ಕನ್ನಡಿಗರು ಹರಾಮಿ ಎಂದ ಗೋವಾ ಸಚಿವ :ವ್ಯಾಪಕ ಆಕ್ರೋಶ
Team Udayavani, Jan 14, 2018, 3:46 PM IST
ಪಣಜಿ: ಗೋವಾ ನೀರಾವರಿ ಸಚಿವ ವಿನೋದ ಪಾಲೇಕರ್ ಅವರು ಕನ್ನಡಿಗರ ಬಗ್ಗೆ ಸಾಮಾಜಿಕ ತಾಣದಲ್ಲಿ ಕೀಳು ಮಟ್ಟದ ಹೇಳಿಕೆ ಬರೆದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಶನಿವಾರ ಖಾನಾಪುರ ತಾಲೂಕಿನ ಕಣಕುಂಬಿ ಬಿಳಿ ಇರುವ ಕಳಸಾ ನಾಲಾ ಕಾಮಗಾರಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತೆರಳಿದ್ದ ಪಾಲೇಕರ್ ಕರ್ನಾಟಕ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕನ್ನಡಿಗರು ಹರಾಮಿಗಳು ಎಂದು ಟ್ವೀಟ್ ಮಾಡಿದ್ದರು.
ಮಹದಾಯಿ ನಮ್ಮ ತಾಯಿ ಇದ್ದಂತೆ. ಈ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ನ್ಯಾಯಾಲಯ ಆದೇಶ ಬರುವವರೆಗೆ ಅದನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದರು.
ಕಳಸಾ ನೀರು ಬಿಡುವ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ ಇತ್ತೀಚೆಗೆ ಕರ್ನಾಟಕದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದ ಪತ್ರ ನ್ಯಾಯಾಲಯದ ಆದೇಶ ಅಲ್ಲ. ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ಅದು ನಮಗೆ ಸಂಬಂಧಿಸಿದ್ದಲ್ಲ. ಮಹದಾಯಿ ವಿವಾದ ಪ್ರಕರಣ ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗುವರೆಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದರು.
ಪಾಲೇಕರ್ ಟ್ವೀಟ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದು, ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.
ಕನ್ನಡಪರ ಹೋರಾಟಗಾರರು, ಮಹದಾಯಿ ಹೋರಾಟಗಾರರು ಪಾಲೇಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.