ಅರವಣಕ್ಕೆ ಬಿತ್ತು ವಕ್ರದೃಷ್ಟಿ
Team Udayavani, Nov 9, 2018, 5:52 AM IST
ತಿರುವನಂತಪುರ/ಹೊಸದಿಲ್ಲಿ: ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ನೀಡಲಾಗುವ ಅರವಣ ಪಾಯಸ ಪ್ರಸಾದದ ಮೇಲೆ ಸಿಂಗಾಪುರ ಮೂಲದ ಕೃಷಿ ಉದ್ದಿಮೆ ಕಂಪೆನಿಯ ವಕ್ರದೃಷ್ಟಿ ಬಿದ್ದಿದೆ. ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿ ಮಾಡಬೇಕೋ ಬೇಡವೋ ಎಂಬ ಬಗ್ಗೆ ತಕರಾರು ಎದ್ದಿರುವಾಗಲೇ ಮತ್ತೂಂದು ಸವಾಲು ಎದುರಾಗಿದೆ. ‘ಅರವಣ’ ಎಂಬ ಹೆಸರಿನ ಹಕ್ಕುಸ್ವಾಮ್ಯ ತನ್ನದು ಎಂದು ಹೇಳಿಕೊಳ್ಳಲು ವಿಲ್ಮಾರ್ ಇಂಟರ್ನ್ಯಾಷನಲ್ ಎಂಬ ಕಂಪೆನಿ ಮುಂದಾಗಿದೆ. ಕಂಪೆನಿಯ ಕ್ಯುವಕ್ ಆಯಿಲ್ ಆ್ಯಂಡ್ ಗೆùನ್ಸ್ ಟ್ರೇಡಿಂಗ್ ಪಿಟಿಇ ಲಿಮಿಟೆಡ್ (Kuk Oil & Grrains Trading Pte Ltd) ಕೋಲ್ಕತಾದಲ್ಲಿರುವ ಟ್ರೇಡ್ಮಾರ್ಕ್ ನೋಂದಣಿ ಮಾಡಿಕೊಳ್ಳುವ ಕಚೇರಿಗೆ ಅರ್ಜಿ ಸಲ್ಲಿಸಿದೆ. ದೇಗುಲ ನೀಡುವ ‘ಅರವಣ’ ಪಾಯಸ ಪ್ರಸಾದದ ಹೆಸರು ತನ್ನ ಕಂಪೆನಿಯ ಉತ್ಪನ್ನಗಳ ಹೆಸರಿಗೆ ಸನಿಹವಾಗಿದೆ ಎನ್ನುವುದು ಸಿಂಗಾಪುರ ಸಂಸ್ಥೆಯ ವಾದ.
ಈ ಬಗ್ಗೆ ಮುನ್ನೆಚ್ಚರಿಕೆಯಾಗಿ ಕ್ಷತ್ರಿಯ ಕ್ಷೇಮ ಸಭಾ ಸಂಘಟನೆ ಪ್ರತಿ ದೂರು ನೀಡಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಭಾದ ಪ್ರಧಾನ ಕಾರ್ಯದರ್ಶಿ ಆತ್ಮಜ ವರ್ಮ ತಂಬುರಾನ್ “ಕೋಲ್ಕತಾದಲ್ಲಿರುವ ಸಭಾದ ಸದಸ್ಯರಿಗೆ ಮಾಹಿತಿ ನೀಡಿ ಸಿಂಗಾಪುರ ಕಂಪೆನಿಯ ಪ್ರಯತ್ನಕ್ಕೆ ತಡೆಯೊಡ್ಡುವಂತೆ ದೂರು ಸಲ್ಲಿಸಿದ್ದೇವೆ’ ಎಂದು ಹೇಳಿದ್ದಾರೆ. ಅಯ್ಯಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಆಯುಕ್ತ ಎನ್.ವಾಸು ಕೂಡ ಅಂಥ ಬೆಳವಣಿಗೆ ಮಂಡಳಿ ಗಮನಕ್ಕೆ ಬಂದಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು “ಮಲಯಾಳ ಮನೋರಮ’ ವರದಿ ಮಾಡಿದೆ. ಅರವಣ ಎನ್ನುವುದು ವಾಣಿಜ್ಯಿಕ ಚಟುವಟಿಕೆ ಅಲ್ಲದೇ ಇರುವುದರಿಂದ ಪೇಟೆಂಟ್ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿಲ್ಲ ಎಂದು ವಾಸು ತಿಳಿಸಿದ್ದಾರೆ. “ಅರವಣ ಎನ್ನುವುದು ಅಯ್ಯಪ್ಪ ಸ್ವಾಮಿಯ ಪ್ರಸಾದ. ಭಕ್ತರಿಗೆ ಅದೊಂದು ಆಶೀರ್ವಾದ ಇದ್ದಂತೆ. ಅದನ್ನು ವಿತರಿಸುವುದನ್ನು ವಾಣಿಜ್ಯಿಕ ಚಟುವಟಿಕೆಯ ಭಾಗ ಎಂದು ಪರಿಗಣಿಸಲಾಗದು’ ಎಂದು ಹೇಳಿದ್ದಾರೆ.
ವರದಿಗೆ ಸೂಚನೆ: ಇದೇ ವೇಳೆ ನ.5 ಮತ್ತು 6ರಂದು ಶಬರಿಮಲೆ ದೇಗುಲ ವ್ಯಾಪ್ತಿಯಲ್ಲಿ ಭದ್ರತೆಯಲ್ಲಿ ಲೋಪವಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತ್ರಿಶ್ಶೂರ್ ವಲಯದ ಐಜಿಪಿಗೆ ವರದಿ ನೀಡುವಂತೆ ಕೇರಳ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹಾರ ಸೂಚಿಸಿದ್ದಾರೆ.
ಹೈಕೋರ್ಟ್ ಆಕ್ಷೇಪ: ಅಕ್ಟೋಬರ್ನಲ್ಲಿ ನಡೆದಿದ್ದ ಅನಪೇಕ್ಷಿತ ಘಟನೆಗಳು ಸ್ವೀಕಾರಾರ್ಹವಲ್ಲ ಎಂದು ಕೇರಳ ಹೈಕೋರ್ಟ್ ಗುರುವಾರ ಹೇಳಿದೆ. ಬಂಧಿತನೊಬ್ಬ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ ಮಾಧ್ಯಮ ಸಿಬ್ಬಂದಿ ಮತ್ತು ನಿಜವಾದ ಭಕ್ತರನ್ನು ದೇಗುಲ ಆವರಣ ಪ್ರವೇಶಿಸದಂತೆ ತಡೆಯಲಾಗಿಲ್ಲ ಎಂದು ಕೇರಳ ಸರಕಾರ ಹೈಕೋರ್ಟ್ಗೆ ಅರಿಕೆ ಮಾಡಿದೆ.
‘ಅರವಣ ಪ್ರಸಾದ’; ಹಾಗೆಂದರೇನು?
‘ಅರವಣ’ ಎಂದರೆ ವಿಶೇಷ ರೀತಿಯ ಖೀರು ಅಥವಾ ಪಾಯಸ. ಕೇರಳದಲ್ಲಿರುವ ಎಲ್ಲಾ ದೇಗುಲಗಳಲ್ಲಿ ಈ ರೀತಿಯ ಪ್ರಸಾದ ಸಾಮಾನ್ಯ. ಶಬರಿಮಲೆ ದೇಗುಲದಲ್ಲಿ ಅದನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸುತ್ತಾರೆ. ಹೀಗಾಗಿ ಅದು ಹೆಚ್ಚಿನ ಜನಪ್ರಿಯತೆ ಪಡೆದಿದೆ. ಅಕ್ಕಿ, ತುಪ್ಪ, ಬೆಲ್ಲ, ಏಲಕ್ಕಿ, ಗೋಡಂಬಿ, ಒಣದ್ರಾಕ್ಷಿ, ತೆಂಗಿನ ಕಾಯಿಯನ್ನು ಬಳಕೆ ಮಾಡುತ್ತಾರೆ.
ಆದಾಯವೆಷ್ಟು?: ಪಾಯಸ ಪ್ರಸಾದ ಮಾರಾಟದಿಂದ ದೇಗುಲಕ್ಕೆ ವಾರ್ಷಿಕವಾಗಿ 100 ಕೋಟಿ ರೂ.ಆದಾಯವಿದೆ. ಇದರ ಜತೆಗೆ ದೇಗುಲದಲ್ಲಿ ನೀಡಲಾಗುವ ಅಪ್ಪವೂ ರುಚಿಕರ. ಅದರ ಮಾರಾಟದಿಂದಲೂ ಭಾರಿ ಲಾಭ ಉಂಟು. ವಾಣಿಜ್ಯಿಕವಾಗಿ ಇರುವ ಲಾಭವೇ ಸಿಂಗಾಪುರದ ಕಂಪೆನಿಗೆ ಕಣ್ಣು ಕುಕ್ಕಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ವಿಲ್ಮಾರ್ ಇಂಟರ್ನ್ಯಾಷನಲ್ ಬಗ್ಗೆ :1991ರಲ್ಲಿ ಅದು ಸ್ಥಾಪನೆಯಾಯಿತು. ಸಿಂಗಾಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಅದು ಕೃಷಿ ಉತ್ಪನ್ನಗಳ ವಹಿವಾಟು ನಡೆಸುತ್ತಿದೆ. ಕ್ವಾಕ್ ಖೂನ್ ಹಾಂಗ್ ಅದರ ಅಧ್ಯಕ್ಷರು. ಚೀನ, ಇಂಡೋನೇಷ್ಯಾ, ಭಾರತ, ವಿಯೆಟ್ನಾಂ, ಬಾಂಗ್ಲಾದೇಶ, ಘಾನಾ, ಐವರಿ ಕೋಸ್ಟ್, ದಕ್ಷಿಣ ಆಫ್ರಿಕಾ, ಉಗಾಂಡಾಗಳಲ್ಲಿ ವಹಿವಾಟು ಹೊಂದಿದೆ.
ಕಾನೂನು ತಜ್ಞರಲ್ಲಿ ವಿಭಿನ್ನ ಅಭಿಪ್ರಾಯ
ಹೊಸದಿಲ್ಲಿ: ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರಲ್ಲಿ ವಿಭಿನ್ನ ಅಭಿಪ್ರಾಯ ಕೇಳಿ ಬಂದಿದೆ. ಕೆಲವರು ಇದರ ಜಾರಿಗೆ ಇನ್ನಷ್ಟು ಕಾಲಾವಕಾಶ ಬೇಕಿದೆ ಎಂದರೆ, ಇನ್ನು ಕೆಲವರು ಸುಪ್ರೀಂಕೋರ್ಟ್ ತೀರ್ಪಿಗೆ ಕೇಂದ್ರ ಸರಕಾರ ಬದ್ಧವಾಗಿಲ್ಲ ಎಂದಿದ್ದಾರೆ. ಕೋರ್ಟ್ ತೀರ್ಪು ನೀಡಿದ ನಂತರ ಎರಡು ಬಾರಿ ದೇಗುಲ ತೆರೆದಿದ್ದರೂ, ತೀವ್ರ ಪ್ರತಿಭಟನೆಯಿಂದಾಗಿ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಹಿರಿಯ ವಕೀಲ ರಾಕೇಶ್ ದ್ವಿವೇದಿ ಹೇಳುವಂತೆ, ಸುಪ್ರೀಂಕೋರ್ಟ್ ತೀರ್ಪನ್ನು ಜನರು ಮನ್ನಿಸಿದ್ದಾರಾದರೂ, ಇಂತಹ ಸೂಕ್ಷ್ಮ ವಿಷಯದಲ್ಲಿ ಅನುಷ್ಠಾನಕ್ಕೆ ಹೆಚ್ಚಿನ ಸಮಯ ಅಗತ್ಯವಿರುತ್ತದೆ. ನ್ಯಾಯಾಂಗ ನಿಂದನೆಯಾಗಿದೆ ಎಂಬುದನ್ನು ನಿರ್ಧರಿಸುವುದಕ್ಕೂ ಮುನ್ನ ಸಾಕಷ್ಟು ಕಾಲಾವಕಾಶವನ್ನು ಜನರಿಗೆ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ. ಇನ್ನೊಂದೆಡೆ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಆಡಳಿತ ಪಕ್ಷವೇ ಪ್ರತಿಭಟನೆಯನ್ನು ಆಯೋಜಿಸುತ್ತಿದೆ. ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧವಾಗಿರುವುದಾಗಿ ಹೇಳುವ ಬಿಜೆಪಿ, ಕೇರಳದಲ್ಲಿ ವಿರೋಧಿಸುತ್ತಿದೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಸಂಸದ ಕೆ.ಟಿ.ಎಸ್ ತುಳಸಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