ಕಾಂಗ್ರೆಸ್ನಿಂದ ರಾಮ ಮಂದಿರ ವಿರೋಧಿ ಭಾವನೆ: ಬಿಜೆಪಿ ಆರೋಪ
Team Udayavani, Oct 15, 2018, 4:42 PM IST
ಹೊಸದಿಲ್ಲಿ : ‘ಕಾಂಗ್ರೆಸ್ ಪಕ್ಷ ತನ್ನ ನಾಯಕರನ್ನು ಬಳಸಿಕೊಂಡು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿರೋಧಿ ಭಾವನೆಯನ್ನು ಜನಮನದಲ್ಲಿ ತೀವ್ರಗೊಳಿಸುತ್ತಿದೆ’ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದ್ದು “ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿಂದು ಹೌದೇ ಅಲ್ಲವೇ?’ ಎಂದು ಪ್ರಶ್ನಿಸಿದೆ.
“ಯಾವನೇ ಒಬ್ಬ ಹಿಂದು ಅನ್ಯ ಧರ್ಮೀಯರ ಆರಾಧನಾ ಸ್ಥಳವನ್ನು ಕೆಡಹಿ ಅಲ್ಲಿ ರಾಮ ಮಂದಿರ ನಿರ್ಮಿಸುವುದನ್ನು ಬಯಸುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿರುವುದಕ್ಕೆ ಪ್ರತಿಯಾಗಿ ಬಿಜೆಪಿ ಈ ಮಾತನ್ನು ಆಡಿದೆ. 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾದ ಪ್ರಕರಣವನ್ನು ಶಶಿ ತರೂರ್ ತಮ್ಮ ಹೇಳಿಕೆಯ ಮೂಲಕ ಮತ್ತೆ ನೆನಪಿಸಿಕೊಡುವ ಯತ್ನ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ
“ರಾಮ ಮಂದಿರ ಕೇಸಿನಲ್ಲಿ ನಾವು ಸುಪ್ರೀಂ ಕೋರ್ಟಿನ ತೀರ್ಪು ಬೇಗನೆ ಬರಲೆಂದು ಆಶಿಸುತ್ತಿರುವಾಗ ಕಾಂಗ್ರೆಸ್ ಪಕ್ಷ ಅದನ್ನು ವಿಳಂಬಗೊಳಿಸಲು ಸರ್ವ ಪ್ರಯತ್ನ ನಡೆಸುತ್ತಿದೆ’ ಎಂದು ಬಿಜೆಪಿ ವಕ್ತಾರ ಜಿ ವಿ ಎಲ್ ನರಸಿಂಹ ರಾವ್ ಆರೋಪಿಸಿದರು.
“ಒಂದಲ್ಲ ಒಂದು ಕಾರಣ ಒಡ್ಡಿ ಕಾಂಗ್ರೆಸ್ ಪಕ್ಷ ರಾಮಜನ್ಮಭೂಮಿ ಪ್ರಕರಣದ ತೀರ್ಪು ವಿಳಂಬವಾಗುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತಲೇ ಬಂದಿದೆ; ಇದಕ್ಕೆ ಈಗ ಶಶಿ ತರೂರ್ ಅವರು ಹೊಸ ಕೊಡುಗೆ ನೀಡಿದ್ದಾರೆ; ರಾಮ ಮಂದಿರ ನಿರ್ಮಾಣದ ವಿಷಯವನ್ನು ತರೂರ್ ಬಾಬರಿ ಮಸೀದಿ ಧ್ವಂಸ ಪ್ರಕರಣದೊಂದಿಗೆ ಜೋಡಿಸುತ್ತಿದ್ದಾರೆ’ ಎಂದು ರಾವ್ ಆರೋಪಿಸಿದರು.