ಕಾವೇರಿ ನೀರಿನ ವಿಚಾರ: ಒಂದಾದ ತಮಿಳುನಾಡು!
Team Udayavani, Feb 23, 2018, 6:00 AM IST
ಚೆನ್ನೈ: ತೀರಾ ಮಹತ್ವದ ಬೆಳವಣಿಗೆಯಲ್ಲಿ ಕಾವೇರಿ ವಿಚಾರವಾಗಿ ಇಡೀ ತಮಿಳುನಾಡು ಒಂದಾಗಿದೆ. 11 ವರ್ಷ ಗಳ ನಂತರ ತಮಿಳುನಾಡಿನಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕಾವೇರಿ ವಿಚಾರವಾಗಿ ಒಗ್ಗಟ್ಟಿನಿಂದ ಹೋರಾಟ
ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಮುಖ್ಯಮಂತ್ರಿ ಪಳನಿಸ್ವಾಮಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಿಗೆ ನಿಯೋಗವೊಂದನ್ನು ಕರೆದೊಯ್ಯಲೂ ನಿರ್ಧರಿಸಲಾಗಿದೆ.
2007ರ ಏ.15 ರಂದು ಅಂದಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಇದೇ ವಿಚಾರವಾಗಿ ಸರ್ವ ಪಕ್ಷ ಸಭೆ ಕರೆದಿದ್ದರು. ಆದರೆ, ಅಂದಿನಿಂದ ಇಂದಿನವರೆಗೆ ನೆರೆಯ ರಾಜ್ಯದಲ್ಲಿ ಸರ್ವಪಕ್ಷ ಸಭೆ ಎಂಬ ವಿಚಾರವೇ ಮುನ್ನೆಲೆಗೆ
ಬಂದಿರಲಿಲ್ಲ. ಅಲ್ಲದೆ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ರಾಜಕೀಯ ಒಮ್ಮತಾಭಿಪ್ರಾಯವೂ ಮೂಡಿರಲಿಲ್ಲ. ಆದರೆ, ಗುರುವಾರದ ಸಭೆ ಇವೆಲ್ಲವನ್ನೂ ಮೀರಿ, ಆಡಳಿತದಲ್ಲಿರುವ ಎಐಎಡಿಎಂಕೆ ಮತ್ತು ಡಿಎಂಕೆ ನಡುವಿನ ಸಂಬಂಧ ಸುಧಾರಣೆಗೂ ಸಾಕ್ಷಿಯಾಯಿತು. ಸಭೆಯ ಆರಂಭದಲ್ಲೇ ಮುಖ್ಯ ಮಂತ್ರಿ ಪಳನಿಸ್ವಾಮಿ ಮತ್ತು ಡಿಎಂಕೆ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ತೀರಾ ಆತ್ಮೀಯವಾಗಿ ಇದ್ದರಲ್ಲದೆ, ಒಗ್ಗಟ್ಟಿನ ಮಂತ್ರದ ಅವಶ್ಯಕತೆ ಬಗ್ಗೆಯೂ ಮಾತನಾಡಿದರು. ಈ ಸಭೆಯಲ್ಲಿ ಈ ಎರಡು ಪಕ್ಷಗಳ ಜತೆಗೆ ರೈತ ಸಂಘಟನೆಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು.
ತಮಿಳುನಾಡಿಗೆ ಅನ್ಯಾಯ: ಸುಪ್ರೀಂಕೋರ್ಟ್ನ ತೀರ್ಪಿನ ಹಿನ್ನೆಲೆಯಲ್ಲಿ ತಮಿಳುನಾಡಿಗೆ 14.75 ಟಿಎಂಸಿಯಷ್ಟು ನೀರು ಕಡಿಮೆಯಾಗಿದೆ. ಇದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿರುವವರಿಗಷ್ಟೇ ಅಲ್ಲ, ಇಡೀ ತಮಿಳುನಾಡಿಗೇ
ಸಮಸ್ಯೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಲಾಯಿತು. ಜತೆಗೆ ಈ ವಿಚಾರದಲ್ಲಿ ನ್ಯಾಯ ಒದಗಿಸುವಂತೆ ಪ್ರಧಾನಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಕರ್ನಾಟಕದ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದರು.