ತಾರಕಕ್ಕೇರಿದ ಬಿಜೆಪಿ ಶಿವಸೇನೆ ಜಟಾಪಟಿ!
Team Udayavani, Oct 28, 2017, 7:20 AM IST
ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ತಿಕ್ಕಾಟ ತಾರಕಕ್ಕೇರಿದ್ದು, ಮೈತ್ರಿ ಮುರಿಯಲಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಪೂರಕವಾಗಿ, ಬಿಜೆಪಿ ಜತೆಗೆ ಮೈತ್ರಿಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ನಿರ್ಧರಿಸಬೇಕು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಶಿವಸನೆ ಮುಖಂಡ ಸಂಜಯ್ ರಾವುತ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಗುಣಗಾನ ಮಾಡಿದ್ದರು. “ಪ್ರಧಾನಿ ನರೇಂದ್ರ ಮೋದಿ ಅಲೆ ಮುಗಿದಿದೆ. ರಾಹುಲ್ ಗಾಂಧಿ ಈಗ ದೇಶವನ್ನು ಆಳುವ ಅರ್ಹತೆ ಹೊಂದಿದ್ದಾರೆ. ಈಗ ಅವರು “ಪಪ್ಪು’ ಆಗಿಲ್ಲ. ಜನರು ಯಾರನ್ನು ಯಾವಾಗ ಬೇಕಾದರೂ ಪಪ್ಪು ಮಾಡಬಹುದು’ ಎಂದಿದ್ದರು. ಇದು ಬಿಜೆಪಿಯನ್ನು ಕೆರಳಿಸಿದೆ. ಶುಕ್ರವಾರ ಸಮಾರಂಭವೊಂದರಲ್ಲಿ ಮಾತನಾಡಿದ ಫಡ್ನವೀಸ್, ಶಿವಸೇನೆ ನಮ್ಮ ಎಲ್ಲ ನಿರ್ಧಾರಗಳನ್ನೂ ವಿರೋಧಿಸುತ್ತಿದೆ. ಅವರು ಒಂದೇ ಸಮಯದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಾಗದು. ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಎಂದಿಗೂ ಎಲ್ಲವನ್ನೂ ಋಣಾತ್ಮಕವಾಗಿ ನೋಡುತ್ತಿರಲಿಲ್ಲ. ಉದ್ಧವ್ ಠಾಕ್ರೆ ಕೂಡ ಹಾಗೆ ಮಾಡುವವರಲ್ಲ. ಆದರೆ ಪಕ್ಷದ ಕೆಲವು ಮುಖಂಡರು ಪಕ್ಷದ ಮುಖಂಡರಿಗಿಂತ ತಾವೇ ದೊಡ್ಡವರು ಎಂದು ಭಾವಿಸಿದಂತಿದೆ ಎಂದು ಫಡ್ನವೀಸ್ ಕಿಡಿ ಕಾರಿದ್ದಾರೆ.
ಎನ್ಸಿಪಿ ಜತೆಗೆ ನಿಗೂಢ ನಡೆ?
ಇದೇ ಸಂದರ್ಭದಲ್ಲಿ ಫಡ್ನವೀಸ್ ಎನ್ಸಿಪಿ ಮುಖಂಡ ಶರದ್ ಪವಾರ್ರನ್ನು ಹೊಗಳಿದ್ದಾರೆ. ಪವಾರ್ ಎಂದಿಗೂ ಅಭಿವೃದ್ಧಿ ವಿಚಾರಕ್ಕೆ ಬಂದರೆ ಮಿತಿ ಮೀರಿ ವಿರೋಧ ಮಾಡಿದವರಲ್ಲ. ಅವರು ಎಂದಿಗೂ ಅಭಿವೃದ್ಧಿಯನ್ನು ವಿರೋಧಿಸಿಲ್ಲ. ಆದರೆ ಎನ್ಸಿಪಿ ಜತೆಗಿನ ನಮ್ಮ ಅಂತರ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಮೈತ್ರಿ ಮುರಿದು ಕೊಳ್ಳಲು ಶಿವಸೇನೆ ನಿರ್ಧರಿಸಿದರೆ ಬಿಜೆಪಿ ಸರ್ಕಾರ ಬಹುಮತ ಕಳೆದು ಕೊಳ್ಳಲಿದ್ದು, ಎನ್ಸಿಪಿ ಕೈ ಹಿಡಿಯುವುದು ಅನಿವಾರ್ಯವಾಗಲಿದೆ.
