ಬಣ್ಣ ಕಳೆದುಕೊಂಡ ಓಣಂ !
Team Udayavani, Aug 25, 2018, 6:00 AM IST
ಪತ್ತನಂತಿಟ್ಟ (ಕೇರಳ): “ಉಟ್ಟ ಬಟ್ಟೆಯಲ್ಲೇ ಹಬ್ಬ ಆಚರಿಸುವ ಸ್ಥಿತಿ ಇದ್ದರೆ ಸಂಭ್ರಮ ಎಲ್ಲಿಂದ ಬಂತು?’ ಇದು ನೆರೆ ಪೀಡಿತ ಪ್ರದೇಶ ಪತ್ತನಂತಿಟ್ಟದಲ್ಲಿ “ಉದಯವಾಣಿ’ ಪ್ರತಿನಿಧಿಗಳಿಗೆ ಎದುರಾದ ಪ್ರಶ್ನೆ. ಇಂದು ಇಡೀ ಕೇರಳದಲ್ಲಿ ತಿರುಓಣಂ. ಎಲ್ಲ ಕೇರಳಿಗರೂ ಬದುಕಿನಲ್ಲಿ ಸಂಭ್ರಮವನ್ನು ತುಂಬಿ ಕೊಳ್ಳುವ ಹೊತ್ತು. ಆದರೆ ಈ ವರ್ಷ ಸಂಭ್ರಮಕ್ಕೆ ಬಣ್ಣಗಳೇ ಇಲ್ಲ.
ಓಣಂ ದಿನ ಕೇರಳದ ಮನೆಗಳ ಅಂಗಳಗಳಲ್ಲಿ ಪೂಕಳಂ (ಹೂವಿನ ರಂಗೋಲಿ) ಕಂಗೊಳಿಸುತ್ತದೆ. ಆದರೀಗ ಬರೀ ನೀರು, ಕೆಸರು. ಆದರೂ ಇಲ್ಲಿನವರ ಜೀವನಪ್ರೀತಿ ದೊಡ್ಡದು. ಅದರ ಮಧ್ಯೆಯೇ ಇರು ವುದರಲ್ಲೇ ಸರಳವಾಗಿ ಓಣಂ ಆಚರಿಸುವುದೆಂಬ ಭಾವನೆ ಶುಕ್ರವಾರ ತೋರುತ್ತಿತ್ತು.
ಪತ್ತನಂತಿಟ್ಟ ಜಿಲ್ಲೆಯೂ ಹೆಚ್ಚು ನಷ್ಟಕ್ಕೀಡಾಗಿದೆ. ಇಲ್ಲಿಯೂ ಪಂಪಾ ನದಿ ಉಕ್ಕಿ ಹರಿದು ಅವಾಂತರ ಸೃಷ್ಟಿಸಿದೆ. ಇದು ಇದೊಂದೇ ಜಿಲ್ಲೆಯ ಪರಿಸ್ಥಿತಿಯಲ್ಲ; ಬಹುತೇಕಗಳದ್ದು. ಎಲ್ಲ ನೆರೆ ಪೀಡಿತ ಪ್ರದೇಶಗಳ ಜನರೂ ಇದೇ ನೋವಿನಲ್ಲಿದ್ದಾರೆ. ಹೊಸವರ್ಷದ ಪ್ರತೀಕವಾದ ತಿರು ಓಣಂ ಈ ಬಾರಿ ರಾಜ್ಯಾದ್ಯಂತ ನಿರಾಸೆ ಮೂಡಿಸಿದೆ.
ಬದುಕೇ ಹಬ್ಬ
ಹಬ್ಬಕ್ಕಾಗಿ ಮನೆ ಅಲಂಕರಿಸಬೇಕಾಗಿದ್ದ ಮನೆ ಮಂದಿ ಮನೆಯೊಳಗಿದ್ದ ಕೆಸರು ತೆಗೆಯಲು ಹರ ಸಾಹಸ ಪಡುತ್ತಿದ್ದಾರೆ. ಪಟ್ಟಣಂತಿಟ್ಟ ಜಿಲ್ಲೆಯ, ಪಂಪಾನದಿ ತಟದ, ಕೋಳಂಚೆರಿ ಪ್ರದೇಶದ ಸುಮಾರು 250 ಮನೆಗಳು ಸಂಪೂರ್ಣ ಜಲಾವೃತ ಗೊಂಡಿದ್ದವು. ಇಂದು ಈ ಮನೆಗಳ ಎದುರು ಹೋದರೆ ಕಾಣುವ ದೃಶ್ಯ ಒಂದೇ ತೆರನಾದದ್ದು. ಅದೆಂದರೆ, ರಸ್ತೆಯುದ್ದಕ್ಕೂ ಫ್ರಿಡುj, ಟಿವಿ, ಲ್ಯಾಪ್ ಟಾಪ್, ಪೀಠೊಪಕರಣ ಒಣಗುತ್ತಿರುವಂಥದ್ದು. ಎರಡು ದಿನಗಳಿಂದ ತುಸು ಬಿಸಿಲು ಕಂಡಿರುವುದೇ ಇವರೆಲ್ಲರ ಬದುಕಿಗೆ ಹೊಸ ಹುರುಪು ತುಂಬಿದೆ. ಮನೆಯನ್ನು ಶುದ್ಧಗೊಳಿಸಿ ರಾಶಿ ಬಿದ್ದಿದ್ದ ಕೆಸರು ಶುಚಿಗೊಳಿಸುವ ಕೆಲಸದಲ್ಲಿ ಎಲ್ಲರೂ ತೊಡಗಿದ್ದರು.
