ಕಾಂಗ್ರೆಸಿಗರಿಗೆ ನೋವಾಗಲಿ ಎಂಬುದೇ ಪ್ರಧಾನಿ ಬಯಕೆ!
Team Udayavani, Jul 24, 2017, 8:05 AM IST
ನವದೆಹಲಿ: “ತುರ್ತು ಪರಿಸ್ಥಿತಿ ಆಧರಿಸಿರುವ “ಇಂದು ಸರ್ಕಾರ್’ ಚಿತ್ರ ಅಸಂಖ್ಯ ಕಾಂಗ್ರೆಸಿಗರ ಮನಸನ್ನು ಘಾಸಿಗೊಳಿಸುತ್ತದೆ. ಹಾಲಿ ಪ್ರಧಾನಿ ಬಯಸುತ್ತಿರುವುದು ಕೂಡ ಅದನ್ನೇ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ. ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ತುರ್ತು ಪರಿಸ್ಥಿತಿ ಆಧರಿಸಿ ಮಧುರ್ ಭಂಡಾರ್ಕರ್ ನಿರ್ದೇಶಿಸಿರುವ “ಇಂದು ಸರ್ಕಾರ್’ ಚಿತ್ರದ ಬಿಡುಗಡೆ ವಿರೋಧಿಸಿ ಕಾಂಗ್ರೆಸಿಗರು ಪ್ರತಿಭಟಿಸುತ್ತಿದ್ದಾರೆ. ಚಿತ್ರದಲ್ಲಿ ಇಂದಿರಾ ಹಾಗೂ ಸಂಜಯ್ ಗಾಂಧಿ ಸೇರಿ ಹಲವು ಹಿರಿಯ ನಾಯಕರನ್ನೇ ಹೋಲುವ ಪಾತ್ರಗಳಿರುವುದು ಕಾಂಗ್ರೆಸಿಗರು ಚಿತ್ರವನ್ನು ವಿರೋಧಿಸಲು ಕಾರಣ. “ಇಂದು ಸರ್ಕಾರ್, ಕಾಂಗ್ರೆಸಿಗರ ಭಾವನೆಗಳಿಗೆ ಧಕ್ಕೆ ತರುವ ಚಿತ್ರ. ಪ್ರಧಾನಿ ಮೋದಿ ಕೂಡ ನಮಗೆ ನೋವಾಗಲಿ ಎಂದೇ ಬಯಸುತ್ತಿದ್ದಾರೆ. ಆದರೆ ಕೊನೆಗೆ ಅದರ ಪೆಟ್ಟು ಬೀಳುವುದು ಮೋದಿ ಅವರಿಗೇ,’ ಎಂದಿದ್ದಾರೆ ಮೊಯ್ಲಿ. ಇದಕ್ಕೆ ಪ್ರತಿಕ್ರಿ ಯಿಸಿರುವ ನಿರ್ದೇಶಕ, ಚಿತ್ರದ ಆರಂಭದಲ್ಲಿ “ಬಹುತೇಕ ಕಾಲ್ಪನಿಕ’ ಎಂದು ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ.