂ ಹೆಚ್ಚು ಪುಸ್ತಕಗಳು, ಕಪಾಟು, ಮೇಜುಗಳನ್ನು ಸ್ವಿಕರಿಸಿದ ಅವರು ಮಾತನಾಡಿ, ಮೊಬೈಲ್ ವಿದ್ಯಾರ್ಥಿ ಜೀವನವನ್ನು ಕತ್ತಲೆಯತ್ತ ಕೊಂಡೊಯ್ದರೆ, ಪುಸ್ತಕ ಜ್ಞಾನಾರ್ಜನೆ ಸದಾ ಬೆಳಕಿನತ್ತ ಒಯ್ಯುತ್ತದೆ. ಅದಕ್ಕಾಗಿ ಮೊಬೈಲ್ ಬಳಕೆ ಬಿಟ್ಟು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ ಜೀವನದ ಅಮೂಲ್ಯ ಸಂಪತ್ತು ಎಂದು ಹೇಳಿದರು.
ಪುಸ್ತಕದಿಂದ ಜ್ಞಾನಾರ್ಜನೆ: ಮೈಸೂರಿನ ಗ್ರಾಮೀಣ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆ ಮುಖ್ಯಸ್ಥ ರವಿಚಂದ್ರ ಮಾತನಾಡಿ, ತಮ್ಮ ಸಂಸ್ಥೆ ಗ್ರಾಮೀಣ ಭಾಗದ ಶಿಕ್ಷಣ ಹಾಗೂ ಆರೋಗ್ಯದ ಅಭಿವೃದ್ಧಿ ಗಮನದಲ್ಲಿಟ್ಟು ಕಾರ್ಯನಿರ್ವಹಿಸುತ್ತಿದೆ. 14 ವರ್ಷಗಳಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಜಾnನಾರ್ಜನೆಗೆ ಪುಸ್ತಕ ಹಾಗೂ ಪರಿಕರಗಳನ್ನು ಹಸ್ತಾಂತರಿಸುತ್ತಿದ್ದೇವೆ.
ಇವುಗಳನ್ನು ಸದುಪಯೋಗ ಪಡಿಸಿಕೊಂಡು ಬುದ್ದಿವಂತರಾಗಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಸಂಸ್ಥೆಯ ಅನುಸೂಯಾ, ರಾಜೇಶ್ವರಿ, ಶಿಕ್ಷಕರಾದ ರವೀಶ ಮೂರ್ತಿ, ರಾಮಕೃಷ್ಣ ಸಭಾಹಿತ, ಎಸ್. ನಾಗೇಂದ್ರ, ನಿಂಗರಾಜು ಹಾಜರಿದ್ದರು.