ಹೆಚ್ಚುತ್ತಿದೆ ಮೈತ್ರಿ ಪಕ್ಷಗಳ ಮಧ್ಯದ ಅಂತರ: ಶಿವಸೇನೆ ಹಲವು ಬಾರಿ ಬಿಜೆಪಿ ನಿಲುವನ್ನು ಟೀಕಿಸಿದೆ. ಈ ಹಿಂದಿನ ಎನ್ಡಿಎ ಸರ್ಕಾರದ ನಿಲುವನ್ನೂ ಶಿವಸೇನೆ ಟೀಕಿಸಿತ್ತು. ಆದರೆ ಕಾಂಗ್ರೆಸ್ ಅನ್ನು ಶಿವಸೇನೆ ಹೊಗಳಿರಲಿಲ್ಲ. ಈ ಹಿಂದೆ 100 ರಾಹುಲ್ ಗಾಂಧಿ ಬಂದರೂ ಮೋದಿಗೆ ಸಮನಲ್ಲ ಎಂದು ಶಿವಸೇನೆ ಹೇಳಿತ್ತು. ಆದರೆ ಈಗ ಶಿವಸೇನೆ ಮುಖಂ ಡರು ಕಾಂಗ್ರೆಸ್ ಅನ್ನು ಹೊಗಳಿರುವುದು ಬಿಜೆಪಿಯನ್ನು ಕೆರಳಿಸಿದೆ.
“ರಾಹುಲ್ ಸಮರ್ಥ’
ರಾಹುಲ್ ಗಾಂಧಿ ಅವರು ಕಾಂಗ್ರೆಸ್, ಯುಪಿಎ ಮತ್ತು ದೇಶವನ್ನು ಮುನ್ನೆಡೆ ಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಶಿವಸೇನೆ ಸಂಸದ ಸಂಜಯ್ ರಾವತ್ “ರಾಹುಲ್ ದೇಶವನ್ನು ಮುನ್ನೆಡಸಲು ಸಮ ರ್ಥರಿದ್ದಾರೆ. ಮೋದಿಗಿಂತ ಉತ್ತಮ’ ಎಂದು ನೀಡಿದ್ದ ಹೇಳಿಕೆಗೆ ಪ್ರತಿ ಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಜಯ್ ಮಾಕೆನ್ ಹೀಗೆ ಹೇಳಿದ್ದಾರೆ. ರಾಹುಲ್ ಗಾಂಧಿಯ ಸಾಮರ್ಥ್ಯವನ್ನು ಇತರ ಪಕ್ಷಗಳೂ ಒಪ್ಪಿಕೊಂಡಿವೆ. ರಾಹುಲ್ ನಮ್ಮ ನಾಯಕರಾಗಲು ಸೂಕ್ತ ವ್ಯಕ್ತಿ ಎಂದು ನಾವು ಸದಾ ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ನಾನು ಮೋದಿಯಂತಾ ಗಲಾರೆ. ಮೋದಿ ಅತ್ಯುತ್ತಮ ಮಾತುಗಾರ, ಆಡಳಿತಗಾರ. ಅವರು ಎಲ್ಲ ಮುಖ್ಯ ಮಂತ್ರಿಗಳಿಗೂ ಮಾದರಿಯಾಗಿದ್ದಾರೆ.
– ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಸಿಎಂ