ಸಾಧನೆಯ ಹಾದಿಯಲ್ಲಿಯೇ ನಿಧಾನ ಹೆಜ್ಜೆ
Team Udayavani, Jan 27, 2019, 11:30 AM IST
ಮೈಸೂರು: ಸ್ವಾರ್ಥ, ದ್ವೇಷ, ಅಸೂಯೆ, ಅಜ್ಞಾನದ ಕತ್ತಲೆಯಿಂದ ಹೊರಬಂದು ಸಂವಿಧಾನದ ಆಶಯದಂತೆ ಆತ್ಮವಿಶ್ವಾಸ ದಿಂದ ದೇಶದ ಅಭಿವೃದ್ಧಿಗೆ ದುಡಿಯೋಣ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ 70ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಾಮಾ ಜಿಕ ನ್ಯಾಯಗಳ ಸವಾಲನ್ನು ಎದುರಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದೃಢವಾದ ಹೆಜ್ಜೆ ಗಳನ್ನಿಟ್ಟು ಮುನ್ನಡೆಯೋಣ ಎಂದರು.
ಭಾರತದ ಸಂವಿಧಾನ ಕೇವಲ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಿತ ವನ್ನು ಮಾತ್ರ ಕಾಪಾಡದೆ ಇಡೀ ಭಾರತದ ಜನತೆಯ ಆಶೋತ್ತರಗಳನ್ನು ಈಡೇರಿಸು ತ್ತದೆ. ಭಾತೃತ್ವದ ಸ್ಥಾಪನೆಗಾಗಿ ರೂಪಗೊಂಡ ಶ್ರೇಷ್ಠ ಸಂವಿಧಾನ ಇದಾಗಿದೆ. ಹೀಗೆ ವಿಶ್ವದಲ್ಲಿಯೇ ಅತ್ಯುತ್ತಮವಾದ ಪ್ರತ್ಯಕ್ಷ ಕಾನ್ಯ ರೂಪಕ್ಕಿಳಿಯುವಂತಹ, ಪರಿವರ್ತನ ಶೀಲವಾದ, ಹಾಗೇಯೇ ಶಾಂತಿ ಮತ್ತು ಯುದ್ಧ ಕಾಲದಲ್ಲೂ ದೇಶವನ್ನು ಏಕಸೂತ್ರ ದಲ್ಲಿ ಬಂಧಿಸುವ ಸಾಮರ್ಥ್ಯವುಳ್ಳ ಸಂವಿಧಾನ ನಮ್ಮಲ್ಲಿದ್ದರೂ ಸಹ ನಾವು ಇನ್ನೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಟ್ಟಬೇಕಾದ ಗುರಿ ತಲುಪದೇ, ಇನ್ನು ಸಾಧನೆಯ ಹಾದಿಯಲ್ಲಿಯೇ ನಿಧಾನ ಹೆಜ್ಜೆಗಳನ್ನೀಡುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.
1950ರ ಜನವರಿ 26ರಂದು ಸಂಸತ್ತಿನಲ್ಲಿ ಭಾಷಣ ಮಾಡಿದ ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ರವರು ಭಾರತದಲ್ಲಿ ನಾವಿಂದು ಒಂದು ಗೊಂದಲಮಯವಾದ ಹೊಸ ಯುಗಕ್ಕೆ ಕಾಲಿಡುತ್ತಿದ್ದೇವೆ. ಆರ್ಥಿಕ, ಸಾಮಾಜಿಕ ಅಸಮಾನತೆಗಳು ಹಾಗೆಯೇ ಉಳಿದಿವೆ. ಮುಂಬರುವ ಸ್ವತಂತ್ರ ಸರ್ಕಾರ ಸಂವಿಧಾನವನ್ನು ಯಥಾವತ್ತಾಗಿ ಪಾಲಿಸಿದರೆ ಇನ್ನು ಕೇವಲ 20 ವರ್ಷಗಳಲ್ಲಿ ದೇಶ ಪ್ರಬುದ್ಧ ಭಾರತ ಆಗುತ್ತದೆ. ಅಷ್ಟೆ ಅಲ್ಲ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಳು ಸ್ಥಾಪನೆಯಾಗುತ್ತದೆ ಎಂದಿದ್ದಾರೆ. ಆದ್ದರಿಂದ ಇಂದು ಪ್ರತಿಯೊಬ್ಬ ಭಾರತೀಯನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫೀ ಅಹಮದ್ ಇದ್ದರು.