ಪದ್ಮಾವತ್ ಚಿತ್ರ ಪ್ರದರ್ಶನಕ್ಕೆ ಉತ್ತರ ಪ್ರದೇಶ ಸರಕಾರದ ಅನುಮತಿ
Team Udayavani, Jan 13, 2018, 10:59 AM IST
ಲಕ್ನೋ : ಬಾಲಿವುಡ್ ಚಿತ್ರ ನಿರ್ಮಾಪಕ, ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಐತಿಹಾಸಿಕ ಕಥಾ ಚಿತ್ರ “ಪದ್ಮಾವತ್’ ಪ್ರದರ್ಶನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶ ಸರಕಾರ ಅನುಮತಿ ನೀಡಿದೆ.
ಪದ್ಮಾವತಿ ಚಿತ್ರಕ್ಕೆ ಹೆಸರು ಬದಲಾವಣೆ ಸೂಚಿಸಿ ಕೇಂದ್ರ ಸೆನ್ಸಾರ್ ಮಂಡಳಿ ಕಳೆದ ಡಿ.28ರಂದು ಯು/ಎ ಸರ್ಟಿಫಿಕೇಟ್ ನೀಡಿದ ಹೊರತಾಗಿಯೂ ರಾಜಸ್ಥಾನ ಮತ್ತು ಗುಜರಾತ್ ಸರಕಾರ ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿದ್ದವು. ಪದ್ಮಾವತ್ ಚಿತ್ರ ಇದೇ ಜನವರಿ 25ರಂದು ಬಿಡುಗಡೆಯಾಗಲಿದೆ.
ನಿನ್ನೆ ಇಲ್ಲಿನ ಸಿಬಿಎಫ್ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ರಾಜಸ್ಥಾನದ ಕರ್ಣಿ ಸೇನೆಯ 70ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಹಾಜಿ ಅಲಿ ಎದುರು ನಡೆದಿದ್ದ ಇನ್ನೊಂದು ಪ್ರತಿಭಟನೆಯಲ್ಲಿ 30ಕ್ಕೂ ಅಧಿಕ ಕರ್ಣಿ ಸೇನಾ ಬೆಂಬಲಿಗರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.