ಟಿಎಂಸಿ ಗೆದ್ದ 20,000 ಸೀಟುಗಳಿಗೆ ಮರು ಚುನಾವಣೆ ಇಲ್ಲ: ಸುಪ್ರೀಂ
Team Udayavani, Aug 24, 2018, 11:52 AM IST
ಹೊಸದಿಲ್ಲಿ : ಈ ವರ್ಷ ಮೇ ತಿಂಗಳಲ್ಲಿ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಅವಿರೋಧವಾಗಿ ಜಯಿಸಿದ್ದ ಪಶ್ಚಿಮ ಬಂಗಾಲದ 20,000ಕ್ಕೂ ಅಧಿಕ ಸ್ಥಳೀಯಾಡಳಿತ ಸ್ಥಾನಗಳಿಗೆ ಮರು ಚುನಾವಣೆ ನಡೆಸಲಾಗದು ಎಂದು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಹೇಳಿದೆ.
ಪಶ್ಚಿಮ ಬಂಗಾಲದ ಗ್ರಾಮ ಪಂಚಾಯತಿ, ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿಯ ಒಟ್ಟು 58,692 ಸ್ಥಾನಗಳ ಪೈಕಿ 20,159 ಸ್ಥಾನಗಳನ್ನು ಟಿಎಂಸಿ ಅವಿರೋಧವಾಗಿ ಜಯಿಸಿತ್ತು. ಈ ವರ್ಷ ಮೇ ತಿಂಗಳಲ್ಲಿ ನಡೆದಿದ್ದ ರಾಜ್ಯದ ಸ್ಥಳೀಯಾಡಳಿತೆ ಚುನಾವಣೆಯಲ್ಲಿ ವ್ಯಾಪಕ ಹಿಂಸೆ ಉಂಟಾಗಿತ್ತು.
ಅವಿರೋಧ ಜಯ ದಾಖಲಾಗಿದ್ದ ಈ ಸೀಟುಗಳಲ್ಲಿ ಮರು ಚುನಾವಣೆ ನಡೆಸುವ ಸಂಬಂಧ ಇ-ಮೇಲ್, ವಾಟ್ಸಾಪ್ ಮೂಲಕವೂ ನಾಮಪತ್ರ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಿ ಕಲ್ಕತ್ತ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಇದೇ ವೇಳೆ ವಜಾ ಮಾಡಿತು.
ಚುನಾವಣಾ ಫಲಿತಾಂಶದಿಂದ ಸಂತ್ರಸ್ತರಾಗಿರುವ ಯಾರೇ ಆದರೂ 30 ದಿನಗಳ ಒಳಗೆ ಸಂಬಂಧಿತ ನ್ಯಾಯಾಲಯದಲ್ಲಿ ತಮ್ಮ ಅರ್ಜಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.
ಪಶ್ಚಿಮ ಬಂಗಾಲದ ಸ್ಥಳೀಯಾಡಳಿತ ಚುನಾವಣೆ ವೇಳೆ ತಮ್ಮ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸದಂತೆ ತಡೆಯೊಡ್ಡಲಾಗಿತ್ತು ಎಂದು ಬಿಜೆಪಿ ಮತ್ತು ಸಿಪಿಐಎಂ ದೂರಿದ್ದವು.
ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಜಸ್ಟಿಸ್ಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು, ಪಶ್ಚಿಮ ಬಂಗಾಲದ ಸ್ಥಳೀಯಾಡಳಿತೆಯ ಚುನಾವಣೆಯಲ್ಲಿ 20,000ಕ್ಕೂ ಅಧಿಕ ಸೀಟುಗಳಲ್ಲಿ ಒಂದು ಪಕ್ಷದ ಅಭ್ಯರ್ಥಿಗಳು ಮಾತ್ರವೇ ನಾಮಪತ್ರ ಸಲ್ಲಿಸಿರುವುದು ಮತ್ತು ಇತರ ಪಕ್ಷದ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿ, ಈ ರೀತಿಯ ಸ್ಥಿತಿ ಭವಿಷ್ಯದಲ್ಲಿ ಉಂಟಾಗದಂತೆ ನೋಡಿಕೊಳ್ಳಬೇಕಾದ ಮತ್ತು ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾದ ಅಗತ್ಯವಿದೆ ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್