ಕೇಂದ್ರ ಸಚಿವ ಸ್ಥಾನಕ್ಕೆ ಉಪೇಂದ್ರ ಕುಶ್ವಾಹಾ ರಾಜೀನಾಮೆ ಸಲ್ಲಿಕೆ
Team Udayavani, Dec 11, 2018, 6:00 AM IST
ಹೊಸದಿಲ್ಲಿ: ಎನ್ಡಿಎ ಭಾಗವಾಗಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷ(ಆರ್ಎಲ್ಎಸ್ಪಿ)ದ ನಾಯಕ ಉಪೇಂದ್ರ ಕುಶ್ವಾಹಾ ಸೋಮವಾರ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ, ಎನ್ಡಿಎಯಿಂದಲೂ ಹೊರಬರುತ್ತಿರುವುದಾಗಿ ಅವರು ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಕೇಂದ್ರ ಸಂಪುಟವನ್ನು ಕೇವಲ ರಬ್ಬರ್ ಸ್ಟಾಂಪ್ನಂತೆ ಬಳಸಿಕೊಳ್ಳುತ್ತಿದ್ದಾರೆ ಹಾಗೂ ಹಿಂದುಳಿದ ವರ್ಗಗಳಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕುಶ್ವಾಹಾ, ಬಿಹಾರದಲ್ಲಿ ಕಾಂಗ್ರೆಸ್- ಆರ್ಜೆಡಿ ಮೈತ್ರಿ ಜೊತೆ ಕೈ ಜೋಡಿಸುವ ಸುಳಿವು ನೀಡಿದ್ದಾರೆ. ಇದೇ ವೇಳೆ, ಬಿಹಾರದಲ್ಲಿ ಮುಂದಿನ ಚುನಾ ವಣೆಯಲ್ಲಿ ಬಿಜೆಪಿ ಒಂದೇ ಒಂದು ಕ್ಷೇತ್ರ ದಲ್ಲೂ ಗೆಲ್ಲುವುದಿಲ್ಲ. 2014ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರ ಹಿನ್ನೆಲೆ ನೋಡಿ, ಅವರು ಹಿಂದು ಳಿದ ವರ್ಗಗಳ ಅಭಿ ವೃದ್ಧಿಗೆ ಶ್ರಮಿಸುತ್ತಾರೆ ಎಂದು ಭಾವಿಸಿ ಜನ ಮತ ಹಾಕಿದ್ದರು. ಆದರೆ, ಮೋದಿ ಎಲ್ಲರಿಗೂ ದ್ರೋಹ ಮಾಡಿದ್ದಾರೆ. ಆರೆಸ್ಸೆಸ್ನ ಅಜೆಂಡಾ ಪಾಲಿಸಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದಿದ್ದಾರೆ.
ಇಬ್ಬರು ಸಂಸದರು ಮತ್ತು ಇಬ್ಬರು ಶಾಸಕರನ್ನು ಹೊಂದಿರುವ ಆರ್ ಎಲ್ಎಸ್ಪಿ ಪಕ್ಷಕ್ಕೆ 2019ರ ಲೋಕಸಭೆ ಚುನಾ ವಣೆಯಲ್ಲಿ 2ಕ್ಕಿಂತ ಹೆಚ್ಚು ಸೀಟುಗಳನ್ನು ನೀಡುವುದಿಲ್ಲ ಎಂದು ಬಿಜೆಪಿ ಇತ್ತೀಚೆಗೆ ಸ್ಪಷ್ಟ ಪಡಿಸಿತ್ತು. ಅಲ್ಲದೆ, ನಿತೀಶ್ ಕುಮಾರ್ರ ಜೆಡಿಯು ಹಾಗೂ ಬಿಜೆಪಿ ಸಮಾನ ಸೀಟುಗಳನ್ನು ಹಂಚಿಕೊಳ್ಳಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದರು. ನಿತೀಶ್ ಜತೆ ವೈಮನಸ್ಸು ಹೊಂದಿದ್ದ ಕುಶ್ವಾಹಾರನ್ನು ಈ ನಿರ್ಧಾರವು ಕೆರಳಿಸಿತ್ತು.
ಈ ನಡುವೆ, ಕುಶ್ವಾಹಾ ನಿರ್ಧಾರವನ್ನು ಕಾಂಗ್ರೆಸ್ ಹಾಗೂ ಆರ್ಜೆಡಿ ಸ್ವಾಗತಿಸಿವೆ. ಸತ್ಯ ಹೇಳಲು ಧೈರ್ಯ ಮಾಡಿದ ಕುಶ್ವಾಹಾ ಅವರಿಗೆ ಧನ್ಯವಾದಗಳು. ನಾವೆಲ್ಲರೂ ಸೇರಿ ಹೊಸ ಭಾರತವನ್ನು ಸೃಷ್ಟಿಸೋಣ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇವಾಲಾ ಟ್ವೀಟ್ ಮಾಡಿದ್ದಾರೆ.