ಪ್ರತೀ ಬಾರಿಯೂ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವುದು ಸಂಪ್ರದಾಯ. ಈ ವರ್ಷ ಅದಕ್ಕೆ ತಿಲಾಂಜಲಿ. “ನಾವು ಇದ್ದ ಎಲ್ಲ ಬಟ್ಟೆಗಳನ್ನು ಕಳೆದುಕೊಂಡು, ಪರಿಹಾರ ಕೇಂದ್ರಗಳಲ್ಲಿ ದಾನಿಗಳು ನೀಡಿದ ಬಟ್ಟೆಗಳಿಂದ ಹಬ್ಬ ಆಚರಿಸುವಂತಾಗಿದೆ. ಇನ್ನು ಕೆಲವರಿಗೆ ಉಟ್ಟ ಬಟ್ಟೆಯಲ್ಲೇ ಹಬ್ಬವನ್ನು ಆಚರಿಸಬೇಕಾದ ಅನಿವಾರ್ಯತೆ’ ಎನ್ನುತ್ತಾರೆ ಪಂಪಾ ನದಿ ತಟದ ಮೇಲ್ ಕೆರೆ ನಿವಾಸಿ ಎಲಿಯಾಮ ಸೈಮನ್.
ಇವರ ಹಬ್ಬ ಆಚರಣೆ
ಹಬ್ಬದ ರಜೆಯನ್ನು ಯುವಜನರು ಬೀಚ್, ಮಾಲ…, ಪೇಟೆ ಸುತ್ತಾಟ, ಸಿನೆಮಾ, ಗೆಳೆಯರ ಜತೆ ಮೋಜಿನಿಂದ ಕಳೆಯುವುದು ಪ್ರತಿ ವರ್ಷದ ಲೆಕ್ಕಾಚಾರ. ಈ ಬಾರಿ ಸ್ವಯಂಸೇವಕರಾಗಿ ನೆರೆಪೀಡಿತ ಪ್ರದೇಶಗಳ ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಒಂದು ರೀತಿಯಲ್ಲಿ ಬೇರೊಬ್ಬರ ಬಾಳಲ್ಲಿ ಸಂತಸ ತುಂಬುವ ಕಾರ್ಯ. ಅಂಗಡಿ ಮುಂಗಟ್ಟು ಖಾಲಿ ಇದರೊಂದಿಗೆ ಹಬ್ಬದ ಹಿನ್ನೆಲೆಯಲ್ಲಿ ಬಿರುಸಿನ ವ್ಯಾಪಾರದಲ್ಲಿರುತ್ತಿದ್ದ ಅಂಗಡಿ ಮುಂಗಟ್ಟುಗಳೆಲ್ಲ ಖಾಲಿ. ಇನ್ನು ಕೆಲವು ಅಂಗಡಿಗಳಲ್ಲಿ ನೆರೆಯಲ್ಲಿ ಮುಳುಗಿದ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದರಲ್ಲಿ ತಲ್ಲೀನರಾಗಿದ್ದರು.
ಬಣ್ಣಗಳೇ ಇಲ್ಲ !
ಹಲವು ಬಣ್ಣಗಳ ಪೂಕಳಂ ನೋಡುವುದಕ್ಕೇ ಸೊಗಸು. ಹೂವುಗಳಲ್ಲೇ ಚಿತ್ತಾಕರ್ಷಕವಾದ ರಂಗೋಲಿಯನ್ನು ಬಿಡಿಸಿ ಮನೆಯಲ್ಲಿ ಸಂಭ್ರಮವನ್ನು ತುಂಬಿಕೊಳ್ಳುತ್ತಾರೆ ಕೇರಳಿಗರು. ಈ ಪೂಕಳಂ ಜಗತ್ತಿನಾದ್ಯಂತ ಪ್ರಸಿದ್ಧ. ಎಷ್ಟು ವಿಪರ್ಯಾಸವೆಂದರೆ, ಈ ಬಾರಿಯ ಓಣಂಗೆ ಅರಳುವ ಹೂವುಗಳಲ್ಲಿ ಬಣ್ಣಗಳೇ ಇಲ್ಲ !
ನನಗೆ ನಿಜದ ಹಬ್ಬ
ನಾನು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದೆ. ಡಯಾಲಿಸಿಸ್ಗೆ ಆಸ್ಪತ್ರೆಗೆ ಹೋಗಲೇಬೇಕಿತ್ತು. ಆದರೆ ಏಕಾಏಕಿ ನುಗ್ಗಿದ ನೆರೆನೀರಿನಿಂದ ಗಾಬರಿಗೊಂಡು ಮೇಲ್ಮಹಡಿಯಲ್ಲಿ ಬಂದಿಯಾದೆ. ನೀರು ಅಲ್ಲಿಗೂ ಆವರಿಸಿದಾಗ ಬದುಕುವ ಆಸೆಯೇ ಕಮರಿ ಹೋಯಿತು. ಆ ಸಂದರ್ಭ ಯೋಧರು ಬಂದು ನನ್ನನ್ನು ಕಾಪಾಡಿದರು. ಹಾಗಾಗಿ ಯೋಧರು ಕೊಟ್ಟ ಬದುಕು, ನನಗೆ ಹೊಸ ಹಬ್ಬ.
ಅಬ್ರಹಾಂ, ಕುಂಬನಾಡು ನಿವಾಸಿ
ಪ್ರಜ್ಞಾ ಶೆಟ್ಟಿ , ಸತೀಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್