ಭ್ರಷ್ಟಾಚಾರ ನಡೆದಿಲ್ಲ: ವಿಶ್ವನಾಥ್
Team Udayavani, Dec 9, 2018, 11:49 AM IST
ಕೆ.ಆರ್.ನಗರ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಂಡಿಸಿದ್ದ ಬಜೆಟ್ನಲ್ಲಿ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು , ಇದನ್ನು ಈಗಿನ ಸರ್ಕಾರ ತನಿಖೆ ಮಾಡಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿರುವುದು ಚುನಾವಣೆ ದೃಷ್ಟಿಯಿಂದಲೇ ಹೊರತು ಇದರಲ್ಲಿ ಸತ್ಯಾಂಶ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿಯ ಸರ್ಕಾರದ ಅವಧಿಯಲ್ಲೂ ಸಿಎಜಿ ಆಕ್ಷೇಪ ಮಾಡಿತ್ತು ಎಂಬುವುದನ್ನ ಬಿಜೆಪಿಯವರು ಮರೆತಿದ್ದಾರೆ ಎಂದ ಎಚ್.ವಿಶ್ವನಾಥ್ ವರದಿಯ ಸಮಗ್ರ ಅಧ್ಯಯನ ಮತ್ತು ಸೂಕ್ತ ತನಿಖೆಯಾಗದ ಹೊರತು ಭ್ರಷ್ಟಾಚಾರ ನಡೆದಿದೆ ಎಂದು ಹೇಳಲು ಸಾದ್ಯವಿಲ್ಲ ಎಂದರು.
ಬಿಜೆಪಿಯವರು ದಿನ ಬೆಳಗಾದರೆ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಸರ್ಕಾರ ಯಾವ ಕಾರಣಕ್ಕೆ ಬೀಳುತ್ತದೆ ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದ ಜೆಡಿಎಸ್ ರಾಜ್ಯಾಧ್ಯಕ್ಷರು ಬಿಜೆಪಿಯ ಕೆಲವು ನಾಯಕರ ಈ ವರ್ತನೆ ಆ ಪಕ್ಷದ ಹಿರಿಯ ಮುಖಂಡರಿಗೆ ಬೇಸರ ತರಿಸಿದೆ ಎಂದು ತಿಳಿಸಿದರು.
ಮೈತ್ರಿ ಸರ್ಕಾರ ತನ್ನ ಅವಧಿಯನ್ನು ಪೊರೈಸುವುದರಲ್ಲಿ ಯಾವುದೇ ಅನುಮಾನವಿಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಪರಸ್ಪರ ಸಹಕಾರ ಮತ್ತು ಸಮನ್ವಯತೆಯಿಂದ ಆಡಳಿತ ನಡೆಸುತ್ತಿದ್ದು , ಜನರ ಸಂಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಿದ್ದಾರೆ ಇದರ ಜತೆಗೆ ಮುಖ್ಯಮಂತ್ರಿಗಳು ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು.