10 ದಿನದಲ್ಲಿ 110 ಕೇಸ್, 20 ಮಂದಿ ಸೆರೆ
Team Udayavani, Mar 21, 2019, 11:00 AM IST
ಹುಣಸೂರು: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ 10 ದಿನಗಳಲ್ಲಿ ಹುಣಸೂರು ಉಪವಿಭಾಗದ
ತಾಲೂಕುಗಳಲ್ಲಿ ಅಕ್ರಮ ಮದ್ಯ ಮಾರಾಟ, ಸಾಗಣೆ ಮಾಡುವವರ ವಿರುದ್ಧ ಅಬಕಾರಿ ಇಲಾಖೆ ಅಧಿಕಾರಿಗಳು 110 ಪ್ರಕರಣ ದಾಖಲಿಸಿ, 8.37 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ 13 ವಾಹನಗಳನ್ನು ವಶಕ್ಕೆ ಪಡೆದು 20 ಮಂದಿಯನ್ನು ನ್ಯಾಯಾಂಗ ಬಂಧನ ಕ್ಕೊಪ್ಪಿಸಿದ್ದಾರೆ.
ಉಪ ವಿಭಾಗ ವ್ಯಾಪ್ತಿಯ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾ ಪಟ್ಟಣ ಮತ್ತು ಕೆ.ಆರ್.ನಗರ ತಾಲೂಕು ಗಳಿಂದ ಒಟ್ಟು 50 ಪ್ರಕರಣಗಳಲ್ಲಿ 20 ಘೋರ ಪ್ರಕರಣ ದಾಖಲಾಗಿದ್ದು, ಒಟ್ಟು 8.37 ಲಕ್ಷ ರೂ. ಬೆಲೆಯ ಮದ್ಯ ವಶಕ್ಕೆ ಪಡೆಯಲಾಗಿದೆ. ಈ ಪೈಕಿ 240.82 ಲೀಟರ್, ಮದ್ಯ, 70 ಲೀ. ಸೇಂದಿ, 33 ಲೀ. ವೈನ್, 1.650 ಲೀ. ಬಿಯರ್ ಹಾಗೂ ಒಂದು ಕಾರು ಸೇರಿದಂತೆ 12 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
20 ಘೋರ ಪ್ರಕರಣಗಳು, 36 ಸಾರ್ವಜನಿಕ ಪ್ರದೇಶದಲ್ಲಿ ಮದ್ಯಸೇವನೆ, ಲೈಸನ್ಸ್ ಹೊಂದಿರುವ ಮದ್ಯದಂಗಡಿ ಗಳಲ್ಲಿ ಕಾನೂನು ಉಲ್ಲಂಘಿಸಿರುವ 13 ಪ್ರಕರಣಗಳಾಗಿವೆ. ಈವರೆಗೆ ನಡೆಸಿರುವ 110 ದಾಳಿಗಳಲ್ಲಿ 345 ಲೀಟರ್ ಮದ್ಯ ವಶಪಡಿಸಿಕೊಂಡು 50 ಮಂದಿ ವಿರುದ್ಧ ಪ್ರಕರಣ ದಾಖಲಿಸಿ, 20 ಮಂದಿಯನ್ನು ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ.
ವಿವಿಧೆಡೆ ದಾಳಿ 11 ಮಂದಿ ಬಂಧನ: ಕಳೆದ 10 ದಿನಗಳಿಂದೆ ನಗರ ಸೇರಿದಂತೆ ತಾಲೂಕಿನ ವಿವಿಧೆಡೆ ದಾಳಿ ನಡೆಸಿ, 29
ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ ಮೂರು ಘೋರ, ಆರು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಹಾಗೂ ಮೂರು ಮದ್ಯದ ಅಂಗಡಿಗಳಲ್ಲಿ ಕಾನೂನು ಉಲ್ಲಂಘಿಸಿರುವ ಪ್ರಕರಣ ಪತ್ತೆಯಾಗಿದ್ದು, 11 ಮಂದಿಯನ್ನು ಬಂಧಿಸಲಾಗಿದೆ. ಒಂದು ಕಾರು ಹಾಗೂ ಮೂರು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕಿರಿಜಾಜಿ ರಸ್ತೆಯ ಶಬ್ಬೀರ್ ನಗರದ ಬಳಿ ತಮಿಳುನಾಡು ಮೂಲದ ವಾಸು ಎಂಬಾತ ದ್ವಿಚಕ್ರ ವಾಹನದಲ್ಲಿ 70 ಲೀ.ನಷ್ಟು ಸೇಂದಿ ಸಾಗಿಸುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದರೆ, ಮನುಗನಹಳ್ಳಿ ಚೆಕ್ ಪೋಸ್ಟ್ನಲ್ಲಿ ವಿರಾಜ ಪೇಟೆ ತಾಲೂಕಿನ ಹುದುಕೇರಿಯ ಪರಮೇಶ್ ಎಂಬಾತ ಸೇನೆ ಕ್ಯಾಂಟೀನ್ನಿಂದ ಕಾರಿನಲ್ಲಿ ಸಾಗಿಸುತ್ತಿದ್ದ 18 ಮದ್ಯದ ಬಾಟಲಿಗಳ ಪೈಕಿ 8ಕ್ಕೆ ಮಾತ್ರ ದಾಖಲೆ ಇದ್ದುದ್ದರಿಂದ ಪ್ರಕರಣ ದಾಖಲಿಸಿ ಕಾರು ಮತ್ತು ಆತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೂಂದು ಪ್ರಕರಣದಲ್ಲಿ ನಗರದ ಕಲ್ಕುಣಿಕೆ ವೃತ್ತದಲ್ಲಿ ಎಚ್.ಡಿ.ಕೋಟೆ ತಾಲೂಕಿನ ಬಸವಮಂಟಿಹಾಡಿಯ ಬಸವ ಎಂಬಾತ 90 ಎಂ.ಎಲ್.ನ 110 ಮದ್ಯದ ಸ್ಯಾಚೆಟ್ ಸಾಗಿಸುವ ವೇಳೆ ಸಿಕ್ಕಿಬಿದ್ದಿದ್ದಾರೆ. 115 ಲೀ. ಮದ್ಯವಶಕ್ಕೆ ಪಡೆಯಲಾಗಿದೆ ಎಂದು ಹುಣಸೂರು ಅಬಕಾರಿ ನಿರೀಕ್ಷಕ ಸಿದ್ದನಾಯಕ ತಿಳಿಸಿದ್ದಾರೆ.
ಅಕ್ರಮ ತಡೆಗೆ ಕರೆ ಮಾಡಿ ದಿನದ 24ಗಂಟೆ ನಿರಂತರವಾಗಿ ಪಾಳಿಯಲ್ಲಿ ಡಿವೈಎಸ್ಪಿ ಕಚೇರಿ ಹಾಗೂ ಹುಣಸೂರು ಕಚೇರಿ
ವತಿಯಿಂದ ತಲಾ 2 ರಂತೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ. ಉಪ ವಿಭಾಗ ವ್ಯಾಪ್ತಿಯ ನಾಲ್ಕು ತಾಲೂಕುಗಳಲ್ಲಿ ಎಲ್ಲೇ ಅಕ್ರಮ ಮದ್ಯ ಚಟುವಟಿಕೆಗಳ ಕಂಡುಬಂದಲ್ಲಿ ಹುಣಸೂರು-ಮೊ. 9844404677, ಎಚ್.ಡಿ.ಕೋಟೆ- 9449597185, ಕೆ.ಆರ್.ನಗರ- 73535 49061, ಪಿರಿಯಾಪಟ್ಟಣ- 99642 61036 ಮತ್ತು ಹುಣಸೂರು- 9449597184ಗೆ ಕರೆಮಾಡಿಮಾಹಿತಿ ನೀಡಿದಲ್ಲಿ ಕ್ರಮ ವಹಿಸಲಾಗುವುದೆಂದು ಡಿವೈಎಸ್ಪಿ ಮಂಜೇಗೌಡ ತಿಳಿಸಿದ್ದಾರೆ.