ರಫೇಲ್ ಡೀಲ್ನಲ್ಲಿ ಭ್ರಷ್ಟಾ ಚಾರ: ಪ್ರತಿಭಟನೆ
Team Udayavani, Oct 25, 2018, 5:18 PM IST
ಮೈಸೂರು: ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೇರವಾಗಿ ವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಹಾಗೂ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಸದಸ್ಯರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಸಿಪಿಐ ಕಾರ್ಯಕರ್ತರು, ಭಾರತದಲ್ಲಿ ರಫೇಲ್ ಯುದ್ಧ ವಿಮಾನಗಳ ಖರೀದಿ ಹಾಗೂ ಉತ್ಪಾದನೆಯಲ್ಲಿ ನಡೆದಿರುವ ಹಗರಣ ಬೆಳಕಿಗೆ ಬಂದಿದೆ. ಈ ಹಗರಣದಲ್ಲಿ ಮೋದಿ ಅವರೇ ನೇರವಾಗಿ ಅವ್ಯ ವಹಾರ ನಡೆಸಿರುವುದು ತಿಳಿದು ಬಂದಿದ್ದು, ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಹಾಗೂ ಭ್ರಷ್ಟಾಚಾರಗಳ ಸಮಗ್ರ ತನಿಖೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಯುಪಿಎ-2 ಸರ್ಕಾರ ಕೈಗೊಂಡಿದ್ದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮತ್ತು ತಂತ್ರಜ್ಞಾನದ ವರ್ಗಾವಣೆಯ ಷರತ್ತು ಹೊಂದಲಾಗಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಮಾಡಿರುವ ವ್ಯವಹಾರದಲ್ಲಿ ತಂತ್ರಜ್ಞಾನ ವರ್ಗಾವಣೆಯ ಷರತ್ತು ವಿಧಿಸಿಲ್ಲ. ಈಗ ಪ್ರಧಾನಿ ಅವರ ಮೇಕ್ ಇನ್ ಇಂಡಿಯಾ ಏನಾಯಿತು?, ನಾನೂ ತಿನ್ನಲ್ಲ, ತಿನ್ನಲು ಬಿಡುವುದಿಲ್ಲವೆಂದು ಘೋಷಣೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ದೇಶದ ಭದ್ರತೆಯನ್ನೇ ಅಡವಿಟ್ಟು ತಮ್ಮ ಆಪ್ತಮಿತ್ರ ಅಂಬಾನಿಗೆ ದೇಶವನ್ನು ಸುಲಿಗೆ ಮಾಡಲು ಹಾದಿ ಸುಗಮ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಹೀಗಾಗಿ ರಫೇಲ್ ಯುದ್ಧ ವಿಮಾನ ಖರೀದಿ ಹೊಣೆಯನ್ನು ಅಂಬಾನಿ ಅವರಿಗೆ ನೀಡಿರುವುದರಿಂದ ಇದರಲ್ಲಿ ಅವರ ಪಾಲೇನು? ಎಂಬ ಅನುಮಾನ ಜನರನ್ನು ಕಾಡುತ್ತಿದೆ. ರಾಷ್ಟ್ರದ ಭದ್ರತೆಗೆ ಧಕ್ಕೆ ತರಲಿರುವ ಹಾಗೂ ದೇಶದ ಬೊಕ್ಕಸವನ್ನು ಲೂಟಿ ಮಾಡುವ ರಫೇಲ್ ಯುದ್ಧ ವಿಮಾನದ ಖರೀದಿ ಉತ್ಪಾದನೆಯಲ್ಲಿ ಉಂಟಾಗಿರುವ ಅವ್ಯವಹಾರ ಮತ್ತು ಭ್ರಷ್ಟಾಚಾರಗಳ ಸಮರ್ಪಕ ತನಿಖೆ ನಡೆಯಬೇಕಿದೆ. ಅಲ್ಲದೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಉತ್ತರಿಸಬೇಕೆಂದು ಒತ್ತಾಯಿಸಿದರು.