ಮೋದಿ ಆ್ಯಪ್ನಲ್ಲಿ ಮಹಾ ಘಟಬಂಧನ ಕುರಿತ ಪ್ರಶ್ನೆ!
Team Udayavani, Jan 15, 2019, 12:30 AM IST
ಹೊಸದಿಲ್ಲಿ: ಮಹಾಘಟಬಂಧನ ಅಥವಾ ವಿಪಕ್ಷಗಳ ಒಕ್ಕೂಟವು ನಿಮ್ಮ ಕ್ಷೇತ್ರದಲ್ಲಿ ಪರಿಣಾಮ ಉಂಟು ಮಾಡಲಿದೆಯೇ ಎಂಬ ಪ್ರಶ್ನೆಯನ್ನು ಸ್ವತಃ ಬಿಜೆಪಿ ಕೇಳುತ್ತಿದೆ. ನಮೋ ಅಪ್ಲಿಕೇಶನ್ನಲ್ಲಿ ಜನರ ನಾಡಿ ಮಿಡಿತ ಅರಿಯುವ ಪ್ರಶ್ನಾವಳಿಯನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ ಮಹಾಘಟಬಂಧನ ಕುರಿತೂ ಪ್ರಶ್ನೆ ಇದೆ.
ಈ ಸಮೀಕ್ಷೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಟ್ವಿಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಸಮೀಕ್ಷೆಯಲ್ಲಿ ಹಲವು ಪ್ರಶ್ನೆಗಳಿದ್ದು, ರಾಜ್ಯ, ಕ್ಷೇತ್ರ, ಕೇಂದ್ರ ಸರಕಾರ ವಿವಿಧ ವಲಯಗಳಲ್ಲಿ ಸಾಧಿಸಿದ ಪ್ರಗತಿ, ಭ್ರಷ್ಟಾಚಾರ ಮುಕ್ತ ಆಡಳಿತ, ಸ್ವತ್ಛ ಭಾರತ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರಶ್ನೆ ಕೇಳಲಾಗಿದೆ.
ಈ ಪೈಕಿ ಕೊನೆಯ ಪ್ರಶ್ನೆ ಮಹಾಘಟಬಂಧನದ ಕುರಿತಾಗಿದೆ. ಇತ್ತೀಚೆಗೆ ಬಿಜೆಪಿಗೆ ಪರ್ಯಾಯವಾಗಿ ಎಸ್ಪಿ-ಬಿಎಸ್ಪಿ ಒಕ್ಕೂಟ ರಚಿಸಿಕೊಂಡಿರುವುದು ಈ ಪ್ರಶ್ನೆಗೆ ಪ್ರೇರಕವಾಗಿದೆ. ಜತೆಗೆ, ಇದಕ್ಕೆ ನೀವು ಪ್ರತಿಕ್ರಿಯೆ ನೀಡುವುದರಿಂದ ನಮಗೆ ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ ಎಂದೂ ಪ್ರಧಾನಿ ಹೇಳಿದ್ದಾರೆ.