ಮನುಧರ್ಮ ನೀತಿಯಿಂದ ದೇಶ ಮುಕ್ತಿಗೊಳಿಸಿ
Team Udayavani, Oct 23, 2018, 11:48 AM IST
ಹುಣಸೂರು: ದಲಿತ ಸಮುದಾಯದ ಅಸ್ಮಿತೆಯನ್ನು ಗುರುತಿಸಿದಲ್ಲಿ ಮಾತ್ರ ಭಾರತೀಯ ಪ್ರಜಾಪ್ರಭುತ್ವವು ಮೌಲ್ಯಯುತವಾಗಿ ನಿಲ್ಲಲು ಮತ್ತು ಸಾರ್ಥಕತೆ ಪಡೆಯಲು ಸಾಧ್ಯವೆಂದು ಮೈಸೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಜೆ.ಸೋಮಶೇಖರ್ ಅಭಿಪ್ರಾಯಪಟ್ಟರು.
ಸೋಮವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಸಂಸ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ನಿರಾಕರಣೆ ಮತ್ತು ದಲಿತ ಸಂಘರ್ಷದ ಸವಾಲುಗಳು ಕುರಿತ ವಿಚಾರ ಸಂಕಿರಣ ಮತ್ತು ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಭಾರತ ಇಂದು ಅಭಿವೃದ್ಧಿಯತ್ತ ನಾಗಾಲೋಟದಿಂದ ಸಾಗುತ್ತಿದೆ. ಆದರೆ ಅಂಬೇಡ್ಕರ್ ನೀಡಿದ ಸಂವಿಧಾನದನ್ವಯ ಪ್ರಭುತ್ವ ನಿರ್ಮಾಣದಲ್ಲಿ ನಾವೆಲ್ಲರೂ ಸೋತಿದ್ದೇವೆ. ಮುಖ್ಯವಾಗಿ ದಲಿತ ಹೋರಾಟಗಳು, ಚಳವಳಿಗಳು ಸೋತಿವೆ. ಸಂವಿಧಾನ ಮಹಿಳಾ ಸಮಾನತೆಯನ್ನು ನೀಡಿದ್ದರೂ, ಅದನ್ನು ದೇಶದ ಸವೋತ್ಛ ನ್ಯಾಯಲಯ ಪ್ರತಿಪಾದಿಸುತ್ತಿದ್ದರೂ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶಾವಕಾಶ ನೀಡದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ವಿಷಾದಿಸಿದರು.
ದಸಂಸ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ಭಾರತವನ್ನು ಮನುಧರ್ಮ ನೀತಿಯಿಂದ ಮುಕ್ತಿಗೊಳಿಸಬೇಕಿದೆ. ಅಂಬೇಡ್ಕರ್ ಸಂವಿಧಾನವನ್ನು ವಿಫಲಗೊಳಿಸುವತ್ತ ಕೆಲ ವ್ಯಕ್ತಿ ಮತ್ತು ಶಕ್ತಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ.
ದೇಶದಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ. ದಲಿತ ಸಮುದಾಯ ಇಂದಿಗೂ ಸವಾಲು, ಮೂಢನಂಬಿಕೆಗಳನ್ನು ಅನುಸರಿಸುತ್ತಿರುವುದರಿಂದ ಮನುಶಾಸ್ತ್ರದ ಕೊಳಕು ನಮ್ಮ ಮನದಲ್ಲಿ ಬೆಳಕನ್ನು ಮೂಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ರತ್ನಪುರಿ ಪುಟ್ಟಸ್ವಾಮಿ, ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಶಂಭುಲಿಂಗಸ್ವಾಮಿ, ಶಿವಕುಮಾರ್ ಬೀರನಹಳ್ಳಿ, ಮಹಿಳಾ ಸಂಚಾಲಕಿ ಆರ್.ಶಾಂತಮ್ಮ, ಡೇವಿಡ್ ರತ್ನಪುರಿ, ಮಹದೇವಮ್ಮ, ಚಂದ್ರಪ್ರಭಾ ಇತರರು ಇದ್ದರು.