ದೇಗುಲ ಪ್ರವೇಶಿಸಿದ್ದಕ್ಕೆ ಅತ್ತೆಯಿಂದಲೇ ಥಳಿತ
Team Udayavani, Jan 16, 2019, 3:58 AM IST
ತಿರುವನಂತಪುರ/ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶ ಮಾಡಿದ್ದ ಕನಕದುರ್ಗಾ (44) ಅವರ ಮೇಲೆ ಅತ್ತೆಯಿಂದಲೇ ಹಲ್ಲೆ ನಡೆದಿದೆ. 2 ವಾರಗಳ ಅಜ್ಞಾತವಾಸದ ಬಳಿಕ ಮಂಗಳವಾರ ಬೆಳಗ್ಗೆ ಕನಕದುರ್ಗಾ ಮಲಪ್ಪುರಂ ಜಿಲ್ಲೆಯಲ್ಲಿರುವ ಪೆರಿಂತಾಲ್ವುನ್ನಾ ಎಂಬಲ್ಲಿರುವ ತಮ್ಮ ಮನೆಗೆ ತೆರಳಿದ್ದು, ಆ ಸಂದರ್ಭದಲ್ಲಿ ದೇಗುಲ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಮನೆಯಲ್ಲಿರುವ ಇತರ ಸದಸ್ಯರ ಜತೆಗೆ ವಾಗ್ವಾದವೂ ಆಯಿತು. ಒಂದು ಹಂತದಲ್ಲಿ ಅತ್ತೆ (ಪತಿಯ ತಾಯಿ) ಕನಕದುರ್ಗಾಗೆ ಹಲ್ಲೆ ನಡೆಸಿದರು. ಇದರಿಂದಾಗಿ ಅವರ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಸುದ್ದಿವಾಹಿನಿಗಳ ಜತೆಗೆ ಮಾತನಾಡಿದ ಕನಕದುರ್ಗಾ ‘ನನ್ನ ಅತ್ತೆ ಮರದ ತುಂಡಿನಿಂದ ಹಲ್ಲೆ ಮಾಡಿದ್ದಾರೆ’ ಎಂದು ಹೇಳಿದ್ದಾರೆ. ದೇಗುಲ ಪ್ರವೇಶ ಮಾಡಿದ್ದನ್ನು ಕನಕದುರ್ಗಾ ಕುಟುಂಬ ವರ್ಗ ಈಗಾಗಲೇ ವಿರೋಧಿಸಿದೆ. ಇದಾದ ಸ್ವಲ್ಪ ಹೊತ್ತಲ್ಲೇ ಅವರ ಅತ್ತೆಯೂ ಆಸ್ಪತ್ರೆಗೆ ದಾಖಲಾಗಿದ್ದು, ಸೊಸೆಯಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.
22ರಿಂದ ವಿಚಾರಣೆ ಅಸಾಧ್ಯ?: ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ಜ.22ರಿಂದ ಶುರುವಾಗುವುದು ಅಸಾಧ್ಯ ಎನ್ನಲಾಗಿದೆ. ನ್ಯಾಯಪೀಠದಲ್ಲಿರುವ ಮಹಿಳಾ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ವೈದ್ಯಕೀಯ ರಜೆಯಲ್ಲಿ ತೆರಳಿರುವ ಕಾರಣ ವಿಚಾರಣೆ ವಿಳಂಬವಾಗಲಿದೆ ಎಂದು ಸಿಜೆಐ ನೇತೃತ್ವದ ಪೀಠ ಹೇಳಿದೆ.