ದೇಶದ ನಗದು ಸ್ಥಿತಿ ಸುಧಾರಣೆ: ಕೇಂದ್ರ, ಬ್ಯಾಂಕ್ ಪ್ರತಿಪಾದನೆ
Team Udayavani, Apr 19, 2018, 6:00 AM IST
ಹೊಸದಿಲ್ಲಿ: ಕರ್ನಾಟಕ ಸಹಿತ ದೇಶದ ಹಲವು ಭಾಗಗಳಲ್ಲಿ ಉಂಟಾಗಿರುವ ನಗದು ಪೂರೈಕೆ ಕೊರತೆ ನಿಧಾನವಾಗಿ ಸುಧಾರಣೆಯಾಗುತ್ತಿದ್ದು, ದೇಶದ 2.2 ಲಕ್ಷ ಎಟಿಎಂಗಳ ಪೈಕಿ ಶೇ.80ರಷ್ಟು ಕಾರ್ಯ ನಿರ್ವಹಿಸುತ್ತಿವೆ ಎಂದು ಕೇಂದ್ರ ಸರಕಾರ ಬುಧವಾರ ಹೇಳಿದೆ.
ಆದರೆ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಆಂಧ್ರಪ್ರದೇಶಗಳ ಕೆಲವು ಭಾಗಗಳಲ್ಲಿ ಎಟಿಎಂಗಳು ಕಾರ್ಯವೆಸುಗುತ್ತಿಲ್ಲ. ಕೇಂದ್ರ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಸರಕಾರಿ ಸ್ವಾಮ್ಯದ ವಿವಿಧ ಬ್ಯಾಂಕ್ಗಳ ಮುಖ್ಯಸ್ಥರ ಜತೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ. 500 ರೂ. ನೋಟುಗಳ ಪೂರೈಕೆಯನ್ನು ಇನ್ನಷ್ಟು ತ್ವರಿತಗೊಳಿಸುವಂತೆ ಸೂಚಿಸಿದ್ದಾರೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಬುಧವಾರ ಪರಿಸ್ಥಿತಿ ಶೇ.80ರಷ್ಟು ಸುಧಾರಿಸಿದೆ ಎಂದು ಎಸ್ಬಿಐ ಹೇಳಿದೆ.
ಇದೇ ವೇಳೆ ಎಸ್ಬಿಐನ ಸಂಶೋಧನ ವಿಭಾಗ ನಡೆಸಿದ ಅಧ್ಯಯನದ ಪ್ರಕಾರ, ದೇಶದಲ್ಲೀಗ 70 ಸಾವಿರ ಕೋಟಿ ರೂ. ನಗದು ಕೊರತೆ ಇದೆ. ಈ ಮೊತ್ತ ಎಟಿಎಂಗಳಿಂದ ಮಾಸಿಕ ವಿಥ್ಡ್ರಾ ಮಾಡುವ ಒಟ್ಟು ಮೊತ್ತದ ಮೂರನೇ ಒಂದು ಭಾಗಕ್ಕೆ ಸಮ. ಈ ಬಗ್ಗೆ ಅದು ಟಿಪ್ಪಣಿ ಸಿದ್ಧಪಡಿಸಿದೆ. ಸಾರ್ವಜನಿಕರಿಗೆ ದೊರೆಯುವ ನಗದು ಪ್ರಮಾಣ, ಡಿಜಿಟಲ್ ವಹಿವಾಟಿನಲ್ಲಿ ಹೆಚ್ಚಳ ಸಹಿತ ಹಲವು ಅಂಶಗಳನ್ನು ಗಮನದಲ್ಲಿರಿಸಿಕೊಂಡು ಟಿಪ್ಪಣಿ ಸಿದ್ಧಪಡಿಸಲಾಗಿದೆ.