ಬಿಷಪ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಪಾದ್ರಿ ನಿಗೂಢ ಸಾವು
Team Udayavani, Oct 23, 2018, 6:00 AM IST
ಹೋಶಿಯಾಪುರ್/ಕೊಟ್ಟಾಯಂ: ಕೇರಳದ ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೋ ಮುಲಕ್ಕಲ್ ವಿರುದ್ಧದ ಪ್ರಮುಖ ಸಾಕ್ಷಿ ಫಾದರ್ ಕುರಿಯಕೋಸ್ ಕಟ್ಟು ತಾರಾ (62) ಅವರು ಸೋಮವಾರ ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಪಂಜಾಬ್ನ ಹೋಶಿ ಯಾಪುರ್ ಜಿಲ್ಲೆಯ ದಸುಯಾ ದಲ್ಲಿನ ಕೆಥೊಲಿಕ್ ಚರ್ಚ್ನ ಆವರಣದಲ್ಲಿ ಇರುವ ತಮ್ಮ ಕೊಠಡಿಯೊಳಗೆ ಪಾದ್ರಿ ಕುರಿಯಕೋಸ್ ಅವರ ಮೃತದೇಹ ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪಾದ್ರಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪಾದ್ರಿ ಕುರಿಯಕೋಸ್ ಅವರ ದೇಹದಲ್ಲಿ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಆದರೆ ಸಾವಿಗೂ ಮುನ್ನ ಅವರು ವಾಂತಿ ಮಾಡಿಕೊಂಡಿ ರುವುದು ಗೊತ್ತಾಗಿದೆ. ನಾವು ಎಲ್ಲ ಆಯಾಮಗಳಿಂದ ಲೂ ತನಿಖೆ ಆರಂಭಿಸಿದ್ದೇವೆ ಎಂದು ಡಿಎಸ್ಪಿ ಎ.ಆರ್. ಶರ್ಮಾ ತಿಳಿಸಿದ್ದಾರೆ. ರವಿವಾರ ರಾತ್ರಿ ಊಟ ಮುಗಿಸಿ ಪಾದ್ರಿ ಕುರಿಯಕೋಸ್ ತಮ್ಮ ಕೊಠಡಿಗೆ ಹೋಗಿ ಮಲಗಿದ್ದರು. ಸೋಮವಾರ ಬೆಳಗ್ಗೆ ಕೊಠಡಿ ಸ್ವತ್ಛಗೊಳಿಸುವ ವ್ಯಕ್ತಿ ಅಲ್ಲಿಗೆ ಹೋದಾಗ ಒಳಗಿನಿಂದ ಚಿಲಕ ಹಾಕಲಾಗಿತ್ತು. ಎಷ್ಟು ಬಾರಿ ಬಾಗಿಲು ಬಡಿದರೂ ಫಾದರ್ ಬಾಗಿಲು ತೆರೆಯಲಿಲ್ಲ. ಕೊನೆಗೆ ಆತ ಕಿಟಕಿಯಿಂದ ಇಣುಕಿ ನೋಡಿದಾಗ ಪಾದ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಕಂಡುಬಂತು. ಇತರರನ್ನು ಕರೆಸಿ ಬಾಗಿಲು ತೆರೆದು ಒಳಗೆ ಹೋದಾಗ ಅವರು ಮೃತಪಟ್ಟಿದ್ದರು ಎಂದರು. ಅತ್ಯಾಚಾರ ಆರೋಪ ಹೊತ್ತಿರುವ ಬಿಷಪ್ ಅವರ ವಿರುದ್ಧ ಪಾದ್ರಿ ಕುರಿಯಕೋಸ್ ಸಾಕ್ಷ್ಯ ನುಡಿದಿದ್ದರು.