ಕೌಶಲ್ಯ, ಪರಿಣತಿಯಿಲ್ಲದೆ ಉದ್ಯೋಗ ಸಿಗದು
Team Udayavani, Nov 18, 2018, 11:27 AM IST
ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯ ಹಾಗೂ ಪರಿಣಿತಿಯ ಕೊರತೆಯಿಂದಾಗಿ ಉದ್ಯೋಗ ಪಡೆಯುವವರ ಪ್ರಮಾಣ ಕ್ಷೀಣಿಸುತ್ತಿದೆ ಎಂದು ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ ಡಾ.ಎ. ಸೂರ್ಯಪ್ರಕಾಶ್ ತಿಳಿಸಿದರು.
ನಗರದ ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ(ಎಸ್ಜೆಸಿಇ) ಪ್ರಥಮ ಘಟಿಕೋತ್ಸವದಲ್ಲಿ ಭಾಗವಹಿಸಿ ಚಿನ್ನದ ಪದಕ, ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದ ಅವರು, ದೇಶದಲ್ಲಿ ವಿಶ್ವವಿದ್ಯಾನಿಲಯಗಳು ಹಲವು ಬಗೆಯ ಕೋರ್ಸ್ಗಳನ್ನು ನೀಡುತ್ತಿವೆ.
ಆದರೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಸಂಬಂಧಿಸಿದ ಕೌಶಲ್ಯ ಪಡೆಯುವಲ್ಲಿ ಹಿಂದುಳಿದಿದ್ದಾರೆ. ಇದರ ಪರಿಣಾಮ ವರ್ಷದಿಂದ ವರ್ಷಕ್ಕೆ ಪದವಿ ಮುಗಿಸಿದವರ ಪ್ರಮಾಣ ಹೆಚ್ಚಿದರೆ, ಉದ್ಯೋಗ ಪಡೆಯುವರ ಸಂಖ್ಯೆ ಇಳಿಮುಖವಾಗುತ್ತಿದೆ.
ದೇಶದಲ್ಲಿ ಶೇ.80 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವ್ಯಾಸಂಗಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದು, 2016-17ರ ವೇಳೆಗೆ 1.5 ಮಿಲಿಯನ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಯುಕೆ(ಯುನೈಟೆಡ್ ಕಿಂಗ್ಡಮ್)ಶೇ.20, ಅಮೆರಿಕಾದಲ್ಲಿ ಶೇ.30 ಮಾತ್ರ ಇಂಜಿನಿಯರಿಂಗ್ ಓದಲು ಆಸಕ್ತಿ ತೋರುತ್ತಿದ್ದಾರೆ ಎಂದರು.
ದೇಶದ ಯುವಜನರಲ್ಲಿ ಕೌಶಲ್ಯ ವೃದ್ಧಿಸುವ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಕೌಶಲ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರ ಮೂಲಕ 2022ರ ವೇಳೆಗೆ 400 ಮಿಲಿಯನ್ ಪುರುಷರು ಹಾಗೂ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ.
ಭಾರತ ಎದುರಿಸುತ್ತಿರುವ ಕೌಶಲ್ಯ, ಪ್ರತಿಭೆಗಳ ಕೊರತೆ ಎಷ್ಟಿದೆ ಎಂಬುದನ್ನು ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿವಿ ದಾಖಲಿಸುವ ವಿಷನ್ 2025 ಓದಿದರೆ ತಿಳಿಯುತ್ತದೆ. ಇದರ ಪ್ರಕಾರ ಶೇ.58 ಉದ್ಯೋಗಿಗಳು ಪ್ರತಿಭೆ ಇಲ್ಲದವರಾಗಿದ್ದಾರೆ.
ಕೇವಲ ಶೇ 2.3 ಜನರು ಕೌಶಲ್ಯ ತರಬೇತಿ ಪಡೆದಿದ್ದಾರೆ. ಭಾರತಕ್ಕೆ ಹೋಲಿಸಿದರೆ ಕೊರಿಯಾದಲ್ಲಿ ಶೇ.96, ಜಪಾನ್ ಶೇ.80, ಜರ್ಮನಿ ಶೇ.75, ಇಂಗ್ಲೆಂಡ್ ಶೇ.68, ಅಮೆರಿಕ ಶೇ.52 ಹೆಚ್ಚಿನ ಕೌಶಲ್ಯ ಪಡೆದವರಿದ್ದು, ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.
ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ(ಡಬ್ಲೂÂಐಪಿಒ) ಪ್ರಕಾರ 2017ರಲ್ಲಿ ಪೇಟೆಂಟ್ ಸಹಕಾರ ಒಪ್ಪಂದ ಅಡಿಯಲ್ಲಿ 2,43,500 ಅಂತಾರಾಷ್ಟ್ರೀಯ ಪೇಟೆಂಟ್ಗಳು ಅರ್ಜಿಗಳು ಸಂಶೋಧಕರಿಂದ ಬಂದಿವೆ. ಇದರಲ್ಲಿ ಅಮೆರಿಕಾದಿಂದ 56,624 ಅರ್ಜಿಗಳು, ಚೀನಾದಿಂದ 48,882, ಜಪಾನ್ನಿಂದ 48,208, ಜರ್ಮನಿ 18,982, ಕೊರಿಯಾದಿಂದ 15,763 ಪೇಟೆಂಟ್ ಅರ್ಜಿಗಳು ಬಂದಿವೆ.
ಆದರೆ, ಭಾರತದಿಂದ 1803 ಪೇಟೆಂಟ್ ಅರ್ಜಿಗಳು ಮಾತ್ರ ಹೋಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ,
ತಾಂತ್ರಿಕ ಶಿಕ್ಷಣ ವಿಭಾಗದ ಸಲಹೆಗಾರ ಪ್ರೊ.ಎಂ.ಎಚ್. ಧನಂಜಯ, ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಪ್ರೊ.ಬಿ.ಜಿ. ಸಂಗಮೇಶ್ವರ, ಕುಲಸಚಿವ ಪ್ರೊ.ಕೆ.ಎಸ್, ಲೋಕೇಶ್, ಪರೀûಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಎನ್. ಉದಯಕುಮಾರ್ ಹಾಜರಿದ್ದರು.
269 ಮಂದಿಗೆ ಪದವಿ: 2017-18ನೇ ಸಾಲಿನಲ್ಲಿ 149 ಎಂ.ಟೆಕ್ ವಿದ್ಯಾರ್ಥಿಗಳು, 96 ಎಂಬಿಎ, 24 ಕಾರ್ಪೊರೇಟ್ ಫೈನಾನ್ಸ್ ವಿದ್ಯಾರ್ಥಿಗಳಿಗೆ ವಿ.ವಿ ನಿಬಂಧನೆಗಳ ಪ್ರಕಾರ ಪದವಿ ಪ್ರದಾನ ಮಾಡಲಾಯಿತು. ಪ್ರತಿ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಜೆ. ನವೀನ್ಕುಮಾರ್, ಎಚ್.ಎಸ್. ಭಾನು, ಪಿ. ಮಾನಸಮಿತ್ರ, ಬಿ. ಸುಷ್ಮಾಸುಮತಿ, ಸಿ. ನಿಶ್ಚಲ್, ಎಸ್.ಆರ್. ಯಶಸ್, ಆರ್. ಆದಿತ್ಯ ಕಶ್ಯಪ್,
ಬಾಲಸುಬ್ರಮಣ್ಯ ಎಸ್. ಕುರ್ದೇಕರ್, ಎಚ್.ಆರ್. ಧನುಷ್, ಎಂ. ತ್ರಿವೇಣಿ ಮತ್ತು ಪಿ.ರಂಜಿತಾ, ಎಂಬಿಎನಲ್ಲಿ ಸಿ. ಪ್ರವೀಣ್ ಕುಮಾರ್, ಕಾರ್ಪೋರೇಟ್ ಫೈನಾನ್ಸ್ನಲ್ಲಿ ಎಸ್. ಆಶಾ ಅವರಿಗೆ ಪದಕ ವಿತರಿಸಲಾಯಿತು. ಅಲ್ಲದೆ ಬಾಲಸುಹ್ರಮಣ್ಯ ಎಸ್. ಕುರ್ದೇಕರ್, ಸಿ. ಪ್ರವೀಣ್ಕುಮಾರ್, ಎಚ್.ಆರ್. ಧನುಷ್ ಮತ್ತು ಸಿ. ನಿಶ್ಚಲ್ ಅವರಿಗೆ ದತ್ತಿ ಬಹುಮಾನ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