ಅರಮನೆಯಲ್ಲಿ ವಿಜಯದಶಮಿ ಸಂಭ್ರಮ
Team Udayavani, Oct 23, 2018, 11:48 AM IST
ಮೈಸೂರು: ರಾಜ ಮನೆತನದವರ ನಿಧನದ ಹಿನ್ನೆಲೆಯಲ್ಲಿ ವಿಜಯದಶಮಿ ದಿನ ಮುಂದೂಡಿದ್ದ ಧಾರ್ಮಿಕ ಆಚರಣೆಗಳನ್ನು ಸೋಮವಾರ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಸೋಮವಾರ ಬೆಳಗ್ಗಿನಿಂದಲೇ ಅರಮನೆಯಲ್ಲಿ ಧಾರ್ಮಿಕ ಆಚರಣೆಗಳು ಆರಂಭವಾದವು. ಅರಮನೆಯ ಕನ್ನಡಿತೊಟ್ಟಿಯಲ್ಲಿ ಚಾಮುಂಡೇಶ್ವರಿ ಪೂಜೆ, ರಾಮಾಯಣ ಪಾರಾಯಣ ಪೂಜೆ ನಡೆದು ಧಾರೆ ಎರೆಯಲಾಯಿತು.
ಪ್ರಾಯಶ್ಚಿತ್ತ ಪವಮಾನ ಹೋಮ: ರಾಜಮನೆತನಕ್ಕೆ ಸೇರಿದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿ$ದೇವಿ ಹಾಗೂ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಅವರು ನಿಧನರಾದ ಹಿನ್ನೆಲೆಯಲ್ಲಿ ಪ್ರಾಯಶ್ಚಿತ್ತ ಪವಮಾನ ಹೋಮ ನಡೆಸಲಾಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರು ಪೂಜೆಯಲ್ಲಿ ಭಾಗಿಯಾದರು.
ಪ್ರಮೋದಾದೇವಿ ಒಡೆಯರ್ ಅವರು ಮೊಮ್ಮಗ ಆದ್ಯವೀರ ಒಡೆಯರ್ರನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಾರ್ಗದರ್ಶನ ಮಾಡಿದರು. ಕನ್ನಡಿ ತೊಟ್ಟಿಯಲ್ಲಿ ಪೂರ್ಣಾಹುತಿ ಹೋಮ ಸೇರಿದಂತೆ ಧಾರ್ಮಿಕ ಕಾರ್ಯಗಳು ಮುಗಿದ ಬಳಿಕ ಅರಮನೆಯ ಕಲ್ಯಾಣಮಂಟಪದಲ್ಲಿ ಹತ್ತು ನಿಮಿಷಗಳ ಕಾಲ ಖಾಸಾ ಆಯುಧಗಳಿಗೆ ಉತ್ತರಪೂಜೆ ನಡೆಸಿ ಬೂದು ಕುಂಬಳಕಾಯಿ (ಕುಷ್ಮಾಂಗ)ಒಡೆಯಲಾಯಿತು.
ವಜ್ರಮುಷ್ಠಿ ಕಾಳಗ: ಅರಮನೆಯ ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ನಡೆಯುತ್ತಿದ್ದರೆ, ಇತ್ತ ಅರಮನೆಯ ಸವಾರಿತೊಟ್ಟಿಯಲ್ಲಿ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗ ನಡೆಯಿತು. ಬೆಂಗಳೂರಿನ ರಾಘವೇಂದ್ರ ಜೆಟ್ಟಿಯ ಆಕ್ರಮಣಕ್ಕೆ ಚಾಮರಾಜನಗರದ ಪುರುಷೋತ್ತಮ ಜೆಟ್ಟಿ ತಲೆಯಿಂದ ರಕ್ತಚಿಮ್ಮುತ್ತಿದ್ದಂತೆ ರೋಚಕ ವಜ್ರಮುಷ್ಠಿ ಕಾಳಗ ಅಂತ್ಯಗೊಂಡಿತು.
ಬಳಿಕ ಕಲ್ಯಾಣಮಂಟಪದಿಂದ ವಿಜಯಯಾತ್ರೆಗೆ ಹೊರ ಬಂದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ವಜ್ರಮುಷ್ಠಿ ಕಾಳಗದಲ್ಲಿ ಪಾಲ್ಗೊಂಡಿದ್ದ ನಾಲ್ವರು ಜಟ್ಟಿಗಳು ಶಿರಭಾಗಿ ನಮಿಸಿದ್ದಲ್ಲದೆ, ಮಂಡಿಯೂರಿ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು.
ವಿಜಯಯಾತ್ರೆ ಆರಂಭ: ಕಲ್ಯಾಣಮಂಟಪದಿಂದ ಅರಮನೆ ಆವರಣದ ಜೈಭುವನೇಶ್ವರಿ ದೇವಸ್ಥಾನದ ಬಳಿ ಇರುವ ಬನ್ನಿಮರದ ತನಕ ಯಯಾತ್ರೆ ನಡೆಯಿತು. ರಾಜ ಪೋಷಾಕಿನಲ್ಲಿ ಪಟ್ಟದ ಕತ್ತಿ ಹಿಡಿದು ಕಲ್ಯಾಣಮಂಟಪದಿಂದ ಹೊರ ಬಂದ ಯದುವೀರ ಒಡೆಯರ್ ದರ್ಬಾರ್ಹಾಲ್ ಎದುರು ಸಿಂಗಾರಗೊಂಡಿದ್ದ ಬೆಳ್ಳಿರಥಕ್ಕೆ ಪಟ್ಟದ ಕತ್ತಿಯನ್ನು ಇರಿಸಿ, ರಾಜಮನೆತನದ ಕಾರಿನಲ್ಲಿ ವಿಜಯಯಾತ್ರೆ ಆರಂಭಿಸಿದರು.
ಈ ವೇಳೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸುಗಳು ಮುಂದೆ ಸಾಗಿದರೆ ಅವುಗಳ ಹಿಂದೆ ಪಟ್ಟದ ಕತ್ತಿ ಇದ್ದ ಬೆಳ್ಳಿರಥ ಸಾಗಿತು. ಯದುವೀರ್ ಅವರು ಸಾಗುತ್ತಿದ್ದ ಕಾರಿನ ಎದುರು ಪೊಲೀಸ್ ವಾದ್ಯ ವೃಂದದವರು ಹೆಜ್ಜೆ ಹಾಕಿದರೆ, ಚೌಕಿದಾರರು, ಕಟ್ಟಿಗೆಯವರು, ದೀವಟಿಗೆಯವರು ಯದುವೀರ್ ಒಡೆಯರ್ ಅವರಿಗೆ ಬಹುಪರಾಕ್ ಹಾಕುತ್ತಾ ಸಾಗಿದರು.
ಶಮಿಪೂಜೆ: ಅರಮನೆ ಆವರಣದಲ್ಲಿರುವ ಜೈಭುವನೇಶ್ವರಿ ದೇವಸ್ಥಾನದ ಒಳಾಂಣದಲ್ಲಿನ ಶಮಿವೃಕ್ಷಕ್ಕೆ ಅರಮನೆಯ ಜೋಯಿಷರಾದ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಯದುವೀರ್ ಶಮಿಪೂಜೆ ನೆರವೇರಿಸಿದರು. ಬಳಿಕ ವಿಜಯಯಾತ್ರೆ ವಾಪಸ್ ಬಂದು ಅರಮನೆಯ ಒಳಗೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಜಯಯಾತ್ರೆ ಮುಕ್ತಾಯಗೊಳಿಸಿದರು.