ವಿಷ ಕಾರಿಕೊಂಡದ್ದು ನೆನಪಿಲ್ವ?; ಜೆಡಿಯು ಮರು ಮೈತ್ರಿಗೆ ಸೇನೆ ಲೇವಡಿ
Team Udayavani, Jul 28, 2017, 12:03 PM IST
ಮುಂಬಯಿ: ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ‘ಘರ್ ವಾಪಸಿ’ ಯನ್ನು ಎನ್ಡಿಎ ಮಿತ್ರ ಪಕ್ಷ ವಾದ ಶಿವಸೇನೆ ಕಟು ಶಬ್ಧಗಳಲ್ಲಿ ಟೀಕಿಸಿದೆ. ಕಳೆದ 2 ವರ್ಷಗಳಲ್ಲಿ ಪರಸ್ಪರ ಕೆಳಗೆ ಬೀಳಿಸಲು ಕಾಳೆದುಕೊಂಡದ್ದು, ವಿಷ ಕಾರಿಕೊಂಡಿರುವುದು ನೆನಪಿಲ್ಲವೇ ಎಂದು ಲೇವಡಿ ಮಾಡಿದೆ.
ಪಕ್ಷದ ಮುಖವಾಣಿ ಸಾಮ್ನಾದ ಶುಕ್ರವಾರದ ಸಂಪಾದಕೀಯದಲ್ಲಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕರ ಹಳೆಯ ಹೇಳಿಕೆಗಳನ್ನು ಉಲ್ಲೇಖಿಸಿ ಬರೆಯಲಾಗಿದ್ದು, ‘ಅಮಿತ್ ಶಾ ಅಂದು ನಿತೀಶ್ ಗೆದ್ದರೆ ಪಾಕಿಸ್ಥಾನದಲ್ಲಿ ಸಂಭ್ರಮಾಚಾರಣೆ ಮಾಡುತ್ತಾರೆ ಎಂದು ಹೇಳಿದ್ದರು. ಸ್ವಯಂ ಬಿಜೆಪಿ ಈಗ ಪಾಕಿಸ್ಥಾನವನ್ನು ಖುಷಿ ಪಡಿಸಿದ್ದು, ಅಲ್ಲಿ ಈಗ ಸಂಭ್ರಮಾಚರಣೆ ಮಾಡುತ್ತಿರಬಹುದ್ದಲ್ಲ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ.
‘ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ಈಗ ಪರಸ್ಪರ ಹಾಡಿ ಹೊಗಳುತ್ತಿದ್ದಾರೆ. ಹಿಂದೆ ಅವರು ಪರಸ್ಪರ ವಿಷ ಕಾರಿಕೊಂಡದ್ದು ಮರೆತುಹೋಗಿರಬಹುದು’ ಎಂದು ಬರೆಯಲಾಗಿದೆ.
‘ನಿತೀಶ್ ಅವರು ಮೋದಿ ಮುಸ್ಲಿಂ ವಿರೋಧಿ,ಕೋಮುವಾದಿ ಎಂದು ಅವರ ಪ್ರಧಾನ ಮಂತ್ರಿ ಅಭ್ಯರ್ಥಿತನ ವಿರೋಧಿಸಿ ಎನ್ಡಿಎ ಮೈತ್ರಿಕೂಟದಿಂದ ಹೊರ ಹೋಗಿದ್ದರು. ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ವಿರುದ್ಧ ಸಮರ ಸಾರಿದ್ದರು. ಈಗ ಹೇಗೆ ವಾಪಾಸಾಗಿದ್ದಾರೆ. ಇದನ್ನೆಲ್ಲಾ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಗೆ ಅರಗಿಸಿಕೊಳ್ಳುತ್ತದೆ’ ಎಂದು ಪ್ರಶ್ನಿಸಿದೆ.