ಅಮಿತ್ ಶಾ ಗೆ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಹಂಬಲ
Team Udayavani, Oct 29, 2018, 4:11 PM IST
ತಿರುವನಂತಪುರ : ಎಲ್ಲ ವಯೋವರ್ಗದ ಮಹಿಳೆಯರಿಗೆ ಕೇರಳದ ಶಬರಿಮಲೆ ದೇವಸ್ಥಾವನ್ನು ಪ್ರವೇಶಿಸುವ ಅವಕಾಶವನ್ನು ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನ ಮೂಲಕ ನೀಡಿರುವ ಹೊರತಾಗಿಯೂ ದೇವಳಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯುವ ಭಕ್ತರಿಗೆ ತನ್ನ ಪಕ್ಷದ (ಬಿಜೆಪಿಯ) ಸಂಪೂರ್ಣ ಬೆಂಬಲ ಇದೆ ಎಂದು ಬಹಿರಂಗವಾಗಿ ಘೋಷಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇದೇ ನ.17ರಿಂದ ಆರಂಭಗೊಳ್ಳುವ ಶಬರಿಮಲೆ ವಾರ್ಷಿಕ ಯಾತ್ರಾ ಋತುವಿನಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ತಾನು ಬಯಸಿರುವುದಾಗಿ ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ; ಆದರೆ ಈ ತನಕ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಕೇರಳ ಬಿಜೆಪಿ ಘಟಕದ ಹಿರಿಯ ನಾಯಕರೋರ್ವರು ಇಂದಿಲ್ಲಿ ಹೇಳಿದರು.
ಶಬರಿಮಲೆ ದೇವಳದ ವಿಷಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರಕಾರ ಬೆಂಕಿಯೊಂದಿಗೆ ಸರಸವಾಡುತ್ತಿದೆ ಎಂದು ಆರೋಪಿಸಿದ್ದ ಅಮಿತ್ ಶಾ, ಕೇರಳದಲ್ಲಿ ತುರ್ತು ಪರಿಸ್ಥಿತಿಯಂತಹ ಸ್ಥಿತಿ ಇದೆ ಎಂದು ದೂರಿದ್ದರು.