ಸೇನೆ ಸೇರಲು ಪರೀಕ್ಷೆ ಎದುರಿಸಿದ ಯುವಕರು
Team Udayavani, Dec 8, 2018, 11:11 AM IST
ಮೈಸೂರು: ನಗರದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆದ ಭಾರತೀಯ ವಾಯುಸೇನೆಯ ನೇಮಕಾತಿ ರ್ಯಾಲಿಯ ಎರಡನೇ ದಿನವಾದ ಶುಕ್ರವಾರ ಮೈಸೂರು ಸೇರಿದಂತೆ 20 ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿರುವ 7ನೇ ಏರ್ಮನ್ ಸೆಲೆಕ್ಷನ್ ಸೆಂಟರ್ ವತಿಯಿಂದ ನಡೆಸಲಾದ ನೇಮಕಾತಿ ರ್ಯಾಲಿ ಹಿನ್ನೆಲೆಯಲ್ಲಿ ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆ ಆರಂಭಿಸಲಾಯಿತು. ಆದರೆ, ನಿರೀಕ್ಷೆಗಿಂತಲೂ ಕಡಿಮೆ ಅಭ್ಯರ್ಥಿಗಳು ಸಂದರ್ಶನಕ್ಕೆ ಆಗಮಿಸಿದ್ದ ಕಾರಣಕ್ಕಾಗಿ ಸಂದರ್ಶನದಲ್ಲಿ ಭಾಗವಹಿಸುವ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಯಿತು.
ಹೀಗಾಗಿ ಎರಡನೇ ದಿನದಂದು ನಡೆದ ಸಂದರ್ಶನದಲ್ಲಿ 20 ಜಿಲ್ಲೆಗಳ 1150 ಯುವಕರು ಪಾಲ್ಗೊಂಡು ವಿವಿಧ ಪರೀಕ್ಷೆಗಳನ್ನು ಎದುರಿಸಿದರು. ಏರ್ಮನ್ ನೇಮಕಾತಿ ರ್ಯಾಲಿಯಲ್ಲಿ 17ರಿಂದ 20 ವರ್ಷದೊಳಗಿನ ಯುವಕರಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಏರ್ಫೋರ್ಸ್ ಅಧಿಕಾರಿಗಳು ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರೀಕ್ಷಿಸಿ, ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ 1.6 ಕಿ.ಮೀ. ಓಟ, 8 ಪುಲ್ಅಪ್ಸ್, 20 ಪುಶ್ಅಪ್ ಹಾಗೂ 20 ಸಿಟಪ್ಸ್ಗಳ ಕಸರತ್ತು ಮಾಡಿಸಲಾಯಿತು.
ಬಳಿಕ ಅಂಕಪಟ್ಟಿ, ವಾಸದೃಢೀಕರಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳ ಪರಿಶೀಲನೆ ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ವಿವಿಧ ಸುತ್ತಿನ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಡಿ.8ರಂದು ದೇಹದಾಡ್ಯì ಹಾಗೂ ಲಿಖೀತ ಪರೀಕ್ಷೆ ನಡೆಯಲಿದೆ.
ಬೆಂಗಳೂರಿನ 7ನೇ ಏರ್ಮನ್ ಸೆಲೆಕ್ಷನ್ ಸೆಂಟರ್ನ ಕಮಾಂಡಿಂಗ್ ಆಫಿಸರ್ ವಿಂಗ್ ಕಮಾಂಡರ್ ಮಾಯಾಂಕ್ ಕನುಂಗೋ ನೇತೃತ್ವದಲ್ಲಿ ವಾಯುಸೇನೆಯ 75 ಅಧಿಕಾರಿಗಳು ಪಾಲ್ಗೊಂಡಿದ್ದರು. ಸಂದರ್ಶನದಲ್ಲಿ ಮೈಸೂರು, ಬೆಂಗಳೂರು, ರಾಮನಗರ, ಮಂಡ್ಯ, ಕೋಲಾರ,
ಚಿಕ್ಕಬಳ್ಳಾಪುರ, ಚಾಮರಾಜನಗರ, ಮಡಿಕೇರಿ, ದಕ್ಷಿ$ಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಭಾಗವಹಿಸಿದ್ದರು.