ಫುಟ್ಪಾತ್ ಆವರಿಸಿಕೊಂಡ ವಾರದ ಸಂತೆ
Team Udayavani, Mar 19, 2019, 7:15 AM IST
ಎಚ್.ಡಿ.ಕೋಟೆ: ಪಟ್ಟಣದಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಇಲ್ಲಿಗೆ ಬರುವ ವ್ಯಾಪಾರಿಗಳು ಪ್ರಮುಖ ರಸ್ತೆಯ ಪಾದಚಾರಿ ಮಾರ್ಗ(ಫುಟ್ಪಾತ್) ಆಕ್ರಮಿಸಿಕೊಂಡು ತಾವು ತಂದ ತರಕಾರಿ, ಬಟ್ಟೆ ಇನ್ನಿತರ ಸಾಮಗ್ರಿಗಳನ್ನು ಜೋಡಿಸಿ ವ್ಯಾಪಾರಕ್ಕೆ ಮುಂದಾಗುತ್ತಿರುವುದರಿಂದ ರಸ್ತೆಯೇ ಸಂತೆಯಾಗಿ ಮಾರ್ಪಟ್ಟಿದೆ.
ಪರಿಣಾಮ ತರಕಾರಿ ಪದಾರ್ಥ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಬರುವ ಗ್ರಾಹಕರು, ಸಾರ್ವಜನಿಕರು, ಶಾಲಾ ಮಕ್ಕಳು, ಮಹಿಳೆಯರು ಚಲಿಸುವ ವಾಹನಗಳ ನಡುವೆಯೇ ನಡೆದಾಡಬೇಕಾದ ದುಸ್ಥಿತಿ ಬಂದೋದಗಿದೆ. ಇಲ್ಲಿನ ಹಳೇ ಪುರಸಭೆ ಕಚೇರಿ ಮುಂಭಾಗದ ಹುಣಸೂರು-ಬೇಗೂರು ರಸ್ತೆಗೆ ಅಂಟಿಕೊಂಡಂತೆ ಇರುವ ಉಪ್ಲಿ ಕೆರೆ ಪ್ರದೇಶದಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ಹತ್ತಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
ಭಯಭೀತಿಯಲ್ಲಿ ಸಂಚಾರ: ಈ ಅವ್ಯವಸ್ಥೆಯಿಂದಾಗಿ ಪಾದಚಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ರಸ್ತೆ ಮಧ್ಯಭಾಗದಲ್ಲೇ ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ಇದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದಾಗಿ ಕೆಲವೊಮ್ಮೆ ಅಪಘಾತಕ್ಕೆ ಆಹ್ವಾನ ಮಾಡಿಕೊಟ್ಟಿರುವ ಉದಾಹರಣೆಗಳು ಕಣ್ಣಮುಂದಿದ್ದು, ಸಾರ್ವಜನಿಕರು, ಸವಾರರು ಭಯಭೀತಿಯಲ್ಲಿ ಸಂಚರಿಸುವಂತಾಗಿದೆ.
ಸಂತೆ ಜಾಗ ನಿಗದಿಪಡಿಸಿದ್ದ ಪಿಎಸ್ಸೈ: ಈ ಹಿಂದೆ ಪಟ್ಟಣ ಠಾಣೆಯಲ್ಲಿ ಆರಕ್ಷಕ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್.ಬಾಲಕೃಷ್ಣ ಅವರು ಕಾನೂನು ಸುವ್ಯವಸ್ಥೆಗೆ ಅಡ್ಡಿ ಆಗುತ್ತಿರುವುದನ್ನು ಮನಗಂಡು ಫುಟ್ಪಾತ್ ತೆರವುಗೊಳಿಸಿ ಸಂತೆಗೆ ಬರುವ ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಿ, ಸಂತೆ ನಡೆಯಬೇಕಾದ ಜಾಗದ ಪರಿಮಿತಿ ಗುರುತಿಸಿಕೊಟ್ಟಿದ್ದರು.
ಜತೆಗೆ ಸಂತೆ ವ್ಯಾಪಾರಿಗಳು ರಸ್ತೆ ಬದಿಯಿಂದ ಇಂತಿಷ್ಟೇ ದೂರದಲ್ಲಿ ಕೂತು ವ್ಯಾಪಾರ ಮಾಡಬೇಕು ಎಂದು ಆದೇಶಿಸಿ ಅವರ ಸ್ವಂತ ಖರ್ಚಿನಲ್ಲಿ ರಸ್ತೆ ಮಾರ್ಜಿನ್ ಗುರುತಿಸಿ ಸಿಮೆಂಟ್ ಕಂಬಗಳನ್ನು ಹಾಕಿಸಿ, ಕಂಬದ ಹೊರೆಗೆ ಯಾರು ವ್ಯಾಪಾರ ವಾಹಿವಾಟು ಮಾಡುವಂತಿಲ್ಲ ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ನಿಯಮ ಉಲ್ಲಂಘನೆ: ಪಿಸ್ಸೈ ಬಾಲಕೃಷ್ಣಗೌಡ ಅವರು ವರ್ಗಾವಣೆ ಆದ ನಂತರ ವ್ಯಾಪಾರಿಗಳು ಮತ್ತೆ ಫುಟ್ಪಾತ್ ಆವರಿಸಿಕೊಂಡು ರಸ್ತೆ ಬದಿಗೆ ಬಂದು ವ್ಯಾಪಾರ ವಾಹಿವಾಟು ನಡೆಸುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ಮತ್ತೆ ಪಾದಚಾರಿಗಳು ನಡೆದಾಡಲು ಫುಟ್ಪಾತ್ ಇಲ್ಲದ ಕಾರಣ ರಸ್ತೆ ಮೇಲೆ ಸಂಚರಿಸುವ ವಾಹನಗಳ ನಡುವೆಯೇ ಸಂಚಾರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪುರಸಭೆ ನಿರ್ಲಕ್ಷ್ಯ: ಈ ಅವ್ಯವಸ್ಥೆಯನ್ನು ಕಣ್ಣರೇ ಕಂಡರೂ ಪುರಸಭೆ ಅಧಿಕಾರಿಗಳಾಗಲೀ, ಕಾನೂನು ಸುವವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗಳಾಗಲೀ ಸರಿಪಡಿಸಲು ಮುಂದಾಗದೇ, ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಉಡಾಫೆ ಉತ್ತರ: ಈ ಬಗ್ಗೆ ವ್ಯಾಪಾರಿಗಳನ್ನು ಪಾದಚಾರಿಗಳು ಸಾರ್ವಜನಿಕರು ಪ್ರಶ್ನಿಸಿದರೇ, ನಾವೇನ್ ದಿನ ಬರಿ¤ದ್ವಾ, ನೀ ಯಾರು ಕೇಳಲು ಎಂದಲ್ಲ ಏಕವಚನದಲ್ಲಿ ಮಾತನಾಡುವುದಲ್ಲದೇ, ಕೆಲವೊಮ್ಮೆ ವ್ಯಾಪಾರಿಗಳು ಸೇರಿಕೊಂಡು ಪ್ರಶ್ನಿಸಿದವರ ಮೇಲೆಯೇ ದಬ್ಟಾಳಿಕೆ ಮಾಡಲು ಮುಂದಾಗುತ್ತಾರೆ ಎಂದು ಸಾರ್ವಜನಿಕರು ಅವಲತ್ತುಕೊಂಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಂತೆ ವ್ಯಾಪಾರಿಗಳಿಗೆ ಎಚ್.ಬಿ.ರಸ್ತೆ ಫುಟ್ಪಾತ್ ಮೇಲೆ ವ್ಯಾಪಾರ ಮಾಡಲು ಸಾಮಗ್ರಿಗಳನ್ನು ಜೋಡಿಸಿ ಮುಂದಾಗದಂತೆ ಸಂತೆ ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ, ವಾಹನ ಸವಾರರಿಗೆ, ಪಾದಚಾರಿಗಳಿಗೆ, ಸಂತೆಗೆ ಬರುವ ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
ವಾರದ ಸಂತೆಗೆ ಬರುವ ವ್ಯಾಪಾರಿಗಳು ಪಟ್ಟಣದ ಎಚ್.ಬಿ.ರಸ್ತೆಯ ಫುಟ್ಪಾತ್ ಮೇಲೆ ಹಣ್ಣು, ತರಕಾರಿ, ಬಟ್ಟೆ ಇನ್ನಿತರ ವಸ್ತುಗಳನ್ನು ಇಟ್ಟಿಕೊಳ್ಳುವುದರಿಂದ ಪಾದಚಾರಿಗಳಿಗೆ, ಮಹಿಳೆಯರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದ್ದು, ರಸ್ತೆಯ ಮೇಲೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
-ಕೃಷ್ಣಪ್ರಸಾದ್, ಹಿರಿಯ ನಾಗರಿಕರು
* ಬಿ.ನಿಂಗಣ್ಣ ಕೋಟೆ