ಸ್ವಂತ ಮಕ್ಕಳಿಬ್ಬರನ್ನು ಹೊಡೆದು ಕೊಂದ ಕುಡುಕ ಅಪ್ಪ ಅರೆಸ್ಟ್
Team Udayavani, Jan 11, 2019, 10:59 AM IST
ಜೈಪುರ : ದಿನಪೂರ್ತಿ ಕುಡಿದುಕೊಂಡೇ ಇರುವ 30ರ ಹರೆಯದ ರಮೇಶ್ ವಧೇರಾ ಎಂಬ ವ್ಯಕ್ತಿ ನಿನ್ನೆ ಗುರುವಾರ ತನ್ನ ಐದು ವರ್ಷದ ಮಗಳು ಕುಷ್ಬಾ ಮತ್ತು ಮೂರು ವರ್ಷದ ಮಗ ರಾಜು ವನ್ನು ಕುಡಿದ ಅಮಲಿನಲ್ಲಿ ಹೊಡೆದು ಸಾಯಿಸಿದ ಅಮಾನುಷ ಘಟನೆ ವರದಿಯಾಗಿದೆ.
ಮಕ್ಕಳನ್ನು ಹೊಡೆದು ಕೊಂದ ವೇಳೆ ವಧೇರಾನ ಪತ್ನಿ ಮನೆಯಲ್ಲಿರಲಿಲ್ಲ; ಆಕೆ ತನ್ನ ತವರಿಗೆ ಹೋಗಿದ್ದಳು. ಮಕ್ಕಳು ತಮ್ಮ ಚಿಕ್ಕಪ್ಪನ ಮನೆಯಲ್ಲಿದ್ದರು.
ವಧೇರ ತನ್ನ ಮಕ್ಕಳನ್ನು ಕೊಲ್ಲುವ ಉದ್ದೇಶದಿಂದಲೇ ತನ್ನ ಮನೆಗೆ ಕರೆದೊಯ್ದು ಕುಡಿದ ಅಮಲಿನಲ್ಲಿ ಅವರನ್ನು ಹೊಡೆದು ಚಚ್ಚಿದ. ಗಂಭೀರ ಸ್ಥಿತಿಯಲ್ಲಿದ್ದ ಮಕ್ಕಳನ್ನು ಝಡೋಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಯ್ಯಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ಮಕ್ಕಳ ಕೊಲೆಗೈದ ವಧೇರಾನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಪತ್ನಿಯ ಜತೆಗೆ ದಿನನಿತ್ಯವೆಂಬಂತೆ ಕುಡಿದು ಜಗಳವಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಂತ ಮಕ್ಕಳನ್ನು ಕೊಂದ ವಧೇರಾನನ್ನು ಇಂದು ಶುಕ್ರವಾರ ಕೋರ್ಟಿಗೆ ಹಾಜರುಪಡಿಸಲಾಗಿದೆ.