ಕರ್ತಾರ್ಪುರ ಕಾರಿಡಾರ್ ನಿರ್ಮಾಣಕ್ಕೆ ನಿರ್ಧಾರ
Team Udayavani, Nov 23, 2018, 6:00 AM IST
ಹೊಸದಿಲ್ಲಿ: ಪಂಜಾಬ್ನಲ್ಲಿ ಸಿಕ್ಖ್ ಧರ್ಮಗುರು ಗುರು ನಾನಕ್ ಪುಣ್ಯ ಸಮಾಧಿಗೆ ತೆರಳುವ ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕರ್ತಾರ್ಪುರ ಕಾರಿಡಾರ್ ನಿರ್ಮಾಣ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ದೇರಾ ಬಾಬಾ ನಾನಕ್ ಮಂದಿರದಿಂದ ಅಂತಾರಾಷ್ಟ್ರೀಯ ಗಡಿಯವರೆಗೆ ಈ ಕಾರಿಡಾರ್ ನಿರ್ಮಾಣ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಗಡಿಯಾಚೆಗೆ ಕರ್ತಾರ್ಪುರ ಸಾಹಿಬ್ ಇದ್ದು, ವರ್ಷಕ್ಕೊಮ್ಮೆ ಗುರು ನಾನಕ್ರ ಪುಣ್ಯತಿಥಿಯಂದು ಸಿಕ್ಖ್ರು ಈ ಪುಣ್ಯಸ್ಥಳಕ್ಕೆ ಭೇಟಿ ಮಾಡುತ್ತಾರೆ. ಗುರು ನಾನಕರ 550ನೇ ಜನ್ಮದಿನದಂದು ಕೇಂದ್ರ ಸರಕಾರ ಈ ನಿರ್ಧಾರ ಹೊರಡಿಸಿದೆ.
ಇದೇ ರೀತಿ ಗಡಿಯಾಚೆಗೂ ಕಾರಿಡಾರ್ ನಿರ್ಮಾಣ ಮಾಡುವಂತೆ ಪಾಕ್ ಸರಕಾರವನ್ನು ಕೇಂದ್ರ ಸರಕಾರ ಆಗ್ರಹಿಸಿದೆ. ಈಗಾಗಲೇ ನಿರ್ಧರಿಸಿರುವಂತೆ ಉನ್ನತ ಗುಣಮಟ್ಟದ ಟೆಲಿಸ್ಕೋಪ್ ಅನ್ನು ಅಂತಾ ರಾಷ್ಟ್ರೀಯ ಗಡಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಸಿಕ್ಖ್ರು ಟೆಲಿಸ್ಕೋಪ್ ಮೂಲಕ ಕರ್ತಾರ್ಪುರದಲ್ಲಿರುವ ಗುರು ನಾನಕರ ಪುಣ್ಯ ಸಮಾಧಿಯನ್ನು ಕಣ್ತುಂಬಿಕೊಳ್ಳಬಹುದು. ಗುರು ನಾನಕರ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಡೀ ವರ್ಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕ್ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಶಿ ಕರ್ತಾರ್ಪುರ ಕಾರಿಡಾರ್ ಅನ್ನು ತೆರೆಯುವುದಕ್ಕೆ ಸಿದ್ಧ ಎಂದು ಭಾರತಕ್ಕೆ ತಿಳಿಸಿದ್ದೇವೆ. ಭಾರತ ಇನ್ನಷ್ಟೇ ಇದಕ್ಕೆ ಪ್ರತಿಕ್ರಿಯೆ ನೀಡಬೇಕಿದೆ ಎಂದಿದ್ದಾರೆ. ಇದೇ ವೇಳೆ, ಸರಕಾರದ ನಿರ್ಧಾರವನ್ನು ಕಾಂಗ್ರೆಸ್, ಆಪ್, ಅಕಾಲಿ ದಳ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳೂ ಸ್ವಾಗತಿಸಿವೆ.