ಲ್ಯಾನ್ಸ್ಡೌನ್ ಕಟ್ಟಡಕ್ಕೆ ಖಾದರ್ ಭೇಟಿ
Team Udayavani, Nov 30, 2018, 12:04 PM IST
ಮೈಸೂರು: ಲ್ಯಾನ್ಸ್ಡೌನ್ ಬಿಲ್ಡಿಂಗ್ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಜ್ಞರ ವರದಿ ಪರಿಶೀಲಿಸಿ, ಕಟ್ಟಡದ ಪಾರಂಪರಿಕತೆ ಉಳಿಸಿಕೊಂಡು ಶೀಘ್ರವೇ ಉತ್ತಮ ಕಟ್ಟಡ ನಿರ್ಮಾಣ ಮಾಡುವುದಾಗಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.
ಕಳೆದ ಹಲವು ದಿನಗಳಿಂದ ಲ್ಯಾನ್ಸ್ಡೌನ್ ಕಟ್ಟಡ ಪುನರ್ ನಿರ್ಮಾಣ ಕಾಮಗಾರಿ ನೆನಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಅವರು, ಲ್ಯಾನ್ಸ್ಡೌನ್ ಬಿಲ್ಡಿಂಗ್ನ ಸದ್ಯದ ಪರಿಸ್ಥಿತಿ ಹಾಗೂ ಕಟ್ಟಡದ ಗುಣಮಟ್ಟವನ್ನು ಪರಿಶೀಲಿಸಿದರು.
ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿದ್ದ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಲ್ಯಾನ್ಸ್ಡೌನ್ ಕಟ್ಟಡವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿದ್ದು, ಕಟ್ಟಡ ಗಟ್ಟಿಮುಟ್ಟಾಗಿದೆ. ಆದರೆ, ವ್ಯಾಪಾರದ ದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬುದನ್ನು ಚರ್ಚಿಸಿ ಹಾಗೂ ಕಟ್ಟಡ ಪುನರ್ ನವೀಕರಣಕ್ಕೆ ಸಂಬಂಧಿಸಿದಂತೆ ಎರಡು ನುರಿತ ತಜ್ಞರ ತಂಡ ನೀಡಿರುವ ವರದಿ ಪರಿಶೀಲಿಸಿ ಶೀಘ್ರವೇ ಕ್ರಮಕೈಗೊಳ್ಳಲಾಗುವುದು.
ಕಟ್ಟಡದ ಪಾರಂಪರಿಕತೆ ಉಳಿಸಿಕೊಂಡು ಉತ್ತಮ ಕಟ್ಟಡ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ, ಮೇಯರ್ ಪುಷ್ಪಲತಾ, ಮಾಜಿ ಮೇಯರ್ ಅಯೂಬ್ ಖಾನ್, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಇತರರಿದ್ದರು.