ಮುಂಬಯಿ : ಬಹುಮಹಡಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ; 5 ಬಲಿ
Team Udayavani, Dec 28, 2018, 9:43 AM IST
ಮುಂಬಯಿ: ನಗರದ ಚೆಂಬೂರ್ನ ತಿಲಕ್ನಗರ್ ಗಣೇಶ್ ಗಾರ್ಡನ್ ಪ್ರದೇಶದಲ್ಲಿ ಗುರುವಾರ ರಾತ್ರಿ ಬಹುಮಹಡಿ ವಸತಿ ಕಟ್ಟಡವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ಐವರು ದಾರುಣವಾಗಿ ಸಾವನ್ನಪ್ಪಿದ್ದಾರೆ.ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ದುರ್ದೈವಿಗಳ ಪೈಕಿ ನಾಲ್ವರು ಹಿರಿಯ ನಾಗರಿಕರಾಗಿದ್ದಾರೆ. ಒಂದೇ ಮನೆಯಲ್ಲಿ ಸಿಲುಕಿ ಸುಟ್ಟ ಗಾಯಗಳಿಗೊಳಗಾದ ಸುನೀತಾ ಜೋಷಿ (72), ಬಾಲಚಂದ್ರನ್ ಜೋಷಿ(72)ಸುಮನ್ ಶ್ರೀನಿವಾಸನ್ ಜೋಷಿ (83), ಸರಳಾ ಸುರೇಶ್ಗಂಗರ್(52) ಮತ್ತು ಲಕ್ಷ್ಮಿ ಬೆನ್ ಪ್ರೇಮ್ ಜಿ ಗಂಗರ್(83) ಎಂದು ತಿಳಿದು ಬಂದಿದೆ.
ಗಂಭೀರವಾಗಿ ಸುಟ್ಟ ಗಾಯಗಳಿಗೊಳಗಾಗಿದ್ದ ಐವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
16 ಅಂತಸ್ಥಿನ ಕಟ್ಟಡದ 11 ನೇ ಅಂತಸ್ಥಿನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿತ್ತು. ವಿಷಯ ತಿಳಿದು 15 ಕ್ಕೂ ಹೆಚ್ಚು ಅಗ್ನಿಶಾಮಕದಳದ ವಾಹನಗಳೊಂದಿಗೆ ಸಿಬಂದಿಗಳು ಆಗಮಿಸಿ ರಕ್ಷಣಾ ಕಾರ್ಯ ನಡೆಸಿ ಬೆಂಕಿಯನ್ನು ತಹಬದಿಗೆ ತಂದರು.
ಬೆಂಕಿ ಕಾಣಿಸಿಕೊಳ್ಳುವ ಮುನ್ನ ಸ್ಫೋಟದ ಸದ್ದು ಕೇಳಿ ಬಂದಿದ್ದು ಗ್ಯಾಸ್ ಸಿಲಿಂಡರ್ ಸಿಡಿದು ಅವಘಡ ಸಂಭವಿಸಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯದ ವೇಳೆ ಓರ್ವ ಅಗ್ನಿ ಶಾಮಕ ದಳದ ಸಿಬಂದಿಯೂ ಗಾಯಗೊಂಡಿದ್ದಾರೆ.