ಪೊಲೀಸರಿಗೇ ಚಳ್ಳೆಹಣ್ಣು
Team Udayavani, Apr 25, 2018, 8:05 AM IST
ಸಹರನ್ಪುರ: ಇಲ್ಲಿನ ಫತೇಪುರ ಎಂಬ ಹಳ್ಳಿಯಲ್ಲಿ ಯಾವ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಆತನ ಮನೆಗೆ ಬಂದಿದ್ದರೋ, ಅದೇ ವ್ಯಕ್ತಿ ಪೊಲೀಸರಿಗೆ ತನ್ನನ್ನು ಬೇರೆ ಹೆಸರಿನಲ್ಲಿ ಪರಿಚಯಿಸಿ ಕೊಂಡು ಮಂಕುಬೂದಿ ಎರಚಿರುವ ಕುತೂಹಲಕಾರಿ ಘಟನೆ ನಡೆದಿದೆ. ಅಷ್ಟೇ ಅಲ್ಲ, ಅದೇ ವ್ಯಕ್ತಿಯ ಮುಂದೆಯೇ ಪೊಲೀಸರು ಆತನದೇ ‘ತಲೆಮರೆಸಿಕೊಂಡಾತ’ ಪೋಸ್ಟರ್ ಹಾಕಿ ತೆರಳಿದ್ದಾರೆ.
ಇಲ್ಲಿನ ಭೀಮ್ ಆರ್ಮಿ ಮುಖ್ಯಸ್ಥ ವಿನಯ್ ರತನ್ ಎಂಬವರೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದವರು. ಇಲ್ಲಿ ನಡೆದಿದ್ದ ಗಲಭೆ ಹಾಗೂ ಅಗ್ನಿಸ್ಪರ್ಶ ಪ್ರಕರಣ ಸಂಬಂಧ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ವಿನಯ್ ಓಡಾಡುತ್ತಿದ್ದರು. ಬಂಧನದ ಕಡೇ ಪ್ರಯತ್ನವಾಗಿ, ಪೊಲೀಸರ ತಂಡ ಸೋಮವಾರ ವಿನಯ್ ಮನೆಗೆ ಹೋಗಿತ್ತು. ವಿನಯ್ ಮನೆಯಲ್ಲೇ ಇದ್ದರು. ಆದರೆ, ಪೊಲೀಸರ ಆಗಮನದಿಂದ ಕೊಂಚವೂ ವಿಚಲಿತರಾಗದೇ, ತಾನು ವಿನಯ್ ಕಿರಿಯ ತಮ್ಮ ಸಚಿನ್ ಎಂದು ಪರಿಚಯಿಸಿಕೊಂಡು ನಯವಾಗಿ ಮಾತನಾಡಿ ಕಳುಹಿಸಿದ. ಖಾಲಿ ಕೈಯಲ್ಲಿ ಹಿಂದಿರುಗುವ ಮುನ್ನ ಪೊಲೀಸರು, ವಿನಯ್ ವಿರುದ್ಧ ನ್ಯಾಯಾಲಯ ಜಾರಿಗೊಳಿಸಿದ್ದ ‘ತಲೆಮರೆಸಿಕೊಂಡ ಆರೋಪಿ’ ಎಂಬ ನೋಟಿಸ್ ಅನ್ನು ಅವರ ಮುಂದೆಯೇ ಮನೆಯ ಬಾಗಿಲಿಗೆ ಹಚ್ಚಿದರು.
ಪೊಲೀಸ್ ತಂಡ ಠಾಣೆಯನ್ನು ಸೇರಿಕೊಂಡ ಬೆನ್ನಲ್ಲೇ, ಪೊಲೀಸರು ವಿನಯ್ ಜತೆ ಮನೆಯಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿರುವುದು ಅವರ ಗಮನಕ್ಕೆ ಬಂತು. ತಾವು ಯಾಮಾರಿದ್ದು ಅರಿವಾಗಿ, ತಕ್ಷಣ, ವಿನಯ್ ಮನೆಗೆ ದೌಡಾಯಿಸುವಷ್ಟರಲ್ಲಿ ವಿನಯ್ ಅಲ್ಲಿಂದ ಪರಾರಿಯಾಗಿದ್ದ. ಆದರೂ, ಕೆಲವೇ ಗಂಟೆಗಳಲ್ಲಿ ವಿನಯ್ ಕೋರ್ಟ್ಗೆ ಹಾಜರಾಗಿದ್ದಾರೆ. ಆದರೆ, ತಮ್ಮ ಮಾನ ಮರ್ಯಾದೆ ಹರಾಜು ಹಾಕಿದ ವಿಡಿಯೋ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.