ಸುಳ್ಳು ಸುದ್ದಿ ತಡೆಗೆ ಕೇಂದ್ರ ಹೊಸ ನಿಯಮ ಜಾರಿ?
Team Udayavani, Aug 24, 2018, 8:15 AM IST
ಹೊಸದಿಲ್ಲಿ: ದೇಶಾದ್ಯಂತ ವದಂತಿ ನಂಬಿ ಥಳಿತ ಘಟನೆ ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಹೊಣೆಗಾರಿಕೆ ಹೆಚ್ಚಿಸಲು ಕೇಂದ್ರ ಸರಕಾರವೇ ಹಲವು ನಿಯಂತ್ರಣಾ ಕ್ರಮ ಜಾರಿಗೆ ಮುಂದಾಗಿದೆ. ವಾಟ್ಸ್ಆ್ಯಪ್ ಕೂಡ ಸುದ್ದಿಗಳ ಮೂಲ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಕ್ರುದ್ಧಗೊಂಡಿರುವ ಕೇಂದ್ರ ಸರಕಾರ ಹೊಸ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಮುಂದಿನ ತಿಂಗಳ ಒಳಗಾಗಿ ಹೊಸ ನಿಯಮ ರೂಪಿತವಾಗಲಿದೆ. ಅದರಲ್ಲಿ ಆಕ್ಷೇಪಾರ್ಹ ಕಮೆಂಟ್ಗಳನ್ನು ನಿಯಂತ್ರಿಸಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಈ ಬಗ್ಗೆ ‘ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್79ಕ್ಕೆ ಹೆಚ್ಚಿನ ನಿಯಂತ್ರಣ ಕ್ರಮಗಳನ್ನು ಸೇರಿಸಲೂ ನಿರ್ಧರಿಸಲಾಗಿದೆ. ಪ್ರಸ್ತಾವಿತ ನಿಯಮ ಪ್ರಕಾರ, ಜಾಗತಿಕವಾಗಿ ಇಂಟರ್ನೆಟ್ ಸಂಪರ್ಕ ಒದಗಿಸುವ ಸಂಸ್ಥೆಗಳು ದೂರು ವಿಲೇವಾರಿ ಅಧಿಕಾರಿ ನೇಮಕ ಮಾಡಬೇಕು. ದೂರು ದಾಖಲಾದ ಗಂಟೆಗಳ ಅವಧಿಯಲ್ಲಿ ಅದರ ಪರಿಹಾರ ಮತ್ತು ಅದರ ಮೂಲ ಪತ್ತೆ ಹಚ್ಚುವ ಕ್ರಮಗಳಾಗಬೇಕು. ಇದೇ ನಿಯಮ ಎಸ್ಎಂಎಸ್ಗೂ ಅನ್ವಯವಾಗುತ್ತದೆ ಎಂದು ವರದಿ ಹೇಳಿದೆ.