ಕ್ರಿಮಿನಲ್ ಮಾನನಷ್ಟ ದಾವೆ ಇತ್ಯರ್ಥಕ್ಕೆ ಜೇಟ್ಲಿ , ಕೇಜ್ರಿ ಕೋರ್ಟಿಗೆ
Team Udayavani, Apr 2, 2018, 6:14 PM IST
ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆಪ್ನ ಇತರ ನಾಲ್ವರು ನಾಯಕರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ತಾವು 2015ರಲ್ಲಿ ಮಾಡಿದ್ದ ಡಿಡಿಸಿಎ ವ್ಯವಹಾರಗಳ ಬಗೆಗಿನ ಸುಳ್ಳು ಮತ್ತು ನಿರಾಧಾರ ಆರೋಪಗಳಿಗಾಗಿ ಪ್ರಾಮಾಣಿಕ ಕ್ಷಮೆಯಾಚಿಸಿದ್ದು ಆ ಪ್ರಕಾರ ಜೇತ್ಲಿ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ದಾವೆಯನ್ನು ಹಿಂಪಡೆಯುವುದಕ್ಕೆ ಉಭಯತರು ಸಹಿ ಹಾಕಿರುವ ಅರ್ಜಿಯನ್ನು ದಿಲ್ಲಿ ಕೋರ್ಟಿಗೆ ಸಲ್ಲಿಸಲಾಗಿದೆ.
ಜೇಟ್ಲಿ ಮತ್ತು ಕೇಜ್ರಿವಾಲ್ ಅವರ ತಮ್ಮ ವಕೀಲರ ಮೂಲಕ ಸಲ್ಲಿಸಿರುವ ಅರ್ಜಿಯನ್ನು ನಾಳೆ ಮಂಗಳವಾರ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಅಡಿಶನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಹೇಳಿದ್ದಾರೆ.
ಡಿಡಿಸಿಎ ವ್ಯವಹಾರಗಳಿಗೆ ಸಂಬಂಧಿಸಿ ತಾವು ಜೇಟ್ಲಿ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಮತ್ತು ನಿರಾಧಾರವಾಗಿರುವುದನ್ನು ಮನಗಂಡಿರುವ ತಾವು ಜೇಟ್ಲಿ ಅವರಲ್ಲಿ ಈ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದ್ದೇವೆ ಎಂಬುದಾಗಿ ಅರವಿಂದ ಕೇಜ್ರಿವಾಲ್ ಮತ್ತು ಇತರ 4 ಆಪ್ ನಾಯಕರಾದ ಸಂಜಯ್ ಸಿಂಗ್, ರಾಘವ ಛಡ್ಡಾ, ಆಶುತೋಷ್ ಮತ್ತು ದೀಪಕ್ ಬಾಜಪೈ ಅವರು ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾರೆ.