ಪದ್ಮಾವತಿ ವಿರುದ್ಧ ಚೇತಾವನಿ ರಾಲಿ; ಜೌಹರ್ ನಡೆಸುವ ಬೆದರಿಕೆ
Team Udayavani, Jan 22, 2018, 11:04 AM IST
ಜೈಪುರ : ಇದೇ ಜನವರಿ 25ರಂದು ಬಿಡುಗಡೆಯಾಗಲಿರುವ ಪದ್ಮಾವತಿ ಚಿತ್ರದ ಪ್ರದರ್ಶನವನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿ ರಾಜಸ್ಥಾನದ ಚಿತ್ತೂರ್ಗಡ್ ದಲ್ಲಿ ಸಾವಿರಾರು ಸಂಖ್ಯೆಯ ಮಹಿಳೆಯರು ಕತ್ತಿಯನ್ನು ಝಳಪಿಸುತ್ತಾ ಚೇತಾವನಿ ರಾಲಿ ನಡೆಸಿ, ಚಿತ್ರ ಬಿಡುಗಡೆಯಾದಲ್ಲಿ ತಾವು ಸತೀ ಸಹಗಮನ (ಜೌಹರ್) ನಡೆಸುವುದಾಗಿ ಬೆದರಿಕೆ ಹಾಕಿದರು.
ಸುಮಾರು 1.908 ಮಂದಿ ಮಹಿಳೆಯರು ಈಗಾಗಲೇ ತಾವು ಜೌಹರ್ ನಡೆಸುವುದಕ್ಕೆ ತಮ್ಮನ್ನು ನೋಂದಾವಣಿ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ಪ್ರತಿಭಟನಕಾರು ತಮ್ಮ ಜಾಥಾವನ್ನು ಚಿತ್ತೋರ್ಗಢ ಕೋಟೆಯಿಂದ ಪಟ್ಟಣದಲ್ಲಿನ ಮುಖ್ಯ ಮಾರುಕಟ್ಟೆ ಪ್ರದೇಶದ ವರೆಗೆ ನಡೆಸಿದರು. ಅನಂತರ ಅವರು ಜಿಲ್ಲಾಧಿಕಾರಿ ಇಂದ್ರಜಿತ್ ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ರಾಣಿ ಪದ್ಮಿನಿಯ ಘನತೆ ಮತ್ತು ಗೌರವದ ರಕ್ಷಣೆಗಾಗಿ ನಾವು ಈ ರಾಲಿಯನ್ನು ನಡೆಸುತ್ತಿದ್ದೇವೆ; ಜನವರಿ 25ರಂದು ಪದ್ಮಾವತಿ ಚಿತ್ರ ಬಿಡುಗಡೆಯನ್ನು ಈಗಲೇ ರದ್ದುಗೊಳಿಸದಿದ್ದರೆ ಜನವರಿ 24ರಂದು ನಾವು ಜೌಹರ್ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ಮೆರವಣಿಗೆಯಲ್ಲಿ ನೀಡಲಾಗಿದೆ.