ಏರ್ಪೋರ್ಟ್ನಲ್ಲಿ ತಡೆ;ಶಬರಿಮಲೆ ಪ್ರವೇಶಿಸಿಯೇ ವಾಪಸ್ ಎಂದ ತೃಪ್ತಿ !
Team Udayavani, Nov 16, 2018, 10:35 AM IST
ಕೊಚ್ಚಿ: ಶಬರಿ ಮಲೆ ದೇಗುಲ ಪ್ರವೇಶಕ್ಕೆಂದು ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಇತರ ಹೋರಾಟಗಾರ್ತಿಯರೊಂದಿಗೆ ಕೇರಳಕ್ಕೆ ಆಗಮಿಸಿದ್ದು, ಶುಕ್ರವಾರ ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣದ ಹೊರಗೆ ಅವರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸಾವಿರಾರು ಮಂದಿ ವಿಮಾನ ನಿಲ್ದಾಣದ ಹೊರಗೆ ಜಮಾವಣೆಗೊಂಡಿದ್ದು , ತೃಪ್ತಿಯನ್ನು ಹೊರ ಬರಲು ಬಿಡುವುದಿಲ್ಲ ಎನ್ನುವ ಘೋಷಣೆಗಳನ್ನು ಕೂಗುತ್ತಿದ್ದಾರೆ. ಉದ್ವಿಗ್ನ ಸ್ಥಿತಿ ಇರುವ ಕಾರಣ ತೃಪ್ತಿ ದೇಸಾಯಿ ಅವರು ವಿಮಾನ ನಿಲ್ದಾಣದಿಂದ ಹೊರ ಬಂದಿಲ್ಲ. ನಿಲ್ದಾಣದ ಒಳಗೆ ನೆಲದ ಮೇಲೆ ಕುಳಿತು ಬೆಳಗ್ಗಿನ ಉಪಾಹಾರ ಸೇವಿಸಿದ್ದಾರೆ.
ತೃಪ್ತಿ ಅವರಿದ್ದ ವಿಮಾನ ನಸುಕಿನ 4.30 ರ ವೇಳೆಗೆ ಕೊಚ್ಚಿಗೆ ಆಗಮಿಸಿದ್ದು, ಅದಾಗಲೆ ನಿಲ್ದಾಣದ ಹೊರಗೆ ನೂರಾರು ಮಂದಿ ಜಮಾವಣೆಗೊಂಡು ವಿರೋಧ ವ್ಯಕ್ತ ಪಡಿಸಿದ್ದಾರೆ.
ವಿಮಾನ ನಿಲ್ದಾಣ ಮತ್ತು ಶಬರಿ ಮಲೆ ದೇಗುಲದ ಸುತ್ತ ವ್ಯಾಪಕ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಇಂದು ದೇಗುಲದ ಬಾಗಿಲು ಮತ್ತೆ ತೆರೆಯಲಾಗುತ್ತಿದ್ದು, ದೇವಾಲಯ ಪ್ರವೇಶ ಮಾಡಬೇಕೆಂದು ತೃಪ್ತಿ ಅವರು ಆಗಮಿಸಿದ್ದರು.
ತೃಪ್ತಿ ಅವರು ದೇವಾಲಯ ಪ್ರವೇಶಿಸಲು ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ನಿರೀಕ್ಷಿಸಲಾಗುತ್ತಿದೆ.
ಅಯ್ಯಪ್ಪ ದರ್ಶನದ ಬಳಿಕವೇ ವಾಪಸ್!
ಸುದ್ದಿಗಾರರೊಂದಿಗೆ ಮಾತನಾಡಿದ ತೃಪ್ತಿ ದೇಸಾಯಿ ‘ನಮ್ಮನ್ನು ಪೊಲೀಸರು ಇನ್ನೊಂದು ಗೇಟ್ನ ಮೂಲಕ ಹೊರಗೆ ಕರೆತರಲು ಯತ್ನಿಸದರು ಆದರೆ ಅಲ್ಲಿಯೂ ಪ್ರತಿಭಟನಾಕಾರರು ಅಡ್ಡಬಂದರು. ಪ್ರತಿಭಟನಾಕಾರರೇ ಹೆದರಿದ್ದಾರೆ, ಎಲ್ಲಿಯಾದರೆ ನಾವು ನೀಲಕ್ಕಲ್ ತಲುಪಿದರೆ ದೇವಾಲಯಕ್ಕೆ ತೆರಳುತ್ತೇವೆ ಎಂದು. ಅವರು ನಮ್ಮನ್ನು ಹೆದರಿಸಲು ಯತ್ನಿಸುತ್ತಿದ್ದಾರಾ? ನಾವು ನಮಗೆ ಅಯ್ಯಪ್ಪ ದರ್ಶನ ಆಗದೆ ಹಿಂತಿರುಗುವ ಪ್ರಶ್ನೆಯೇ ಇಲ್ಲ ‘ಎಂದರು.