ಫಲಿತಾಂಶಕ್ಕೆ ಎರಡೇ ದಿನ; ವಿಜಯ ಗಣಿತ ಆರಂಭ
Team Udayavani, Dec 9, 2018, 9:00 AM IST
ಹೊಸದಿಲ್ಲಿ: ಐದು ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಎಲ್ಲ ರಾಜಕೀಯ ಪಕ್ಷಗಳೂ ಗೆಲುವು ನಮ್ಮದೇ ಎಂಬ ಆಶಾಭಾವನೆ ವ್ಯಕ್ತಪಡಿಸಿವೆ. ಶುಕ್ರವಾರ ಹೊರಬಿದ್ದ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶಗಳು ಏನೇ ಹೇಳಿದ್ದರೂ ಅದನ್ನು ಒಪ್ಪಲು ಸಿದ್ಧವಿರದ ನಾಯಕರು ಪರಸ್ಪರ ಕೆಸರೆರಚಾಟಕ್ಕೆ ಇಳಿದಿದ್ದಾರೆ.
ಮಧ್ಯಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿದ್ದರೆ, ಇನ್ನು ಕೆಲವು ಕಾಂಗ್ರೆಸ್ಗೆ ಮುನ್ನಡೆ ಎಂದಿವೆ. ಈ ಹಿನ್ನೆಲೆಯಲ್ಲಿ ಶನಿವಾರ ಮಾತನಾಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ನಾನು ಎಲ್ಲರಿಗಿಂತಲೂ ದೊಡ್ಡ ಸಮೀಕ್ಷೆಗಾರ. ನನಗೆ ಜನರ ನಾಡಿಮಿಡಿತವೂ ಗೊತ್ತು. ಫಲಿತಾಂಶ ಪ್ರಕಟದವರೆಗೆ ಕಾಯಿರಿ, ಬಿಜೆಪಿ ಭರ್ಜರಿ ಜಯ ಖಚಿತ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.
ಪಂಚರಾಜ್ಯಗಳೂ ನಮ್ಮ ಪಾಲು
ಇನ್ನೊಂದೆಡೆ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಾತನಾಡಿ, ಎಲ್ಲ 5 ರಾಜ್ಯಗಳಲ್ಲೂ ನಾವೇ ಗೆಲ್ಲುತ್ತೇವೆ. ಬಿಜೆಪಿ ವಿರುದ್ಧ ಜನರ ಸಿಟ್ಟು ಈ ಚುನಾವಣೆಯಲ್ಲಿ ಬಹಿರಂಗವಾಗಲಿದೆ. ಕಾಂಗ್ರೆಸ್ ನೀಡಿರುವ ನೀಲನಕ್ಷೆಯನ್ನು ಜನತೆ ಪ್ರೀತಿಯಿಂದ ಸ್ವೀಕರಿಸಿದೆ. ದರ ಏರಿಕೆ, ಆರ್ಥಿಕ ಅಧಃಪತನ, ರೈತರ ಸಂಕಷ್ಟಗಳು ಸೇರಿ 5 ವರ್ಷಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಇವೆಲ್ಲದಕ್ಕೂ ಜನರು ಉತ್ತರ ಬಯಸುತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್ ಗೆಲುವು ಶತಸ್ಸಿದ್ಧ ಎಂದಿದ್ದಾರೆ. ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹೊಟ್ ಅವರೂ ಸಮೀಕ್ಷೆಗಳ ಭವಿಷ್ಯ ದಿಂದ ಮುದಗೊಂಡಿದ್ದು, ಕಾಂಗ್ರೆಸ್ಗೆ ಜನರ ಆಶೀರ್ವಾದ ಖಚಿತ ಎಂದಿದ್ದಾರೆ.
