ಆರ್ಬಿಐ ಸ್ವಾಯತ್ತತೆಗೆ ಬದ್ಧ
Team Udayavani, Dec 13, 2018, 6:00 AM IST
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ನ ಸ್ವಾಯತ್ತತೆ, ವಿಶ್ವಾಸಾರ್ಹತೆ ಮತ್ತು ಸಮಗ್ರತೆ ಯನ್ನು ಕಾಪಾಡಲು ನಾನು ಪ್ರಯತ್ನಿಸುತ್ತೇನೆ ಎಂದು ಆರ್ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಸರ್ಕಾರವೂ ಸೇರಿದಂತೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತೇನೆ. ಸಮಯಕ್ಕೆ ಸರಿಯಾಗಿ ಆರ್ಥಿಕತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತೇನೆ ಮತ್ತು ಇದೆಲ್ಲದಕ್ಕೂ ಮೊದಲ ಹಂತವಾಗಿ ರಾಷ್ಟ್ರೀಕೃತ ಬ್ಯಾಂಕ್ಗಳ ಮುಖ್ಯಸ್ಥರ ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಊರ್ಜಿತ್ ಪಟೇಲ್ ರಾಜೀನಾಮೆಯಿಂದ ತೆರವಾದ ಆರ್ಬಿಐಗೆ 25ನೇ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ದಾಸ್, ಆರ್ಬಿಐ ಉತ್ತಮ, ಐತಿಹಾಸಿಕ ಸಂಸ್ಥೆ. ಸರ್ಕಾರವು ಪ್ರಮುಖ ಪಾಲುದಾರ. ಸರ್ಕಾರ ಇಡೀ ದೇಶವನ್ನು ನಡೆಸುತ್ತದೆ ಎಂದಿದ್ದಾರೆ. ಆದರೆ ಸರ್ಕಾರ ಮತ್ತು ಆರ್ಬಿಐ ಮಧ್ಯೆ ಎದ್ದಿರುವ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಷೇರುಪೇಟೆ ಚೇತರಿಕೆ: ದಾಸ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮುಂಬೈ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಬುಧವಾರ ಸೆನ್ಸೆಕ್ಸ್ 629.06 ಅಂಕ ಏರಿಕೆಯಾಗಿದ್ದು, 35, 779.07ಕ್ಕೆ ತಲುಪಿದೆ. ಇದೇ ವೇಳೆ ನಿಫ್ಟಿ ಕೂಡ 188.45 ಅಂಕ ಏರಿಕೆಯಾಗಿ, 10,737.60 ಕ್ಕೆ ತಲುಪಿದೆ.