ಮೈಸೂರು ರಸ್ತೆಗಳಲ್ಲಿ ಗಜಪಡೆ ತಾಲೀಮು
Team Udayavani, Sep 7, 2018, 11:24 AM IST
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಆಗಮಿಸಿರುವ ಅರ್ಜುನ ನೇತೃತ್ವದ ಗಜಪಡೆ ಮೈಸೂರಿನ ರಸ್ತೆಗಳಲ್ಲಿ ತಾಲೀಮು ಆರಂಭಿಸಿವೆ. ಗಜಪಡೆಯ ಆರೋಗ್ಯದ ಮೇಲೆ ನಿಗಾ ಇಡುವ ಜೊತೆಗೆ ಅವುಗಳ ಆರೈಕೆ ದೃಷ್ಟಿಯಿಂದ ಪ್ರತಿವರ್ಷದಂತೆ ಈ ವರ್ಷವೂ ತಾಲೀಮು ನಡೆಸುವ ಮುನ್ನ ಆನೆಗಳ ತೂಕ ಪರೀಕ್ಷೆ ಮಾಡಿಸಲಾಯಿತು.
ತೂಕ ಪರೀಕ್ಷೆ: ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನ ಬರೋಬ್ಬರಿ 5650 ಕೆ.ಜಿ ತೂಕದೊಂದಿಗೆ ತನ್ನ ಬಾಹುಬಲ ಪ್ರದರ್ಶಿಸಿದರೆ ಮೊದಲ ತಂಡದಲ್ಲಿ ಬಂದಿರುವ ಉಳಿದ ಆನೆಗಳಾದ ವರಲಕ್ಷ್ಮೀ 3120 ಕೆ.ಜಿ, ಧನಂಜಯ 4045 ಕೆ.ಜಿ.,ಗೋಪಿ 4435 ಕೆ.ಜಿ, ವಿಕ್ರಮ 3985 ಕೆ.ಜಿ, ಹಾಗೂ ಚೈತ್ರ 2920 ಕೆ.ಜಿ ತೂಕವಿದೆ.
ಕಳೆದ ವರ್ಷ 5250 ಕೆ.ಜಿ ತೂಕವಿದ್ದ ಅರ್ಜುನ, ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 400 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ವರ್ಷ 2830 ಕೆ.ಜಿ ತೂಕವಿದ್ದ ಕುಮ್ಕಿ ಅನೆ ವರಲಕ್ಷ್ಮೀ ಈ ವರ್ಷ 290 ಕೆ.ಜಿ ತೂಕ ಹೆಚ್ಚಿಸಿಕೊಂಡು 3120 ಕೆ.ಜಿ ತೂಗಿದೆ.
ಧನಂಜಯನಿಗೆ ಮೊದಲ ದಸರಾ: ಕಳೆದ ವರ್ಷ ಎರಡನೇ ತಂಡದಲ್ಲಿ ಕರೆತರಲಾಗಿದ್ದ ವಿಕ್ರಮ, ಚೈತ್ರ, ಗೋಪಿ ಆನೆಗಳನ್ನು ಈ ಬಾರಿ ಮೊದಲ ತಂಡದಲ್ಲೇ ಕರೆತರಲಾಗಿದೆ. ಇನ್ನು ದುಬಾರೆ ಆನೆ ಶಿಬಿರದ 35 ವರ್ಷ ಅಂದಾಜು ವಯಸ್ಸಿನ ಧನಂಜಯ ಆನೆಯನ್ನು ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಕರೆತರಲಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ.ನಾಗರಾಜ್, ಆನೆಗಳ ತೂಕ ಕಳೆದ ವರ್ಷಕ್ಕಿಂತ ಉತ್ತಮವಾಗಿದ್ದು, ಎಲ್ಲಾ ಆನೆಗಳೂ ಆರೋಗ್ಯವಾಗಿವೆ. ಅರ್ಜುನ ನೇತೃತ್ವದ ಮೊದಲ ತಂಡದ ಆನೆಗಳಿಗೆ ಗುರುವಾರದಿಂದಲೇ ತಾಲೀಮು ಆರಂಭಿಸಲಾಗಿದೆ.
ಅರ್ಜುನ ಮತ್ತು ವರಲಕ್ಷ್ಮೀ ಆನೆಗಳನ್ನು ಹೊರತುಪಡಿಸಿದರೆ, ನಾಲ್ಕು ಆನೆಗಳೂ ಈ ವರ್ಷ ಮೊದಲ ತಂಡದಲ್ಲಿ ಕರೆತರಲಾಗಿದೆ. ವಿಜಯದಶಮಿ ದಿನ ಆನೆಗಳು ಸುಮಾರು ಐದು ಗಂಟೆ ಕಾಲ, 5 ಕಿ.ಮೀ ದೂರ ಆನೆಗಳು ಮೆರವಣಿಗೆಯಲ್ಲಿ ಸಾಗಬೇಕಿರುವುದರಿಂದ ಅವುಗಳ ದೈಹಿಕ ಸಾಮರ್ಥ್ಯ ಅಳೆಯಲು ತಾಲೀಮು ಆರಂಭಿಸುವ ಮುನ್ನ ಹಾಗೂ ಜಂಬೂಸವಾರಿಯ ಹಿಂದಿನ ದಿನ ಆನೆಗಳನ್ನು ತೂಕ ಮಾಡಿಸಲಾಗುತ್ತದೆ.
ವಿಶೇಷ ಆರೈಕೆ: ಗುರುವಾರದಿಂದ ಆನೆಗಳಿಗೆ ವಿಶೇಷ ಆರೈಕೆ ನೀಡಲಾಗುತ್ತಿದೆ. ಬೆಲ್ಲ, ತೆಂಗಿನಕಾಯಿ, ಮುದ್ದೆ, ಭತ್ತದ ಕುಸುರೆ, ಬೆಣ್ಣೆ ಸೇರಿದಂತೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಿನ್ನಿಸಲಾಗುತ್ತದೆ. ಆನೆಗಳ ಮಾವುತರು ಮತ್ತು ಕಾವಾಡಿಗಳು ಆನೆಗಳಿಗೆ ನಿತ್ಯ ಮೈತೊಳೆದು ಹಣೆಗೆ ಹರಳೆಣ್ಣೆ ಹಚ್ಚಿ, ಭತ್ತದ ಕುಸುರೆ ತಿನ್ನಿಸಿ ವಿಶೇಷ ಆರೈಕೆ ಮಾಡುತ್ತಾರೆ ಎಂದರು.
ಎರಡನೇ ತಂಡದ ಆನೆಗಳು ಸೆ.14ರಂದು ಆಗಮಿಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಆನೆಗಳಿಗೆ ಭಾರ ಹೊರುವ ಹಾಗೂ ಮರದ ಅಂಬಾರಿ ಹೊರುವ ತಾಲೀಮು ನೀಡಲಾಗುವುದು ಎಂದು ತಿಳಿಸಿದರು.