ಮೋದಿ ಶಕ್ತಿ ನಿಮಗೆ ಗೊತ್ತಿಲ್ಲ
ಆದರೆ ಬಿಜೆಪಿ, 2014ರ ಅನಂತರ ನಡೆದ ಎಲ್ಲ ಚುನಾವಣೆಗಳಲ್ಲೂ ಸಮೀಕ್ಷೆ ಗಳು ಸುಳ್ಳಾಗಿವೆ. ಇವೂ ನಿಜವಾಗದು ಎಂದಿದೆ. ಕಾಂಗ್ರೆಸ್ ಖುಷಿಯಲ್ಲಿ ತೇಲಾಡುತ್ತಿದೆ. ಈ ಸಂಭ್ರಮ ಹೆಚ್ಚು ದಿನ ಉಳಿಯದು ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಲೇವಡಿ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ಈ ಹಿಂದೆಯೂ ಪ್ರಧಾನಿ ಮೋದಿ ಅವರು ಎಲ್ಲ ಮತಗಟ್ಟೆ ಸಮೀಕ್ಷೆಗಳನ್ನು ಮೀರಿ ಬಿಜೆಪಿ ಜಯ ಗಳಿಸುವಂತೆ ಮಾಡಿದ್ದಾರೆ. ಅವರ ಶಕ್ತಿಯನ್ನು ಹೀಗಳೆಯುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಗೆ ಭಯ ಎಂದ ಸಿಂಘ್ವಿ
ಚುನಾವಣೆ ಸೋಲು ಖಚಿತ ಗ್ರಹಿಸಿರುವ ಬಿಜೆಪಿ, ಜನರನ್ನು ಬೆದರಿಸಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದಾರೆ. ಸಮೀಕ್ಷೆಯ ಫಲಿತಾಂಶ ಹಾಗೂ ರಾಬರ್ಟ್ ವಾದ್ರಾ ಕಚೇರಿಗಳ ಮೇಲೆ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಈಗ ಚುನಾವಣೋತ್ತರ ಟೆಂಪಲ್ ರನ್!
ಚುನಾವಣೆ ಸಮೀಪಿಸುತ್ತಿದ್ದಂತೆ ಜಿದ್ದಿಗೆ ಬಿದ್ದವರಂತೆ “ಟೆಂಪಲ್ ರನ್’ ನಡೆಸಿದ ರಾಜಕೀಯ ಪಕ್ಷಗಳ ನಾಯಕರು ಈಗ ಫಲಿತಾಂಶದ ದಿನ (ಡಿ.11) ಸಮೀಪಿಸುತ್ತಿದ್ದಂತೆ ಮತ್ತೆ ದೇಗುಲಗಳತ್ತ ಮುಖ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಂತೂ ಪ್ರಸಿದ್ಧ ದೇಗುಲಗಳೆಲ್ಲ ಈಗಾಗಲೇ ವಿಶೇಷ ಪೂಜೆಗಳಿಗೆ ಬುಕ್ ಆಗಿವೆ. ಅಗಲ್ ಮಾಲ್ವಾದಲ್ಲಿನ ಬಾಗ್ಲಮುಖೀ ದೇಗುಲ ಮತ್ತು ದಾಟಿಯಾದಲ್ಲಿರುವ ಪೀತಾಂಬರ ಪೀಠಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢದಿಂದ ವಿವಿಧ ರಾಜಕೀಯ ಪಕ್ಷಗಳ ನಾಯಕರು ದೌಡಾಯಿಸುತ್ತಿದ್ದಾರೆ. ಆರಂಭದಲ್ಲಿ ಪಕ್ಷದ ಟಿಕೆಟ್ ಸಿಗ ಲೆಂದು ಇಲ್ಲಿ ಬಂದು ಪ್ರಾರ್ಥಿಸಿ ಹೋದವರು, ಈಗ ಚುನಾವಣೆಯಲ್ಲಿ ಜಯಮಾಲೆ ನನ್ನ ಪಾಲಾಗಲಿ ಎಂದು ಪ್ರಾರ್ಥಿಸಿಕೊಳ್ಳಲು ಧಾವಿಸುತ್ತಿದ್ದಾರೆ. ಬಾಗ್ಲಮುಖೀ ಮಾತಾ ಮಂದಿರದಲ್ಲಿ ಓರ್ವ ಅಭ್ಯರ್ಥಿಯ ಗೆಲುವಿಗೆ 20 ಪಂಡಿತರು 7 ಗಂಟೆ ಶ್ಲೋಕಗಳನ್ನು ಹೇಳಬೇಕು. ಒಂದು ದಿನದ ಈ ಪೂಜೆಗೆ 30 ಸಾವಿರ ರೂ. ವೆಚ್ಚವಾಗುತ್ತದೆ. ಕೆಲವರಂತೂ 5 ದಿನಗಳ ಪೂಜೆ ಯನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ ಪಂಡಿತ್ ಆಶಿಷ್ ಕಸೇರಾ.
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ನಮ್ಮ ಪಕ್ಷವು ಈ ಮೂರೂ ರಾಜ್ಯಗಳಲ್ಲಿ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡಿದೆ. ಜನರ ಆಶೀರ್ವಾದ ನಮ್ಮ ಮೇಲಿದೆ.
- ತಮಿಳ್ಸಾಯಿ ಸೌಂದರರಾಜನ್, ತಮಿಳುನಾಡು ಬಿಜೆಪಿ ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು