ಬಿದಿರು ಮೆಳೆಗೆ ಸಿಲುಕಿ ಗರ್ಜಿಸುತ್ತಿದ್ದ ಹುಲಿ ರಕ್ಷಣೆ
Team Udayavani, Dec 8, 2018, 11:11 AM IST
ಹುಣಸೂರು: ಉರುಳಿಗೆ ಹಾಕಿದ್ದ ಗೂಟವನ್ನೇ ಕಿತ್ತುಕೊಂಡು ಓಟ ಕಿತ್ತಿದ್ದ ಹುಲಿಯ ಕುತ್ತಿಗೆಯಲ್ಲಿದ್ದ ಗೂಟ ಬಿದಿರು ಮೆಳೆಗೆ ಸಿಲುಕಿ ಓಡಲಾಗದೆ ಗರ್ಜಿಸುತ್ತಿತ್ತು. ಅರವಳಿಕೆ ನೀಡಿದ ಅರಣ್ಯ ಇಲಾಖೆ ವೈದ್ಯ ಮತ್ತು ಸಿಬ್ಬಂದಿ, ಹುಲಿಯನ್ನು ಉರುಳಿನಿಂದ ಪಾರುಮಾಡಿ ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರು ತಾಲೂಕಿನ ಪ್ರಾದೇಶಿಕ ಅರಣ್ಯ ವಿಭಾಗದ ಶೆಟ್ಟಹಳ್ಳಿ-ಲಕ್ಕಪಟ್ಟಣ ಮೀಸಲು ಅರಣ್ಯ ಪ್ರದೇಶದ ಅರಣ್ಯದ ಪಕ್ಕದ ಜಮೀನಿನಲ್ಲಿ ಮರದ ಗೂಟಕ್ಕೆ ಕೇಬಲ್ ವೈರಿನ ಉರುಳನ್ನು ಹಾಕಲಾಗಿತ್ತು. ಅಡ್ಡಾಡುತ್ತಿದ್ದ ಹುಲಿಯು ಉರುಳಿಗೆ ಸಿಲುಕಿದ ವೇಳೆ ಜೋರಾಗಿ ಎಳೆದಿದ್ದರಿಂದ ಗೂಟದ ಸಮೇತ ಕಿತ್ತುಕೊಂಡು ಸ್ಪಲ್ಪದೂರ ಎಳೆದುಕೊಂಡು ಬಂದು ಗೂಟ ಭುಜಕ್ಕೆ ಸಿಲುಕಿಕೊಂಡು ಮುಂದೆ ಚಲಿಸಲಾಗದೆ ಬಿದಿರಿನ ಮೆಳೆಗೆ ಸಿಲುಕಿ ಗರ್ಜಿಸುತ್ತಿತ್ತು.
ಹುಲಿಗೆ ವನ್ಯಜೀವಿ ವಿಭಾಗದ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಅರವಳಿಕೆ ಚುಚ್ಚು ಮದ್ದ ನೀಡಿ ಜ್ಞಾನ ತಪ್ಪಿಸಿದ ನಂತರ ಕುತ್ತಿಗೆಯಿಂದ ಉರುಳನ್ನು ಬಿಡಿಸಿ, ಚಿಕಿತ್ಸೆ ನೀಡಿ ವಾಹನಕ್ಕೇರಿಸಿಕೊಂಡು ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿದ್ದು, ಇದೀಗ ಚೇತರಿಸಿಕೊಂಡಿದೆ.
ಸುಮಾರು ಎರಡೂವರೆ ವರ್ಷದ ಗಂಡು ಹುಲಿ ಇದಾಗಿದ್ದು, ಶುಕ್ರವಾರ ಬೆಳಗ್ಗೆ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಹುಲಿ ಗೋಚರಿಸಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆ ವರೆಗೂ ನಡೆದ ಕಾರ್ಯಾಚರಣೆಯಲ್ಲಿ ಹುಲಿಯನ್ನು ಸುರಕ್ಷಿತವಾಗಿ ಉರುಳಿನಿಂದ ಬಿಡಿಸಿ, ಇದೀಗ ಕೂರ್ಗಳ್ಳಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಕಾರ್ಯಾಚರಣೆ ಬಗ್ಗೆ ಡಿಸಿಎಫ್.ವಿಜಯಕುಮಾರ್ ತಿಳಿಸಿದ್ದಾರೆ.
ಈ ವೇಳೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಂ, ಡಿಸಿಎಫ್ ವಿಜಯಕುಮಾರ್, ಎಸಿಎಫ್ಗಳಾದ ಸೋಮಪ್ಪ, ಪ್ರಸನ್ನಕುಮಾರ್, ವನ್ಯಜೀವಿ ವಾರ್ಡನ್ ಕೃತಿಕಾ, ಪರಿಸರವಾದಿ ರಾಜ್ ಕುಮಾರ್, ಆರ್ಎಫ್ಓ ಸಂದೀಪ್ ಮತ್ತಿರರ ಅಧಿಕಾರಿಗಳು ಹಾಜರಿದ್ದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ತರಗನ್ ಎಸ್ಟೇಟ್ನಲ್ಲಿ ಕಳೆದ ಎರಡು ತಿಂಗಳ ಹಿಂದೆ ತಾಯಿಯೊಂದಿಗೆ ಮೂರು ಹುಲಿಮರಿಗಳು ಆಗಾಗ್ಗೆ ಕಾಣಿಸಿಕೊಂಡು ಉಪಟಳ ನೀಡುತ್ತಿದ್ದವು. ಈಗ ಸೆರೆ ಸಿಕ್ಕಿರುವ ಹುಲಿಯು ಕಳೆದ ಮೂರ್ನಾಲ್ಕು ದಿನಗಳಿಂದ ಸಹ ಈ ಭಾಗದಲ್ಲಿ ಕಾಣಿಸಿಕೊಂಡು ಆತಂಕ ಹುಟ್ಟಿಸಿತ್ತು, ಇದು ಅದೇ ಹುಲಿಯೇ ಇರಬಹುದೆಂಬ ಗ್ರಾಮಸ್ಥರು ಶಂಕಿಸಿದ್ದಾರೆ.