ಉಗ್ರರಿಂದ ಅಪಹರಣ ತಂತ್ರ
Team Udayavani, Sep 1, 2018, 6:00 AM IST
ಶ್ರೀನಗರ: ಜಗತ್ತಿನ ಎರಡನೇ “ಮೋಸ್ಟ್ ವಾಂಟೆಡ್’ ಉಗ್ರ ಹಿಜ್ಬುಲ್ ಮುಜಾಹಿದೀನ್ ನಾಯಕ ಸಯ್ಯದ್ ಸಲಾಹುದ್ದೀನ್ ಪುತ್ರನ ಬಂಧನ ಹಾಗೂ ಕಣಿವೆ ರಾಜ್ಯದ ಕುಖ್ಯಾತ ಉಗ್ರರ ಸಂಬಂಧಿಕರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿರುವುದರ ವಿರುದ್ಧ ಸಿಡಿದೆದ್ದಿದ್ದ ಉಗ್ರರು, ನಾಟಕೀಯ ಬೆಳವಣಿಗೆಯಲ್ಲಿ ಅಪಹರಣ ಮಾಡಿದ್ದ ಪೊಲೀಸರ ಎಲ್ಲ ಸಂಬಂಧಿಗಳನ್ನು ಬಿಡುಗಡೆ ಮಾಡಿದ್ದಾರೆ.
ಇತ್ತ, ಪೊಲೀಸರ ವಶದಲ್ಲಿದ್ದ ಉಗ್ರರ ಎಲ್ಲ 11 ಮಂದಿ ಸಂಬಂಧಿಕರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ತಮ್ಮ ವಶದಲ್ಲಿದ್ದ ಪೊಲೀಸರ ಏಳು ಮಂದಿ ಸಂಬಂಧಿಗಳನ್ನು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ್ದಾರೆಂದು ಜಮ್ಮು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೇದ್ ತಿಳಿಸಿದ್ದಾರೆ. ಪೊಲೀಸರಿಂದ ಬಿಡುಗಡೆಗೊಂಡವರಲ್ಲಿ ಕುಖ್ಯಾತ ಉಗ್ರ ಹಾಗೂ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ರಿಯಾಜ್ ನೈಕೂನ ತಂದೆ ಅಸಾದುಲ್ಲಾ ನೈಕೂ ಸಹ ಇದ್ದಾರೆ. ಉಗ್ರರ ಸಂಬಂಧಿಕರನ್ನು ಕೇವಲ ವಿಚಾರಣೆಗಾಗಿ ಮಾತ್ರವೇ ಕರೆದೊಯ್ಯಲಾಗಿತ್ತು ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಸಯ್ಯದ್ ಪುತ್ರ ಎನ್ಐಎ ವಶಕ್ಕೆ
ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ) ಗುರುವಾರ ಬಂಧಿಸಿದ್ದ, ಹಿಜ್ಬುಲ್ ಮುಜಾಹಿದೀನ್ನ ನಾಯಕ ಸಯ್ಯದ್ ಸಲಾಹುದ್ದೀನ್ ಪುತ್ರ ಸಯ್ಯದ್ ಅಹ್ಮದ್ ಶಕೀಲ್ಗೆ ದಿಲ್ಲಿ ಹೈಕೋರ್ಟ್ ಸೆ.10ರ ವ ರೆಗೆ ಕಸ್ಟಡಿ ವಿಧಿಸಿದೆ. 2011ರಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪೂರಕವಾಗಿ ಉಗ್ರರಿಗೆ ಆರ್ಥಿಕ ಸಹಾಯ ಮಾಡಿದ ಆರೋಪ ಶಕೀಲ್ ಮೇಲಿದೆ.
ಕುಖ್ಯಾತ ಉಗ್ರರ ಪಟ್ಟಿ ಬಿಡುಗಡೆ
ಇದೆಲ್ಲದರ ನಡುವೆಯೇ ಜಮ್ಮು ಕಾಶ್ಮೀರ ಪೊಲೀಸರು ಕುಖ್ಯಾತ ಉಗ್ರರ ಹೊಸ ಪಟ್ಟಿಯೊಂದನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಅತ್ಯಂತ ಕಟ್ಟಾ ಉಗ್ರಗಾಮಿಗಳಾದ ಝಾಕೀರ್ ಮೂಸಾ, ಹಿಜ್ಬುಲ್ನ ಅಗ್ರ ಕಮಾಂಡರ್ ರಿಯಾಜ್ ನೈಕೂ ಸಹಿತ ಲಷ್ಕರ್-ಎ-ತಯ್ಯಬಾ, ಅಲ್ ಬದ್ರ್, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಹಾಗೂ ಅನ್ವರ್ ಗಜ್ವತ್-ಉಲ್-ಹಿಂದೂ ಸಂಘಟನೆಗಳಿಗೆ ಸೇರಿದ ಒಟ್ಟು 117 ಉಗ್ರರನ್ನು ಹೆಸರಿಸಲಾಗಿದೆ.
ಏಕೆ ಈ “ಉಭಯ’ ಅಪಹರಣ?
ಬುಧವಾರ ಉಗ್ರರು ನಾಲ್ವರು ಪೊಲೀಸರನ್ನು ಕೊಂದ ಹಿನ್ನೆಲೆಯಲ್ಲಿ, ಉಗ್ರರ ಮನೆಗಳನ್ನು ಜಾಲಾಡಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅವರ ಸಂಬಂಧಿಕರನ್ನು ವಶಕ್ಕೆ ಪಡೆದಿತ್ತು. ಸಂಬಂಧಿಕರ ಬಿಡುಗಡೆಗಾಗಿ ಪೊಲೀಸರ ಮೇಲೆ ಒತ್ತಡ ಹೇರಲು, ಉಗ್ರರು ಗುರುವಾರ ರಾತ್ರಿ ಜಮ್ಮು ಕಾಶ್ಮೀರದ ಶೋಪಿಯಾನ್, ಕುಲ್ಗಾಮ್, ಅನಂತ ನಾಗ್, ಅವಂತಿ ಪೊರ ಪ್ರಾಂತ್ಯಗಳಲ್ಲಿನ ಪೊಲೀಸರ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ರಾತ್ರಿ ವೇಳೆ ದಾಳಿ ನಡೆಸಿ 7 ಮಂದಿ ಕುಟುಂಬ ಸದಸ್ಯರನ್ನು ಅಪಹರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು