ಯುವ ಉದ್ಯಮಿಗಳು ಅಭಿವೃದ್ಧಿಯ ಸೈನಿಕರಾಗಬೇಕು: ಪ್ರಧಾನಿ ಮೋದಿ
Team Udayavani, Aug 22, 2017, 7:20 PM IST
ಹೊಸದಿಲ್ಲಿ : ಯುವ ಉದ್ಯಮಶೀಲರು ದೇಶದ ಅಭಿವೃದ್ದಿಯ ಸೈನಿಕರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸರಕಾರದಲ್ಲಿ ಜನ ಕಲ್ಯಾಣ ಮತ್ತು ಪ್ರಜೆಗಳ ಸಂತೋಷವೇ ಪರಮೋಚ್ಚವಾದದ್ದು ; ಆದುದರಿಂದ ಕೈಗಾರಿಕಾ ರಂಗದ ನಾಯಕರಾಗಿರುವ ನೀವು ದೇಶದ ಬಡವರಲ್ಲಿ ಬಡವರಿಗಾಗಿ ಏನನ್ನು ಮಾಡಬಹುದು ಎಂಬುದನ್ನು ಚಿಂತಿಸಬೇಕು ಎಂದು ಮೋದಿ ಅವರು ಇಂದಿಲ್ಲಿ 200ಕ್ಕೂ ಅಧಿಕ ಯುವ ಉದ್ಯಮಶೀಲರೊಂದಿಗೆ ನಡೆಸಿದ ಸಂವಾದದಲ್ಲಿ ಹೇಳಿದರು.
ಬಜಾಜ್ ಆಟೋ ಕಂಪೆನಿಯ ರಾಜೀವ್ ಬಜಾಜ್, ಫ್ಯೂಚರ್ ರೀಟೇಲ್ನ ಅವನಿ ಬಿಯಾನಿ ಮುಂತಾದ ಉದ್ಯಮಶೀಲರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.
ದೇಶದ ಪ್ರತಿಯೋರ್ವ ಪ್ರಜೆಗೂ ಈ ದೇಶ ನನ್ನದು ಎಂಬ ಭಾವನೆ ಇರಬೇಕು ಮತ್ತು ನಾನು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇನೆ; ಅದರ ಬೆಳವಣಿಗಾಗಿ ನಾನು ಏನಾದರೊಂದು ಕಾಣಿಕೆ ನೀಡಬೇಕು ಎಂಬ ಸಂಕಲ್ಪ ಇರಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
2022ರೊಳಗೆ ದೇಶದ ಯುವ ಉದ್ಯಮಿಗಳು ಸಂಪೂರ್ಣವಾಗಿ ಕ್ಯಾಶ್ಲೆಸ್ (ನಗದು ರಹಿತ ವಹಿವಾಟುದಾರರು) ಆಗಬೇಕು ಎಂದು ಮೋದಿ ಕರೆ ನೀಡಿದರು.
ಪಾರ್ಕ್ ಹೊಟೇಲ್ನ ಪ್ರಿಯಾ ಪಂತ್ ಮತ್ತು ಎಸ್ಕಾರ್ಟ್ಸ್ ನ ನಿಖೀಲ್ ನಂದಾ ಸೇರಿದಂತೆ ಹಲವು ಪ್ರಮುಖ ಸಿಇಓಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.