ವೈದ್ಯರಿಗೆ ಮಾನವೀಯತೆಯೇ ಮಾನದಂಡವಾಗಲಿ
Team Udayavani, Sep 24, 2018, 11:37 AM IST
ಮೈಸೂರು: ಆರೋಗ್ಯ ಕ್ಷೇತ್ರವೂ ವ್ಯಾಪಾರೀಕರಣವಾಗಿ ಜನರು ವೈದ್ಯರ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಮಾನವೀಯತೆಗೆ ಮೊದಲ ಆದ್ಯತೆ ನೀಡಿರುವ ಜಯದೇವ ಹೃದ್ರೋಗ ಆಸ್ಪತ್ರೆ ನಾನು ನಿರ್ಗಮಿಸಿದ ನಂತರವೂ ಮಾನವೀಯ ನೆಲೆಯಲ್ಲಿ ಮುಂದುವರಿಯಬೇಕು ಎಂದು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಆಶಯ ವ್ಯಕ್ತಪಡಿಸಿದರು.
ಡಾ.ಸಿ.ಎನ್.ಮಂಜುನಾಥ್ ಅಭಿನಂದನಾ ಸಮಿತಿಯಿಂದ ಭಾನುವಾರ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕನಾಗಿ ಕಳೆದ 12 ವರ್ಷಗಳಲ್ಲಿ ನನ್ನ ಗಮನಕ್ಕೆ ಬಂದಂತೆ ಹಣಕ್ಕೋಸ್ಕರ ಚಿಕ್ಸಿತೆ ನೀಡದೆ ಯಾರನ್ನೂ ಹಿಂದಕ್ಕೆ ಕಳುಹಿಸಿಲ್ಲ ಎಂದರು.
ಬಡ ರೋಗಿಗಳನ್ನು ದಾಖಲೆಗಳಿಂದಲ್ಲ, ಕಣ್ಣುಗಳಿಂದ ಗುರುತಿಸಬೇಕು. ಕಾನೂನಿನ ಪುಸ್ತಕದಲ್ಲಿ ಹಲವಾರು ತಪ್ಪುಗಳಿದ್ದರೂ ಅವುಗಳನ್ನು ಸರಿಪಡಿಸುವ ಬದಲಿಗೆ ಅದನ್ನೇ ಅನುಸರಿಸುವುದು ಸರಿಯಲ್ಲ. ಮಾನವೀಯತೆಯೇ ಮಾನದಂಡ, ಕಾನೂನಾಗಬೇಕು ಎಂದು ತಿಳಿಸಿದರು.
ಹೊಸ ಮೆಡಿಕಲ್ ಕಾಲೇಜು ಬೇಡ: ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸಮರ್ಪಕವಾಗಿ ಕೆಲಸ ಮಾಡಬೇಕಾದರೆ ಸರ್ಕಾರಗಳು ಹೊಸದಾಗಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದನ್ನು ನಿಲ್ಲಿಸಿ, ಇರುವ ವೈದ್ಯಕೀಯ ಕಾಲೇಜುಗಳನ್ನು ಬಲವರ್ಧನೆಗೊಳಿಸುವ ಕೆಲಸವಾಗಬೇಕು.
ಹೊಸ ಕಾಲೇಜುಗಳ ಹೆಸರಿನಲ್ಲಿ ಕೇವಲ ಕಟ್ಟಡಗಳನ್ನು ಕಟ್ಟುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲಿನ ಆಡಳಿತ ವ್ಯವಸ್ಥೆಯಲ್ಲೂ ವಿಕೇಂದ್ರೀಕರಣಕ್ಕೆ ಅವಕಾಶ ನೀಡಬೇಕು. ನಿಧಾನಗತಿಯ ಕೆಲಸದಿಂದ ಒಳ್ಳೆಯದಾಗುವುದಿಲ್ಲ. ಹೀಗಾಗಿ ಆರ್ಥಿಕ ಮತ್ತು ಆಡಳಿತಾತ್ಮಕ ವಿಕೇಂದ್ರೀಕರಣ ಮುಖ್ಯ ಎಂದರು.
ಸಂಸ್ಥೆಗಳಿಗೆ ಹಿರಿತನದ ಆಧಾರದ ಮೇಲೆ ನಿರ್ದೇಶಕ ಹುದ್ದೆಗೆ ನೇಮಕ ಮಾಡುವ ಬದಲಿಗೆ ಸಂಸ್ಥೆಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬಲ್ಲ ನಾಯಕತ್ವ ಗುಣವುಳ್ಳವರಿಗೆ ನಿರ್ದೇಶಕ ಹುದ್ದೆ ಕೊಡಬೇಕು. ಹಿರಿತನದ ಆಧಾರದ ಮೇಲೆ ನಿರ್ದೇಶಕರಾಗಿ ಬಂದವರೂ ಆಸ್ಪತ್ರೆಯ ಸುಧಾರಣೆಗೆ ಒತ್ತು ನೀಡಬೇಕು. ಪಾರದರ್ಶಕತೆಯಿಂದ ಕೆಲಸ ಮಾಡುವಾಗ ಸುಧಾರಣೆಗೆ ಹಿಂಜರಿಯಬಾರದು ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಡಾ.ಸಿ.ಎನ್.ಮಂಜುನಾಥ್ ರಾಜಕೀಯ ಸೋಂಕಿಲ್ಲದೆ, ಎಲ್ಲರ ವಿಶ್ವಾಸವನ್ನೂ ಗಳಿಸಿ-ಉಳಿಸಿಕೊಂಡಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಅವರಿಗೆ ಒತ್ತಾಯ ಮಾಡಿ ಮೈಸೂರಿನಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒತ್ತಾಯ ಮಾಡಿ ಕಲಬುರ್ಗಿಯಲ್ಲಿ ಸುಸಜ್ಜಿತ ಆಸ್ಪತ್ರೆ ಮಾಡಿದ್ದಾರೆ. ಅವರು ರಾಜಕೀಯ ಸೋಂಕಿಲ್ಲದೆ ಎಲ್ಲರ ವಿಶ್ವಾಸಗಳಿಸಿರುವುದರಿಂದಲೇ ಯಡಿಯೂರಪ್ಪ ಅವರೂ ಶಿವಮೊಗ್ಗದಲ್ಲಿ ಜಯದೇವ ಆಸ್ಪತ್ರೆ ಶಾಖೆ ತೆರೆಯುವಂತೆ ಕೋರಿದ್ದರು ಎಂದು ತಿಳಿಸಿದರು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಡಾ.ಸಿ.ಎನ್.ಮಂಜುನಾಥ್ ಹೃದಯ ಕ್ಷೇತ್ರದ ಕೃಷಿಕ, ಕೃಷಿ-ಕಸಿ ಎರಡನ್ನೂ ಮಾಡುತ್ತಾ ಬಂದಿರುವ ಅವರನ್ನು ಹೃದಯ ಕ್ಷೇಮಪಾಲಕ ಎಂದು ಕರೆಯಬಹುದು ಎಂದು ಹೇಳಿದರು. ಸುತ್ತೂರು ಮಠಾಧೀಶರಾದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಡಾ.ಅನಸೂಯ ಉಪಸ್ಥಿತರಿದ್ದರು.