ಅಣೆಕಟ್ಟೆ, ನಾಲೆ, ಕೆರೆಗಳ ಪರಿಶೀಲನೆ
Team Udayavani, Jun 23, 2018, 12:22 PM IST
ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ವ್ಯಾಪ್ತಿ ಮುಖ್ಯ ನಾಲೆ ಹಾಗೂ ಹೊಡಕೆಕಟ್ಟೆ ವ್ಯಾಪ್ತಿಯಲ್ಲಿ ಹೂಳೆತ್ತುವ ಕೆಲಸ ಆರಂಭಿಸಲು ಶಾಸಕ ಎಚ್.ವಿಶ್ವನಾಥ್ ಆದೇಶಿಸಿದರು.
ತಾಲೂಕಿನ ಕಟ್ಟೆಮಳಲವಾಡಿ ಅಣೆಕಟ್ಟೆ ಹಾಗೂ ನಾಲಾ ವ್ಯಾಪ್ತಿ, ಹೊಡಕೆಕಟ್ಟೆ, ಅಗ್ರಹಾರ ಕೆರೆಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ಮಾತನಾಡಿದ ಅವರು, ಟೆಂಡರುಗಳಿಗೆ ಕಾಯದೆ, ನಾಳೆಯಿಂದಲೇ ಕಾಮಗಾರಿ ಆರಂಭಿಸಬೇಕೆಂದು ಸೂಚಿಸಿದರು.
ಮುಖ್ಯಮಂತ್ರಿಗಳಿಗೆ ಮನವಿ: 11 ಕಿ.ಮೀ. ಹೊಡಕೆಕಟ್ಟೆ ಹೈಲೆವೆಲ್ ನಾಲೆಗಳ ಹಾಗೂ 17 ಕಿ.ಮೀ. ಕಟ್ಟೆಮಳಲವಾಡಿ ನಾಲೆಯ ಆಧುನೀಕರಣಕ್ಕೆ ಹಿಂದೆಯೇ 27 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ ಅನುದಾನ ಲಭ್ಯವಾಗಿರಲಿಲ್ಲ. ಇದೀಗ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆಂದರು.
49 ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಮರದೂರು ಬಳಿಯ ಲಕ್ಷ್ಮಣತೀರ್ಥ ನದಿಯಿಂದ ಬನ್ನಿಕುಪ್ಪೆ ಗ್ರಾಪಂ ಸೇರಿದಂತೆ ಬಿಳಿಕೆರೆ ಹೋಬಳಿಯ 49 ಕೆರೆಗಳಿಗೆ ನೀರು ತುಂಬಿಸುವ ಹಾಗೂ 25 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 65 ಕೋಟಿ ರೂ. ವೆಚ್ಚದ ಏತ ನೀರಾವರಿ ಯೋಜನೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಒಪ್ಪಿದ್ದಾರೆಂದು ತಿಳಿಸಿದರು.
ಹನಗೋಡು ನಾಲೆ ಆಧುನೀಕರಣ: ಹನಗೋಡು ಅಣೆಕಟ್ಟೆ ಹಾಗೂ 128 ಕಿ.ಮೀ ಉದ್ದದ ನಾಲೆಗಳ ಆಧುನೀಕರಣ ಕಾಮಗಾರಿಗೆ ಹಿಂದಿನ ಸರ್ಕಾರದ ಅವಧಿಯಲ್ಲೇ 146,79 ಕೋಟಿ ರೂ. ಅಮೃತ್ ಕನಕ್ಷನ್ಸ್ಗೆ ಟೆಂಡರ್ ನೀಡಲಾಗಿದೆ.
ಮಳೆಗಾಲವಾದ್ದರಿಂದ ಈ ಬೆಳೆಯ ನಂತರ ಡಿಸೆಂಬರ್ನಿಂದ ಆಧುನೀಕರಣ ಕಾಮಗಾರಿ ಆರಂಭವಾಗಲಿದೆ. ಈ ಕಾಮಗಾರಿಯಲ್ಲಿ ಅಣೆಕಟ್ಟು ಸೇರಿದಂತೆ ಮುಖ್ಯನಾಲೆ, ಅಡ್ಡಮೋರಿ, ಗಾಡಿ ಸೇತುವೆ ಸೇರಿದಂತೆ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಎಇಇ ಕುಶುಕುಮಾರ್ ಮಾಹಿತಿ ನೀಡಿದರು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಮಾದೇಗೌಡ, ತಾಪಂ ಇಒ ಕೃಷ್ಣಕುಮಾರ್, ಎಇಇಗಳಾದ ನರಸೇಗೌಡ, ಕುಶುಕುಮಾರ್, ಜಿಪಂ ಮಾಜಿ ಸದಸ್ಯ ರಾಮಕೃಷ್ಣೇಗೌಡ, ನಿಂಗರಾಜ ಮಲ್ಲಾಡಿ ಇತರರಿದ್ದರು.
ಲಕ್ಷ್ಮಣತೀರ್ಥ ಶುದ್ಧೀಕರಣ ರದ್ದು: ನಗರದ ಮಧ್ಯಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿ ಸ್ವತ್ಛಗೊಳಿಸಲು ಈ ಹಿಂದೆ ನದಿಯ ಎರಡೂ ಬದಿ ತಡೆಗೋಡೆ ನಿರ್ಮಿಸುವ 35 ಕೋಟಿ ರೂ. ವೆಚ್ಚದ ಯೋಜನೆ ಅವೈಜ್ಞಾನಿಕವಾಗಿದ್ದು, ತಜ್ಞರಿಂದ ತಾಂತ್ರಿಕ ಸಲಹೆ ಪಡೆದು ಹೊಸ ಯೋಜನೆ ರೂಪಿಸಲಾಗುವುದೆಂದು ಶಾಸಕ ವಿಶ್ವನಾಥ್ ತಿಳಿಸಿದರು.