ಇಮ್ರಾನ್ ಪ್ರಮಾಣಕ್ಕೆ ತೆರಳಿ ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಸಿಧು
Team Udayavani, Aug 19, 2018, 10:52 AM IST
ಅಮೃತ ಸರ: ಪಾಕಿಸ್ತಾನದ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಂಜಾಬ್ ಸಚಿವ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಸಿಧು ಅವರು ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷರ ಪಕ್ಕದ ಆಸನ ಕುಳಿತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಬಿಜೆಪಿ ಈ ಬಗ್ಗೆ ಕಿಡಿ ಕಾರಿದ್ದು ಸಿಧು ಅವರು ಮಾಡಿರುವುದು ಅಪರಾಧ, ಕೂಡಲೇ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದೆ.
ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ಸಿಧು ವಿರುದ್ಧ ಪ್ರತಿಭಟನೆಗಳು ನಡೆಸಲಾಗುತ್ತಿದ್ದು, ದೇಶದ್ರೋಹ ಎಸಗಿರುವ ಅವರನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.
ಈ ವಿಚಾರಕ್ಕೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತ ಪಡಿಸಿದ್ದು ಜಮ್ಮು-ಕಾಶ್ಮೀರ ಕಾಂಗ್ರೆಸ್ ಅಧ್ಯಕ್ಷ ಗುಲಾಂ ಅಹ್ಮದ್ ಮಿರ್, “ಸಿಧು ಜವಾಬ್ದಾರಿಯುತ ವ್ಯಕ್ತಿ. ಈ ವಿವಾದ ಕುರಿತು ಅವರೇ ಉತ್ತರಿಸಬೇಕು. ಪಿಒಕೆ ಅಧ್ಯಕ್ಷರ ಪಕ್ಕದಲ್ಲಿ ಅವರು
ಕುಳಿತುಕೊಳ್ಳಬಾರ ದಿತ್ತು’ ಎಂದಿದ್ದಾರೆ.
ಸಿಧು ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಾಮರ್ ಜಾವೇದ್ ಬಜ್ವಾರನ್ನು ಆಲಿಂಗಿಸಿಕೊಂಡ ಫೋಟೋ ವೈರಲ್ ಆಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.