ಪ್ರಜಾಪ್ರಭುತ್ವದಲ್ಲಿ ಸತ್ಯಾಗ್ರಹಕ್ಕೆ ಅವಕಾಶವಿಲ್ಲ: ಕೇರಳ ಹೈಕೋರ್ಟ್
Team Udayavani, Oct 14, 2017, 12:24 PM IST
ಎರ್ನಾಕುಲಂ: ಕಾಲೇಜುಗಳಲ್ಲಿ ಧರಣಿ, ಪ್ರತಿಭಟನೆ ಮಾಡುವ ವಿದ್ಯಾರ್ಥಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆ. ಅಂಥವುಗಳಲ್ಲಿ ಭಾಗಿಯಾದರೆ ಪೊಲೀಸರು ಮಧ್ಯಪ್ರವೇಶಿಸಬಹುದು ಮತ್ತು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಬಹುದು. ಈ ಬಗ್ಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ತೀರ್ಪು ನೀಡಿದೆ.
ಪೊನ್ನಾನಿಯ ಎಂ.ಇ.ಎಸ್.ಕಾಲೇಜಿನ ಪ್ರಾಂಶುಪಾಲರು ಧರಣಿ ನಿರತ ವಿದ್ಯಾರ್ಥಿಗಳ ವಿರುದ್ಧ ಸಲ್ಲಿಸಿದ್ದ ದೂರಿನ ಆಧಾರದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಈ ಆದೇಶ ನೀಡಿದೆ. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿ ಸಂಘಟನೆಗಳು ನಡೆಸುವ ಧರಣಿ ಮತ್ತು ಸತ್ಯಾಗ್ರಹಕ್ಕೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವೇ ಇಲ್ಲ ಎಂದಿದೆ.
ಸತ್ಯಾಗ್ರಹ ನಡೆಸದೆ ಇರುವ ವಿದ್ಯಾರ್ಥಿಗಳನ್ನು “ನಾಗರಿಕ’ ವಿದ್ಯಾರ್ಥಿಗಳು ಮತ್ತು ಅಂಥವುಗಳಲ್ಲಿ ಪಾಲ್ಗೊಳ್ಳುವವರನ್ನು “ಅನಾಗರಿಕ’ ವಿದ್ಯಾರ್ಥಿಗಳು ಎಂದು ನ್ಯಾಯಪೀಠ ವಿಭಾಗಿಸಿದೆ. ರಾಜಕೀಯ ಪಕ್ಷಗಳು ಮುಷ್ಕರ, ಧರಣಿ ನಿರತ ವಿದ್ಯಾರ್ಥಿಗಳನ್ನುಪಯೋಗಿಸಿ ಶೈಕ್ಷಣಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ.